ಬೆಂಗಳೂರು, ಏ.14- ಕನ್ನಡ ಚಿತ್ರ ರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿ ಕೊಂಡಿದ್ದಾರೆ. ಸ್ನೇಹಿತರು, ಅಪ್ಪು-ಪಪ್ಪು, ರಾಮಲೀಲಾ ಸೇರಿದಂತೆ ಹಲವಾರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ್ದ ಸೌಂದರ್ಯ ಜಗದೀಶ್ ಇಂದು ಬೆಳಗ್ಗೆ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ತಮ್ಮ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ಅವರು ತಂಗಿದ್ದ ಕೊಠಡಿಯಿಂದ ಹೊರಗೆ ಬರದಿದ್ದಾಗ ಅನುಮಾನ ಗೊಂಡು ಕುಟುಂಬ ಸದಸ್ಯರು ಬಾಗಿಲು ಹೊಡೆದು ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ಕುಣಿಕೆಯಿಂದ ಇಳಿಸಿ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿಲೇಔಟ್ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಿತ್ರ ನಿರ್ಮಾಣದ ಜೊತೆಗೆ ವಿತರಕರಾಗಿಯೂ ಅವರು ಹೆಸರು ಮಾಡಿದ್ದರು, ಇದಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೂಡ ತೊಡಗಿಕೊಂಡಿದ್ದರು.
ಇತ್ತೀಚೆಗೆ ಕಾಟೇರ ಚಿತ್ರದ ಯಶಸ್ಸಿನ ಪಾರ್ಟಿ ವೇಳೆ ಇವರು ಕೂಡ ಪಾಲ್ಗೊಂಡಿದ್ದರು. ಈ ವೇಳೆ ತಡರಾತ್ರಿ ವರೆಗೂ ಪಾರ್ಟಿ ಮಾಡಿದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ ಇಲ್ಲಿ ಊಟಕ್ಕೆ ತೆರಳಿದ್ದಾಗಿ ಹೇಳಿ, ಪ್ರಕರಣವನ್ನು ಕೈಬಿಡಲಾಗಿತ್ತು. ಕುಟುಂಬ ಸದಸ್ಯರನ್ನು ಭೇಟಿ ಮಾಡಿರುವ ಮಹಾಲಕ್ಷ್ಮಿ ಠಾಣೆ ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಸೌಂದರ್ಯ ಜಗದೀಶ್ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.ಈ ಸಂಜೆ ಜೊತೆ ಮಾತನಾಡುತ್ತಿದ್ದ ಅವರು, ತನಿಖೆ ನಂತರ ಅವರು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಿಖರವಾಗಿ ತಿಳಿದುಬರಲಿದೆ ಎಂದು ತಿಳಿಸಿದರು.