Sunday, April 28, 2024
Homeರಾಷ್ಟ್ರೀಯಬರ ಅಧ್ಯಯನ ವರದಿ ರಾಜ್ಯಪಾಲರಿಗೆ ಸಲ್ಲಸಲು ಜೆಡಿಎಸ್ ಸಿದ್ದತೆ

ಬರ ಅಧ್ಯಯನ ವರದಿ ರಾಜ್ಯಪಾಲರಿಗೆ ಸಲ್ಲಸಲು ಜೆಡಿಎಸ್ ಸಿದ್ದತೆ

ಬೆಂಗಳೂರು, ನ.25-ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಜೆಡಿಎಸ್ ನಡೆಸಿರುವ ಅಧ್ಯಯನ ವರದಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಲಿದೆ.
ಜಿಲ್ಲಾವಾರು ಬರ ಅಧ್ಯಯನದ ಮಾಹಿತಿಯನ್ನು ಆಧರಿಸಿ ಜೆಡಿಎಸ್ ವರದಿಯನ್ನು ಸಿದ್ಧಪಡಿಸುತ್ತಿದೆ.

ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಕಂಡು ಬಂದ ವಾಸ್ತವ ಸಂಗತಿಗಳು, ರೈತರೊಂದಿಗೆ ನಡೆಸಿದ ಮಾತುಕತೆಯ ಅಂಶವನ್ನು ವರದಿ ಒಳಗೊಂಡಿರುತ್ತದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಈ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಅಲ್ಲದೆ, ಅಧಿವೇಶನದಲ್ಲಿ ಬರ ಪರಿಸ್ಥಿತಿಯಿಂದ ರೈತರು ಹಾಗೂ ನಾಡಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಲು ಉದ್ದೇಶಿಸಿದೆ. ರಾಜ್ಯ ಸರ್ಕಾರ ಸಮರ್ಪಕ ಬರ ಪರಿಹಾರ ಒದಗಿಸಲು ವಿಫಲವಾಗಿದೆ ಎಂದು ಈಗಾಗಲೇ ಆರೋಪಿಸಿದೆ.

ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಜಿಲ್ಲಾವಾರು ತಂಡಗಳನ್ನು ರಚನೆ ಮಾಡಿತ್ತು. ಆಯಾ ಜಿಲ್ಲೆಯಲ್ಲಿನ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಲು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದ್ದರು.

ಸರ್ಕಾರದ ತೀರ್ಮಾನವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇನೆ : ಯತ್ನಾಳ್

ಆಯಾ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರು, ಹಾಲಿ ಶಾಸಕರು, ಮಾಜಿ ಶಾಸಕರು, ಪರಾಭವಗೊಂಡಿರುವ ಅಭ್ಯರ್ಥಿಗಳು, ಮತ್ತಿತರ ಹಿರಿಯ ಮುಖಂಡರನ್ನು ಒಳಗೊಂಡ 31 ತಂಡಗಳನ್ನು ರಚನೆ ಮಾಡಲಾಗಿತ್ತು. ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಚನೆ ಮಾಡಲಾಗಿದ್ದ ತಂಡಗಳು 31 ಜಿಲ್ಲೆಗಳಿಗೂ ಭೇಟಿ ನೀಡಿ ದೀಪಾವಳಿ ಹಬ್ಬದ ಒಳಗಾಗಿ ಅಧ್ಯಯನ ಮುಗಿಸಿ ಕೇಂದ್ರ ಕಚೇರಿಗೆ ವರದಿ ನೀಡಬೇಕೆಂದು ಸೂಚನೆ ನೀಡಲಾಗಿತ್ತು.

ಪಕ್ಷದ ಕೇಂದ್ರ ಕಚೇರಿಯು ಆಯಾ ತಂಡದ ಮುಖ್ಯಸ್ಥರಿಂದ ಬರ ಅಧ್ಯಯನದ ಮಾಹಿತಿಯನ್ನು ಕಲೆ ಹಾಕಿದೆ. ಎಲ್ಲಾ ಜಿಲ್ಲೆಗಳ ಮಾಹಿತಿ ಒಳಗೊಂಡ ಬರ ಕುರಿತ ವರದಿಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಬೆಳೆ ಹಾನಿಗೆ ಒಳಗಾಗಿರುವ ಪ್ರತಿ ಪ್ರದೇಶಕ್ಕೂ ಭೇಟಿ ನೀಡಿ, ಸಂಕಷ್ಟದಲ್ಲಿರುವ ರೈತರ ಜತೆ ನೇರ ಮಾತುಕತೆ ನಡೆಸಿ ವರದಿಗಳನ್ನು ಸಿದ್ಧಪಡಿಸಬೇಕು ಎಂದು ಮುಖಂಡರಿಗೆ ಸೂಚಿಸಲಾಗಿತ್ತು. ಈ ಅಧ್ಯಯನ ವರದಿ ಮುಂದಿಟ್ಟುಕೊಂಡು ಪಕ್ಷವು ವಿಧಾನ ಮಂಡಲದ ಒಳಗೆ, ಹೊರಗೆ ದೊಡ್ಡ ಮಟ್ಟದಲ್ಲಿ ರೈತರ ಪರವಾಗಿ ದನಿ ಎತ್ತುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.

ಒಂದೆಡೆ ಬರ ಮತ್ತೊಂದೆಡೆ ವಿದ್ಯುತ್ ಅಭಾವದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ರೈತರ ಪರವಾಗಿ ಪಕ್ಷ ಹೋರಾಟ ನಡೆಸುವ ಪೂರ್ವಭಾವಿಯಾಗಿ ಅಧ್ಯಯನ ನಡೆಸಬೇಕು ಎಂಬ ನಿರ್ದೇಶನವನ್ನು ಅವರು ನೀಡಿದ್ದರು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಿದೆ.

RELATED ARTICLES

Latest News