ಮಧುಗಿರಿ, ಮೇ 4 – ಹಾಡಹಗಲೇ ಪಟ್ಟಣವನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣದ 4 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.50 ಸಾವಿರ ದಂಡವನ್ನು ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ತೀರ್ಪು ನೀಡಿದ್ದಾರೆ.
2021ರ ಮಾರ್ಚ್ 12 ರಂದು ಬೆಳಗ್ಗೆ ಸುಮಾರು 9.15 ಗಂಟೆ ಸಮಯದಲ್ಲಿ ಕೂಲ್ ಹೇರ್ ಸ್ಟೈಲ್ ಸಲೂನ್ ಎದುರು ಮಧುಗಿರಿಯ ಗುರುಕಿರಣ್, ಮಧುಗೌಡ, ಎಂ.ವಿ. ಧನಂಜಯಾ ಇವರುಗಳು ಕೂಲ್ ಹೇರ್ಸ್ಟೈಲ್ ಅಂಗಡಿಯ ಮುಂಭಾಗದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದ ಮೃತ ಆರ್.ವೀರಭದ್ರಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೆಳಕ್ಕೆ ಎಳೆದುಕೊಂಡು ಆರೋಪಿ-1 ಗುರುಕಿರಣ್ ಡ್ಯಾಗರ್ನಿಂದ, 2ನೇ ಆರೋಪಿ ಮಧುಗೌಡ ಬಟನ್ ಚಾಕುವಿನಿಂದ, 3ನೇ ಆರೋಪಿ ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ಆರ್.ವಿ.ಸ್ವಾಮಿ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
3 ಜನ ಆರೋಪಿತರಿಗೆ ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಚಂದನ್ ಕುಮಾರ್ ಇವರುಗಳು ಸಂಚು ರೂಪಿಸಿ ಕೊಲೆ ಮಾಡಿದ್ದು ತನಿಖೆಯಿಂದ ದೃಢಪಟ್ಟ ಮೇರೆಗೆ ಅಂದಿನ ತನಿಖಾಧಿಕಾರಿಯಾದ ಎಂ.ಎಸ್.ಸರ್ದಾರ್ ರವರು ದೋಷಾರೋಪಣಾ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಎಸ್.ಸಿಸಂಖ್ಯೆ 5029/2021ರಲ್ಲಿ ಕಲಂ 302 ರೆ.ವಿ120ಬಿ 109 ರೆ.ವಿ.34 ಭಾರತೀಯ ದಂಡಸಂಹಿತೆಯ ರೀತ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ಅಧಿವಿಚಾರಣೆ ನಡೆಸಿದ ರವರು ಅಭಿಯೋಜನೆಯು ಆರೋಪವನ್ನು ರುಜುವಾತುಪಡಿಸಿದ ಮೇರೆಗೆ 2025 ಮೇ 3 ರಂದು ಸದರಿ 4 ಜನ ಅರೋಪಿಗಳಿಗೆ ಭಾರತೀಯ ದಂಡ ಸಂಹಿತೆಯ ಕಲಂ 302, 120ಬಿ, 109 ರೆವಿ 34 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 50 ಸಾವಿರ ದಂಡ ವಿಧಿಸಿ, ದಂಡದ ಹಣದಲ್ಲಿ ಪರಿಹಾರವಾಗಿ ಮೃತನ ತಂದೆ ರುದ್ರಪ್ಪ ಮತ್ತು ತಾಯಿ ಚನ್ನಬಸಮ್ಮ ಇವರುಗಳಿಗೆ ತಲಾ ರೂ. 50 ಸಾವಿರ ಪರಿಹಾರವಾಗಿ ನೀಡಲು ಆದೇಶ ತೀರ್ಪು ನೀಡಿರುತ್ತಾರೆ. ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.