ಮೈಸೂರು, ಜೂ. 17- ಹನಿಟ್ರ್ಯಾಪ್ ಹೆಸರಲ್ಲಿ ದೊಡ್ಡ ಉದ್ಯಮಿಗಳು, ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವುದನ್ನು ಕೇಳಿರುತ್ತೀರಾ.. ಆದರೆ ದುಷ್ಟರನ್ನು ಶಿಕ್ಷಿಸಬೇಕಾದ ಪೊಲೀಸಪ್ಪನೇ ಇಂಥ ಹೀನಕೃತ್ಯದಲ್ಲಿ ತೊಡಗಿರುವ ಹೇಯ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಕಾನ್ಸ್ಟೆಬಲ್ ಶಿವಣ್ಣ ಬಂಧಿತ ಆರೋಪಿ. ಸುಂದರ ಯುವತಿಯರನ್ನು ಮುಂದೆ ಬಿಟ್ಟು ಹಣ ಉಳ್ಳವರನ್ನು ಬಲೆ ಬೀಳಿಸುತ್ತಿದ್ದ ಎಂದು ಹೇಳಲಾಗಿದೆ.
ಇದೇ ರೀತಿ ಕಂಪಲಾಪುರದ ಬಟ್ಟೆ ವ್ಯಾಪಾರಿ ದಿನೇಶ್ಕುಮಾರ್ ಎಂಬುವರನ್ನು ಹನಿಟ್ರ್ಯಾಪ್ಗೆ ಒಳಪಡಿಸಿದ್ದಾರೆ. ಯುವತಿಯೊಬ್ಬಳನ್ನು ಮುಂದೆ ಬಿಟ್ಟು ಬಟ್ಟೆ ವ್ಯಾಪಾರಿಯನ್ನು ವಾಟ್ಸ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡಿದ್ದಾರೆ. ತಾನು ಚಿಕ್ಕಮನ ಮನೆಯಲ್ಲಿದ್ದೇನೆ. ಇಲ್ಲಿ ಯಾರೂ ಇಲ್ಲ ಬಾ ಎಂದು ಯುವತಿ ಸಂದೇಶ ರವಾನಿಸಿದ್ದಾಳೆ. ಮೆಸೇಜ್ ನೋಡಿ ಖುಷಿಯಾದ ವ್ಯಾಪಾರಿ ದಿನೇಶ್ಕುಮಾರ್ ಯುವತಿಯ ಚಿಕ್ಕಮನ ಮನೆಗೆ ಬಂದಿದ್ದಾನೆ. ತಕ್ಷಣ ಆತನನ್ನು ಲಾಕ್ ಮಾಡಿಕೊಂಡಿದ್ದಾಳೆ.
ರೂಮ್ ಒಳಗೆ ಇರುವಾಗಲೇ ಏಕಾಏಕಿ ಕೊಠಡಿಯಬೀಗ ಒಡೆದು ಒಳ ಬಂದ ಇತರ ಆರೋಪಿಗಳು ವ್ಯಾಪಾರಿ ದಿನೇಶ್ಗೆ ಥಳಿಸಿ, 10 ಲಕ್ಷ ಹಣ ನೀಡಿದರೆ ಬಿಟ್ಟು ಬಿಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾರೆ.
ಬಳಿಕ ಪೊಲೀಸ್ ಪೇದೆ ಶಿವಣ್ಣನ ಸಹಾಯ ಪಡೆದು ಮೊದಲ ಆರೋಪಿ ಮೂರ್ತಿ ಹಾಗೂ ಯುವತಿ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಪ್ರಕರಣದಲ್ಲಿ ಎ1 ಆರೋಪಿ ಮೂರ್ತಿ, ಎ2 ಆರೋಪಿ ಕಾನ್ಸ್ಟೆಬಲ್ ಶಿವಣ್ಣ ಹಾಗು ಇತರ ಮೂವರಿಂದ ಈ ಕೃತ್ಯ ನಡೆಸಲಾಗಿದೆ. ಈ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಪೆಕ್ಟರ್ ದೀಪಕ್ ಅವರು ಕ್ರಮ ಕೈಗೊಂಡು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.