Monday, May 6, 2024
Homeರಾಜ್ಯಕಲ್ಯಾಣ ಕರ್ನಾಟಕದಲ್ಲಿ ಕಮಲ ಅರಳಿಸುತ್ತಾರಾ ಜನಾರ್ದನ ರೆಡ್ಡಿ..?

ಕಲ್ಯಾಣ ಕರ್ನಾಟಕದಲ್ಲಿ ಕಮಲ ಅರಳಿಸುತ್ತಾರಾ ಜನಾರ್ದನ ರೆಡ್ಡಿ..?

ಬೆಂಗಳೂರು,ಮಾ.26- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ರಾಜ್ಯ ಬಿಜೆಪಿಗೆ ದೊಡ್ಡಮಟ್ಟದ ಡ್ಯಾಮೇಜ್ ಆಗಿತ್ತು. ಅದೇ ರೀತಿಯ ದೊಡ್ಡ ಮಟ್ಟದ ಡ್ಯಾಮೇಜ್ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದಾಗ ಆಗದೇ ಇದ್ದರೂ, ಕಲ್ಯಾಣ ಕರ್ನಾಟಕ ಭಾಗದ ಕೆಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಸಫಲವಾಗಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳ ಘೋಷಣೆ ಜೊತೆಗೆ ಜನಾರ್ದನ ರೆಡ್ಡಿ ಪಕ್ಷವೂ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದ್ದು, ಈಗ ರೆಡ್ಡಿ ಪಕ್ಷ ಬಿಜೆಪಿಯ ಜೊತೆ ವಿಲೀನವಾಗಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಆಗಬಹುದಾಗಿದ್ದ ಹಿನ್ನಡೆ ತದಂತಾಗಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಮತಗಳ ವಿಭಜನೆಯಾಗುವುದನ್ನು ತಡೆಯುವ ಮಾಸ್ಟರ್ ಪ್ಲಾನ್‍ನ ಭಾಗವಾಗಿ ಜನಾರ್ದನರೆಡ್ಡಿ ಘರ್ ವಾಪ್ಸಿ ಮಾಡಿಸುವಲ್ಲಿ ಬಿಜೆಪಿ ಸಫಲವಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಬಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡುವಲ್ಲಿಯೂ ಸಕ್ಸಸ್ ಆಗಿದೆ.

ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದ ಕೆಆರ್‍ಪಿಪಿ:
ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯದ ನಿರ್ಬಂಧವಿದುದ್ದರಿಂದ ಕೊಪ್ಪಳದ ಗಂಗಾವತಿ ಕ್ಷೇತ್ರವನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡು ವಿಧಾನಸಭಾ ಚುನಾವಣಾ ಕಣಕ್ಕಿಳಿದರು. 224 ಕ್ಷೇತ್ರಗಳಲ್ಲಿ 46 ಕ್ಷೇತ್ರಗಳಿಗೆ ಮಾತ್ರ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲುವ ಜೊತೆಗೆ ಹಾಲಿ ಬಿಜೆಪಿ ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದರು. ಪಕ್ಷ ಒಂದೇ ಸ್ಥಾನ ಗೆದ್ದರೂ ಪತ್ನಿ ಲಕ್ಷ್ಮಿ ಅರುಣಾ ಸ್ರ್ಪಧಿಸಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ 48577 ಮತ ಪಡೆದು ಎರಡನೇ ಸ್ಥಾನಗಳಿಸಿದರು. ಇಲ್ಲೂ ಬಿಜೆಪಿಗೆ 3ನೇ ಸ್ಥಾನ ದಕ್ಕುವಂತಾಯಿತು.

ಹುನಗುಂದದಲ್ಲಿ 33790, ಸಂಡೂರಿನಲ್ಲಿ 31375, ಲಿಂಗಸಗೂರಿನಲ್ಲಿ 13764, ನಾಗಠಾಣದಲ್ಲಿ 10770 ಮತಗಳನ್ನು ಪಡೆದು ಬಿಜೆಪಿಯ ಕೆಲ ಅಭ್ಯರ್ಥಿಗಳ ಸೋಲಿಗೂ ಕಾರಣವಾಗಿತ್ತು. ಇನ್ನು ಹರಪನಹಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಎಂ ಪಿ ಲತಾ ಮಲ್ಲಿಕಾರ್ಜುನ್ ಅವರು ಜನಾರ್ದನ ರೆಡ್ಡಿ ಅವರ ಇನ್ನೊಬ್ಬ ಸಹೋದರ ಜಿ.ಕರುಣಾಕರ ರೆಡ್ಡಿ(ಬಿಜೆಪಿ) ವಿರುದ್ಧ 13845 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಲತಾ ಮಲ್ಲಿಕಾರ್ಜುನ್‍ಗೆ ಕೆಆರ್‍ಪಿಪಿ ಬೆಂಬಲ ನೀಡಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.

ರೆಡ್ಡಿ ಕಾರಣದಿಂದಾಗಿಯೇ ಅವರ ಆಪ್ತ ಸ್ನೇಹಿತ ಬಿ.ಶ್ರೀರಾಮುಲು, ಸಹೋದರರಾದ ಕರುಣಾಕರರೆಡ್ಡಿ, ಸೋಮಶೇಖರ ರೆಡ್ಡಿ, ರಾಮುಲು ಅಳಿಯ ಸುರೇಶ್ ಬಾಬು ಸೋತಿದ್ದು, ರೆಡ್ಡಿ ಸ್ಥಾಪಿತ ಕೆಆರ್‍ಪಿಪಿ ಪಕ್ಷ ಕನಿಷ್ಠ 8-10 ಕ್ಷೇತ್ರಗಳಲ್ಲಿ ಬಿಜೆಪಿಗೆ ಡ್ಯಾಮೇಜ್ ಮಾಡಿತ್ತು ಎನ್ನಲಾಗಿದೆ.

ಕೆಆರ್‍ಪಿಪಿ ವಿಲೀನದಿಂದ ಬಿಜೆಪಿಗೆ ಬಲ:
ಇದೀಗ ಪಕ್ಷದ ಏಕೈಕ ಶಾಸಕ ಜನಾರ್ದನ ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿ ತನ್ನ ಬೆಂಬಲಿಗರ ಜೊತೆಗೆ ಬಂದಿದ್ದಾರೆ. ಸಹಜವಾಗಿ ಕಲ್ಯಾಣ ಕರ್ನಾಟಕ ವಿಶೇಷವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯ ಚಟುವಟಿಕೆ ಚುರುಕಾಗಿದ್ದ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚಿನ ಬಲ ಸಿಕ್ಕಂತಾಗಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಗಮನ ಕೇಂದ್ರೀಕರಿಸಿ ಜನಾರ್ದನ ರೆಡ್ಡಿ ರಾಜಕಾರಣ ಮಾಡುತ್ತಿದ್ದು, 20-30 ವಿಧಾನಸಭೆ ಕ್ಷೇತ್ರಗಳಲ್ಲಿ ನಿಕಟ ಸಂಪರ್ಕ ಹೊಂದಿದ್ದಾರೆ, ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಕ್ಷೇತ್ರದಲ್ಲಿ ಪ್ರಭಾವ ಹೊಂದಿದ್ದಾರೆ, ಈ ಭಾಗಗಳಲ್ಲಿ ಅವರ ವರ್ಚಸ್ಸಿನಿಂದ ಬಿಜೆಪಿಗೆ ಲಾಭ ಆಗಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಪರ ಲಿಂಗಾಯತ, ಅಹಿಂದ ಮತ ಕ್ರೋಢೀಕರಣಗೊಂಡಿದ್ದವು, ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿ ನಿರ್ಲಕ್ಷಿಸಿ ಬೆಲೆ ತೆತ್ತಿದ್ದನ್ನು ಬಿಜೆಪಿ ನಾಯಕರು ಮರೆತಿಲ್ಲ. ಹಾಗಾಗಿ ಜನಾರ್ದನ ರೆಡ್ಡಿ ಅಸ್ತ್ರದೊಂದಿಗೆ ಕಲ್ಯಾಣ ಕರ್ನಾಟಕದಲ್ಲಿ ಪಾರಮ್ಯ ಮೆರೆಯಲು ಬಿಜೆಪಿ ರೆಡ್ಡಿ ಅವರನ್ನು ಕರೆ ತಂದಿದೆ ಎನ್ನಲಾಗುತ್ತಿದೆ.

ಸದ್ಯ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ಕ್ಷೇತ್ರಗಳು ಬರಲಿದ್ದು, ಈ ಭಾಗದಲ್ಲಿ ಎಲ್ಲ ಕಡೆ ಜನಾರ್ದನ ರೆಡ್ಡಿಗೆ ಬೆಂಬಲಿಗರು ಇದ್ದರೂ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವಷ್ಟರ ಮಟ್ಟಿಗೆ ರೆಡ್ಡಿ ಹಿಡಿತ ಇದೆ. ಹಾಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರುವ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಬಿಜೆಪಿಗೆ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ದೊಡ್ಡ ಮಟ್ಟದ ಧನಾತ್ಮಕ ಅಂಶವಾಗಿದೆ ಎನ್ನಲಾಗುತ್ತಿದೆ.

ರಾಮ ಜನ್ಮಭೂಮಿ ಆಂದೋಲನದಲ್ಲಿ ರೆಡ್ಡಿ:
ರಾಮಜನ್ಮಭೂಮಿ ಆಂದೋಲನದ ಮೂಲಕ ಜನಾರ್ದನ ರೆಡ್ಡಿ ಬಿಜೆಪಿ ಜೊತೆ ಗುರುತಿಸಿಕೊಂಡರು. 1999ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸುಷ್ಮಾ ಸ್ವರಾಜ್ ಸ್ರ್ಪಧಿಸಿದಾಗ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ರಾಜಕೀಯವಾಗಿ ಮುನ್ನಲೆಗೆ ಬಂದರು. 2006ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಪಾತ್ರ ವಹಿಸಿದರು.

ನಂತರ 2008ರಲ್ಲಿ ಬಿಜೆಪಿ 110 ಸ್ಥಾನ ಗಳಿಸಿದಾಗ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸೆಪ್ಟೆಂಬರ್ 2011ರಲ್ಲಿ ಸಿಬಿಐ ಬಂಧಿಸಿದಾಗಿನಿಂದ, ರೆಡ್ಡಿ ಅವರಿಂದ ಬಿಜೆಪಿ ದೂರವಿತ್ತು.

2015ರಿಂದ ಜಾಮೀನಿನ ಮೇಲೆ ಹೊರಗಿದ್ದು, 2018ರಲ್ಲಿ ಮತ್ತು 2023ರ ಅಸೆಂಬ್ಲಿ ಚುನಾವಣೆಯ ಮೊದಲು ಬಿಜೆಪಿಗೆ ಮರಳಲು ಪ್ರಯತ್ನಿಸಿದರು. ಅವರ ಪ್ರಯತ್ನಗಳು ವಿಫಲವಾದ ನಂತರ 2022ರಲ್ಲಿ ಸ್ವತಂತ್ರ ಪಕ್ಷ ಪ್ರಾರಂಭಿಸಿದ್ದರು. ಕೇವಲ 15 ತಿಂಗಳಿಗೆ ಬಿಜೆಪಿ ಜೊತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ.

ಸ್ವತಃ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರೇ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿದಂತಾಗಿದೆ ಎಂದು ಹೇಳಿದ್ದಾರೆ. ರೆಡ್ಡಿ ಪರಮಾತ್ಮ ಶ್ರೀರಾಮುಲು ಕೂಡ ಪಕ್ಷಕ್ಕೆ ಬಾಹುಬಲಿಯ ಬಲ ಸಿಕ್ಕಿದೆ ಎಂದಿದ್ದಾರೆ. ಈ ಬಾರಿ ಬಳ್ಳಾರಿಯಲ್ಲಿ ಶ್ರೀರಾಮುಲು ಅಭ್ಯರ್ಥಿಯಾಗಿದ್ದು, ಅವರ ಗೆಲುವಿಗೆ ರೆಡ್ಡಿ ಸಾಕಷ್ಟು ಶ್ರಮಿಸುವುದು ಸುಳ್ಳಲ್ಲ. ಇದರ ಜೊತೆಗೆ ಬೀದರ್ ಅಭ್ಯರ್ಥಿ ಭಗವಂತ ಖೂಬಾ, ಕೊಪ್ಪಳ ಅಭ್ಯರ್ಥಿ ಬಸವರಾಜ ಕ್ಯಾವಟೂರ್, ಕಲಬುರಗಿ ಉಮೇಶ್ ಜಾಧವ್ ಗೆಲ್ಲಲು ಸಹಕಾರ ನೀಡಲಿದ್ದು ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

RELATED ARTICLES

Latest News