Saturday, May 4, 2024
Homeರಾಜ್ಯವಸತಿ ಗೃಹಗಳಲ್ಲಿ ಮದ್ಯಮಾರಾಟ ಹಗರಣ : ವಿಧಾನಸಭೆಯಲ್ಲಿ ಕೋಲಾಹಲ

ವಸತಿ ಗೃಹಗಳಲ್ಲಿ ಮದ್ಯಮಾರಾಟ ಹಗರಣ : ವಿಧಾನಸಭೆಯಲ್ಲಿ ಕೋಲಾಹಲ

ಬೆಳಗಾವಿ, ಡಿ.5-ವಸತಿ ಗೃಹಗಳಲ್ಲಿ ಮದ್ಯಮಾರಾಟಕ್ಕೆ ಪರವಾನಗಿ ನೀಡಿರುವುದರಲ್ಲಿ ಹಗರಣಗಳಾಗಿದ್ದು, ತನಿಖೆ ನಡೆಸಬೇಕೆಂದು ಪಕ್ಷಾತೀತವಾಗಿ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಲ್ಲದೆ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆದು ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.

ಪ್ರಶ್ನೋತ್ತರದ ಅವಧಿಯಲ್ಲಿ ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ವಿಷಯ ಪ್ರಸ್ತಾಪಿಸಿ ತಮ್ಮ ಕ್ಷೇತ್ರದಲ್ಲಿ ನಿಯಮ ಮೀರಿ ಸಿಎಲ್ 7 ಪರವಾನಗಿಗಳನ್ನು ನೀಡಲಾಗಿದೆ. ಇದರಲ್ಲಿ ಶೇಕಡಾ 80 ರಷ್ಟು ನಿಯಮಗಳ ಉಲ್ಲಂಘನೆಯಾಗಿದೆ. ಯಾವ ಅಂಗಡಿಗೂ ಪಾರ್ಕಿಂಗ್ ಸ್ಥಳಾವಕಾಶ ಇಲ್ಲ. ನಿಯಮಗಳ ಅನುಸಾರ ಕೊಠಡಿಗಳ ವಿನ್ಯಾಸ ಇಲ್ಲ. ಜಿಲ್ಲಾ ಅಬಕಾರಿ ಕಚೇರಿಯಲ್ಲಿ ಸೂಪರಿಟೆಂಡೆಂಟ್ ಆಗಿರುವ ರಂಗಪ್ಪ ಎಂಬುವರು ನಿಯಮ ಮೀರಿ ಪರವಾನಗಿಗಳನ್ನು ಕೊಡುತ್ತಿರುವುದಲ್ಲದೆ, ಸದರಿ ಮದ್ಯದಂಗಡಿಗಳಲ್ಲಿ ಪಾಲುದಾರರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಸಿಎಲ್ 7 ಪರವಾನಗಿಗಳನ್ನು ನೀಡಬೇಕಾದರೆ 18 ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಬಹುತೇಕ ಎಲ್ಲಾ ಸನ್ನದ್ಧುದಾರರಲ್ಲೂ ಪ್ರಮಾಣಪತ್ರಗಳಿವೆ. ಆದರೆ ಕಟ್ಟಡ ವಿನ್ಯಾಸ ಮತ್ತು ಪಾರ್ಕಿಂಗ್ ಸ್ಥಳದ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ನಮ್ಮ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು ರೂಪಿಸಲಿದೆ ಎಂದು ಹೇಳಿದರು.

ಶಾಸಕರು ಉಲ್ಲೇಖಿಸಿರುವ ಅಧಿಕಾರಿಯ ವಿರುದ್ಧ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಗೋಪಾಲಕೃಷ್ಣ ಬೇಳೂರು, ಸಿ.ಎನ್.ಬಾಲಕೃಷ್ಣ, ಸುರೇಶ್‍ಗೌಡ ಸೇರಿದಂತೆ ಹಲವು ಶಾಸಕರು ಈ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಿಎಲ್ 7 ಎಂಬುದು ದಂಧೆಯಾಗಿದೆ. ಬೆಂಗಳೂರಿನಿಂದ ಬಂದ ಅರಸೀಕೆರೆಯಲ್ಲಿ ಪರವಾನಗಿ ಪಡೆದು ಮದ್ಯ ಮಾರಾಟ ಮಾಡುತ್ತಿದ್ದಾರೆ. ಕಡಿವಾಣ ಹಾಕದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂದರು.

ಬೇಳೂರು ಗೋಪಾಲಕೃಷ್ಣ ಮಾತನಾಡಿ, ಇದು ಸುಮಾರು 1 ಸಾವಿರ ಕೋಟಿ ರೂ.ಗಳಷ್ಟು ಪ್ರಕರಣ, ಎಷ್ಟು ಪರವಾನಗಿಗಳನ್ನು ನೀಡಲಾಗಿದೆ ಎಂಬುದು ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಇವು ನಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗಿರುವ ಪರವಾನಗಿಗಳಲ್ಲ. 2020 ರಿಂದ 2023 ರ ಅವಧಿಯಲ್ಲಿ ನೀಡಲಾಗಿದೆ ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಮಾಜಿ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ರಾಜ್ಯಸರ್ಕಾರಕ್ಕೆ ಧೈರ್ಯ ಮತ್ತು ಕಾಳಜಿ ಇದ್ದರೆ ಈ ಬಗ್ಗೆ ತನಿಖೆ ಮಾಡಿ ಅಕ್ರಮವಾಗಿರುವುದನ್ನು ರದ್ದು ಮಾಡಿ ಎಂದು ಸವಾಲು ಹಾಕಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಕಾವೇರಿದ ಚರ್ಚೆಗೆ ಗ್ರಾಸವಾಯಿತು.

ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, 21 ಕೊಠಡಿಗಳಿರಬೇಕು ಎಂಬ ನಿಯಮವಿದೆ. ಆದರೆ ಶೌಚಾಲಯವನ್ನು ಕೊಠಡಿ ಎಂದು ಪರಿವರ್ತಿಸಿದ್ದಾರೆ. ತನಿಖೆ ಮಾಡಿ ನಿಯಮ ಉಲ್ಲಂಘನೆಯಾಗಿದ್ದರೆ ಪರವಾನಗಿಗಳನ್ನು ರದ್ದು ಮಾಡಿ, ಚಿಲ್ಲರೆ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದೆ, ಅದನ್ನು ತಡೆಗಟ್ಟಿ ಎಂದು ಆಗ್ರಹಿಸಿದರು.

ಸಚಿವ ಆರ್.ಬಿ.ತಿಮ್ಮಾಪುರ್ ಮಾತನಾಡಿ, ಕೊಠಡಿ ವಿನ್ಯಾಸ, ಪಾರ್ಕಿಂಗ್ ಸ್ಥಳಗಳ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ ಎಂದು ನಾನೇ ಒಪ್ಪಿಕೊಂಡಿದ್ದೇನೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಪರವಾನಗಿ ನೀಡುವುದರಲ್ಲಿ ಮೀಸಲಾತಿ ಪಾಲನೆಯಾಗಿಲ್ಲ ಎಂದು ಆಕ್ಷೇಪಿಸಿದರು.

ಮುಸ್ಲಿಮರಿಗೆ ಸಂಪತ್ತು ಹಂಚುತ್ತೇನೆ ಎಂದ ಸಿಎಂಗೆ ತಿರುಗೇಟು ಕೊಟ್ಟ ಅಶೋಕ್

ಇದಕ್ಕೆ ಉತ್ತರ ನೀಡಿದ ಸಚಿವ ಆರ್.ಬಿ.ತಿಮ್ಮಾಪುರ್, 3975 ಸಿಎಲ್2 ಪರವಾನಗಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ತಲಾ 65 ಹಂಚಿಕೆ ಮಾಡಲಾಗಿದೆ. 3024 ಸಿಎಲ್ 9ನಲ್ಲಿ ಪರಿಶಿಷ್ಟ ಜಾತಿಗೆ 49, ಪರಿಶಿಷ್ಟ ಪಂಗಡಕ್ಕೆ 34, ಸಿಎಲ್ 7 2444 ರಲ್ಲಿ ಪರಿಶಿಷ್ಟ ಜಾತಿಗೆ 96, ಪರಿಶಿಷ್ಟ ಪಂಗಡಕ್ಕೆ 68 ಪರವಾನಗಿಗಳನ್ನು ನೀಡಲಾಗಿದೆ. ಮೀಸಲಾತಿ ಜಾರಿಯಾಗಿಲ್ಲ ಎಂಬುದು ಸ್ಪಷ್ಟ. ಈ ಕುರಿತು ಅನುಸೂಚಿತ ಜಾತಿ ಮತ್ತು ಪಂಗಡಗಳ ಸಮಿತಿಯು ವರದಿ ನೀಡಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಚರ್ಚೆ ವ್ಯಾಪಕವಾದ ಹಿನ್ನೆಲೆಯಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಕೊಡುವ ಸಲುವಾಗಿ ಅರ್ಧ ಗಂಟೆ ಕಾಲಾವಯನ್ನು ನಿಗದಿ ಮಾಡುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಭರವಸೆ ನೀಡಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವ್ಯಾಪಕ ಚರ್ಚೆಗಳಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್‍ರವರು ಹಲವು ಬಾರಿ ಅಸಮಾಧಾನ ಹೊರಹಾಕಿದರು. ಶಾಸಕರು ತಮ್ಮಷ್ಟಕ್ಕೆ ತಾವು ಮಾತನಾಡಲು ಇದು ಜಾತ್ರೆ ಅಥವಾ ಮಾರುಕಟ್ಟೆಯಲ್ಲ. ಇಲ್ಲೇನು ನಾಟಕ ನಡೆಯುತ್ತಿದೆಯೇ ಎಂಬೆಲ್ಲಾ ಪದ ಬಳಕೆ ಮಾಡಿ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಪರಿಸ್ಥಿತಿಯನ್ನು ತಹಬದಿಗೆ ತರುವ ಪ್ರಯತ್ನ ನಡೆಸಿದರು.

RELATED ARTICLES

Latest News