Thursday, September 19, 2024
Homeರಾಜ್ಯಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಸರ್ಕಾರ ನಿಯಮ ಉಲ್ಲಂಘಿಸಿಲ್ಲ : ಪ್ರವಾಹ್‌ ಸಮಿತಿ

ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಸರ್ಕಾರ ನಿಯಮ ಉಲ್ಲಂಘಿಸಿಲ್ಲ : ಪ್ರವಾಹ್‌ ಸಮಿತಿ

ನವದೆಹಲಿ,ಜು.9- ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಗದಗ ಜಿಲ್ಲೆಯ ಸುತ್ತಮುತ್ತಲಿನ ಜಾಗಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹದಾಯಿ ನದಿನೀರು ಹಂಚಿಕೆಯಲ್ಲಿ ಕರ್ನಾಟಕ ಸರ್ಕಾರ ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಪ್ರವಾಹ್‌ ಸಮಿತಿ ವರದಿ ನೀಡಿದೆ.

ಕೇಂದ್ರ ಜಲಶಕ್ತಿ ಆಯೋಗದ ಸೂಚನೆ ಮೇರೆಗೆ ಕಳೆದ ಭಾನುವಾರ ಉನ್ನತ ಅಧಿಕಾರಿಗಳ ತಂಡವು ಕರ್ನಾಟಕದ ತೀವ್ರ ವಿರೋಧದ ನಡುವೆಯೂ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕೆಲವು ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಹದಾಯಿ ನದಿನೀರು ಹಂಚಿಕೆ ಸಂಬಂಧ ಕರ್ನಾಟಕ ಸರ್ಕಾರ ನಿಯಮಗಳನ್ನುಉಲ್ಲಂಘಿಸಿ ಕಾಮಗಾರಿ ಪ್ರಾರಂಭಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಗಂಭೀರ ಆರೋಪ ಮಾಡಿದ್ದರು.

ಹೀಗಾಗಿ ಕೇಂದ್ರದಿಂದ ಉನ್ನತಾಧಿಕಾರಿಗಳ ತಂಡ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು. ಇದೀಗ ಕೇಂದ್ರ ಜಲಶಕ್ತಿ ಇಲಾಖೆಗೆ ನೀಡಿರುವ ವರದಿಯಲ್ಲಿ ಉನ್ನತ ಅಧಿಕಾರಿಗಳ ನೇತೃತ್ವದ ನಿಯೋಗವು ಕರ್ನಾಟಕ ಎಲ್ಲಿಯೂ ಕೂಡ ನಿಯಮಗಳನ್ನು ಉಲ್ಲಂಘಿಸಿಲ್ಲ. ಈ ಯೋಜನೆ ಸಂಬಂಧ ಈವರೆಗೂ ನಡೆದಿರುವ ಕಾಮಗಾರಿಗಳು ನಿಯಮದ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಉನ್ನತ ಅಧಿಕಾರಿಗಳ ನೇತೃತ್ವದ ನಿಯೋಗ ವರದಿ ನೀಡಿರುವುದಾಗಿ ತಿಳಿದುಬಂದಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಮೊನ್ನೆ ಜುಲೈ 7ರಂದು ಕಳಸಾ-ಬಂಡೂರಿ ಯೋಜನೆಯ ಸ್ಥಳಗಳನ್ನು ಪ್ರವಾಹ್‌ ಸದಸ್ಯರು ಪರಿಶೀಲಿಸಿದರೆ ಕರ್ನಾಟಕವು ಮಲಪ್ರಭಾ ನದಿಗೆ ಅಕ್ರಮವಾಗಿ ನೀರು ಹರಿಸುವುದನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿಕೆ ನೀಡಿದ್ದರು.

ಪ್ರವಾಹ್‌ ಸದಸ್ಯರು ಭಾನುವಾರ ಕಣಕುಂಬಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೋವಾ ಸರ್ಕಾರವು ಆರೋಪಿಸಿದಂತೆ ಯೋಜನೆಯ ಸ್ಥಳದಲ್ಲಿ ಅವರಿಗೆ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ. ಇದರಿಂದ ಗೋವಾ ಮುಖ್ಯಮಂತ್ರಿಗಳ ಹೇಳಿಕೆಗೆ ಹಿನ್ನಡೆಯುಂಟಾಗಿದೆ ಎಂದು ಸರ್ಕಾರದ ಉನ್ನತ ಮೂಲವೊಂದು ತಿಳಿಸಿದೆ.

ಮಹದಾಯಿ ಜಲವಿವಾದ ನ್ಯಾಯಮಂಡಳಿ ಘೋಷಿಸಿದ ತೀರ್ಪು ಉಲ್ಲಂಘನೆಯ ಕುರಿತು ಸೋಮವಾರ ಬೆಂಗಳೂರಿನಲ್ಲಿ ಪ್ರವಾಹ್‌ ಸದಸ್ಯರು ನಡೆಸಿದ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಜುಲೈ 7ರಂದು ಕಣಕುಂಬಿಗೆ ಪ್ರವಾಹ್‌ ಸದಸ್ಯರು ಭೇಟಿ ನೀಡಿದ್ದು ಕರ್ನಾಟಕದ ಉಲ್ಲಂಘನೆಯ ಆರೋಪಗಳನ್ನು ತನಿಖೆ ಮಾಡಲು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಗೋವಾ ಸರ್ಕಾರ ಆರೋಪಿಸಿದೆ.

ಕಣಕುಂಬಿಯಲ್ಲಿ ಯೋಜನಾ ಸ್ಥಳಗಳನ್ನು ಪರಿಶೀಲಿಸಿದಾಗ ಗೋವಾದ ಇಂಜಿನಿಯರ್‌ಗಳು ಪ್ರವಾಹ್‌ ಸದಸ್ಯರೊಂದಿಗೆ ಇದ್ದರು. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿತು ಪ್ರವಾಹ್‌ ಸದಸ್ಯರು ಚರ್ಚಿಸಿದ್ದಾರೆ.

ಮಹದಾಯಿ ನದಿಯಿಂದ ನೀರನ್ನು ಹರಿಸುವ ನಿರೀಕ್ಷೆಯಿರುವ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪಾರದರ್ಶಕತೆ ಕಾಯ್ದುಕೊಂಡಿರುವುದಕ್ಕೆ ಗೋವಾದ ಎಂಜಿನಿಯರ್‌ಗಳು ಸಂತೋಷಪಟ್ಟಿದ್ದಾರೆ. ಯೋಜನಾ ಸ್ಥಳಗಳಲ್ಲಿ ಯಾವುದೇ ಅಕ್ರಮ ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರ್ನಾಟಕ ಸರ್ಕಾರವು ನ್ಯಾಯಾಲಯ ಮತ್ತು ಮಹದಾಯಿ ಜಲ ವಿವಾದ ನ್ಯಾಯಮಂಡಳಿಯ ಎಲ್ಲಾ ಆದೇಶಗಳು ಮತ್ತು ನಿರ್ದೇಶನಗಳಿಗೆ ಬದ್ಧವಾಗಿದೆ. ಹೀಗಾಗಿ ಯೋಜನಾ ಸ್ಥಳದಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ನೀರು ತಿರುಗಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರದ ದೊಡ್ಡ ಮತ್ತು ಸಣ್ಣ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿ ಕುರಿತು ಚರ್ಚಿಸಲಾಯಿತು. ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಮೋದನೆಗಳನ್ನು ಪಡೆಯುವವರೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳಬಾರದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಲಪ್ರಭಾಕ್ಕೆ ಮಹದಾಯಿ ನೀರು ಹರಿಸುವುದನ್ನು ತಡೆಯಲು ಗೋವಾ ಸರ್ಕಾರ ಮಾರ್ಗೋಪಾಯಗಳನ್ನು ಅನ್ವೇಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ಕೇಂದ್ರದಿಂದ ಅರಣ್ಯ ಮತ್ತು ವನ್ಯಜೀವಿ ಅನುಮತಿ ಸೇರಿದಂತೆ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮೂಲಕ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬದ್ಧವಾಗಿದೆ.

RELATED ARTICLES

Latest News