Monday, May 20, 2024
Homeಮನರಂಜನೆಕಲಾ ಲೋಕದ ರಾಯಭಾರಿಗೆ 68ನೇ ಹುಟ್ಟುಹಬ್ಬ

ಕಲಾ ಲೋಕದ ರಾಯಭಾರಿಗೆ 68ನೇ ಹುಟ್ಟುಹಬ್ಬ

ಶಂಕರ್ ನಾಗ್ ಎಂದಾಕ್ಷಣ ಕನ್ನಡಿಗರಲ್ಲಿ ಒಂದು ರೋಮಾಂಚನ. ಕಲಾ ಲೋಕದ ರಾಯಭಾರಿ, ಕನ್ನಡ ಸಿನಿ ಜಗತ್ತಿನಲ್ಲಿ ಅಜರಾಮರವಾಗಿ ಉಳಿಯುವ ದೈತ್ಯ ಪ್ರತಿಭೆ. ಅವರು ನಮ್ಮೊಂದಿಗೆ ಇದ್ದಿದ್ದರೆ ಇಂದು 68ನೇ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಆ ಅದೃಷ್ಟ ಇಲ್ಲ ಎನ್ನುವುದೇ ನಮ್ಮೆಲ್ಲರ ದುರದೃಷ್ಟಕ ಸಂಗತಿ. ಹೊನ್ನಾವರ ತಾಲ್ಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರೂ ಕೂಡ ಕಡಿಮೆ ಅವಧಿಯಲ್ಲಿ ಇವರು ಮಾಡಿದ ಸಾಧನೆ ಅಪಾರ.

ಕಲೆಯ ಬಗ್ಗೆ ಅಪಾರ ಪ್ರೇಮ:
ಓದು ಮುಗಿದ ನಂತರ ಕಲೆಯ ಮೇಲೆ ಅಪಾರ ಅಭಿಮಾನ ಮತ್ತು ಪ್ರೀತಿ ಇದ್ದ ಕಾರಣ ಮುಂಬೈನ ಮರಾಠಿ ರಂಗಮಂದಿರದ ಕಡೆಗೆ ಪಯಣ ಬೆಳೆಸಿದ ಇವರು, ಮರಾಠಿ ರಂಗಭೂಮಿಯನ್ನು ಕರಗತ ಮಾಡಿಕೊಂಡರು. ಅಷ್ಟೇ ಅಲ್ಲದೆ ಮರಾಠಿ ಚಿತ್ರಮಂದಿರಕ್ಕೂ ಪ್ರವೇಶ ಮಾಡಿ ಚಿತ್ರವನ್ನು ಮಾಡಿ ಅದಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಅಷ್ಟರಮಟ್ಟಿಗೆ ತಾನು ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುವ ಚಾಣಾಕ್ಷ. ಅಲ್ಲಿಂದ ಕಲಾ ಬದುಕಿನಲ್ಲಿ ಮಾಡಿದ್ದೆಲ್ಲವೂ ಇತಿಹಾಸವೇ.

ನಿರ್ದೇಶಕರಾಗಿಯೂ ಯಶಸ್ಸು ಕಂಡ ಶಂಕರನಾಗ್:
ಇವರ ಪ್ರತಿಭೆಯನ್ನು ಅರಿತ ಗಿರೀಶ್ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದರು. ಇವರ ಅದೃಷ್ಟ ಮತ್ತು ಪ್ರತಿಭೆ ಎರಡೂ ಇವರನ್ನು ಕೈ ಹಿಡಿಯುತ್ತದೆ. ಏಕೆಂದರೆ ಇವರು ಮಾಡಿದ ಮೊದಲ ಚಿತ್ರಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುತ್ತಾರೆ. ನಂತರ 12 ವರ್ಷಗಳ ಕಾಲ 92 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಆಳುತ್ತಾರೆ. ತಮ್ಮ ಸಹೋದರ ಅನಂತ ನಾಗ್ ಅವರೊಡನೆ ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ ಮತ್ತು ಗೀತಾ ಚಿತ್ರಗಳನ್ನು ನಿರ್ಮಿಸಿ ನಿರ್ಮಾಣದಲ್ಲೂ ಯಶಸ್ಸನ್ನು ಕಾಣುತ್ತಾರೆ.

ಮೆಟ್ರೋ ಕನಸು ಕಂಡಿದ್ದರು:
ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿ ಭಾರತದ ಬೆಳ್ಳಿ ಪರದೆಯ ಮೇಲೆ ಸುವರ್ಣ ಅಕ್ಷರಗಳ ಮೂಲಕ ಇತಿಹಾಸ ಕೆತ್ತಿದರು.

ಡಾ.ರಾಜ್‍ಕುಮಾರ್ ಅವರ ಒಂದು ಮುತ್ತಿನ ಕಥೆ ಚಿತ್ರವನ್ನು ನಿರ್ದೇಶನ ಮಾಡಿದ ಶಂಕರ್ ನಾಗ್, ನೀರಿನೊಳಗೆ ಕ್ಯಾಮೆರಾಗಳನ್ನು ಇಟ್ಟು ಚಿತ್ರೀಕರಿಸುವ ಕಲೆಯನ್ನು ಅಂದೇ ಅವರು ಕರಗತ ಮಾಡಿಕೊಂಡಿದ್ದರು. ಅಷ್ಟರಮಟ್ಟಿಗೆ ದೂರಾಲೋಚನೆ ಅವರದ್ದು. 40 ವರ್ಷಗಳ ಹಿಂದೆಯೇ ಮೆಟ್ರೋ ಕನಸನ್ನು ಕಂಡಿದ್ದ ಇವರು ಸಮಾಜ ಸೇವೆಗೆ ಯಾವಾಗಲೂ ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದರು.

ದೀಪಾವಳಿಯಲ್ಲಿ ಸ್ಥಳೀಯ ಉತ್ಪನ್ನ ಖರೀದಿಸಿ ಸೆಲ್ಫಿ ಕಳುಹಿಸಿ : ಮೋದಿ

ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್. ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟಪಟ್ಟು ಮದುವೆಯಾದರು. ಮಗಳು ಕಾವ್ಯ. ಈ ದಂಪತಿ ಸಂಕೇತ್ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಬರೆದು ನಿರ್ದೇಶಿಸಿ ಕಲಾವಿದರನ್ನು ಬೆಳೆಸಿದರು. ಅಷ್ಟೇ ಅಲ್ಲದೆ ನಾಟಕಗಳಿಗಾಗಿ ಒಂದು ರಂಗಮಂದಿರ ನಿರ್ಮಿಸಬೇಕೆಂಬ ಕನಸು ಅವರಲ್ಲಿ ಇತ್ತು. ಅದು ಈಡೇರುವ ಮುನ್ನವೇ ಇಹಲೋಕ ತ್ಯಜಿಸಿದರು. ನಂತರ ಅವರ ಕನಸನ್ನು ನನಸು ಮಾಡಿದ್ದು ಅವರ ಪತ್ನಿ ಅರುಂಧತಿ ನಾಗ್. ಇವರು ಕಟ್ಟಿ ಬೆಳೆಸುತ್ತಿರುವ ರಂಗಶಂಕರ ಇಂದು ಬೃಹದಾಕಾರವಾಗಿ ಬೆಳೆದು ಸಾವಿರಾರು ಕಲಾವಿದರಿಗೆ ಅನ್ನ ನೀಡುತ್ತಿದೆ
ಮತ್ತು ಕನ್ನಡ ರಂಗಭೂಮಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ.

RELATED ARTICLES

Latest News