Thursday, July 4, 2024
Homeಜಿಲ್ಲಾ ಸುದ್ದಿಗಳುಬೆಳಗಾವಿಯಲ್ಲೊಬ್ಬ ಪಾಗಲ್‌ ಪ್ರೇಮಿ, ಎಂದಿನಂತೆ ಪೊಲೀಸರ ನಿರ್ಲಕ್ಷ್ಯ…!?

ಬೆಳಗಾವಿಯಲ್ಲೊಬ್ಬ ಪಾಗಲ್‌ ಪ್ರೇಮಿ, ಎಂದಿನಂತೆ ಪೊಲೀಸರ ನಿರ್ಲಕ್ಷ್ಯ…!?

ಬೆಳಗಾವಿ,ಮೇ 25- ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿರುವ ಹುಬ್ಬಳ್ಳಿಯ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ನಂತರವೂ ಪಾಗಲ್‌ ಪ್ರೀಮಿಗಳ ಕಾಟ ತಣ್ಣಗಾಗಿಲ್ಲ.ಬೆಳಗಾವಿಯಲ್ಲಿ ಸೈಕೋಪಾತ್‌ ಪಾಗಲ್‌ ಪ್ರೀಮಿಯ ಕಾಟದಿಂದ ಇಡೀ ಕುಟುಂಬವೇ ನರಕಯಾತನೆ ಅನುಭವಿಸುತ್ತಿರುವ ಘಟನೆ ತಾಲೂಕಿನ ಕಿಣೆಯ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಿಣೆಯ ಗ್ರಾಮದ ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಆಕೆಯ ಮನೆ ಮೇಲೆಯೇ ಕಲ್ಲು ತೂರಿ ಕಿಟಕಿ ಗ್ಲಾಸ್‌‍ ಪುಡಿ ಪುಡಿ ಮಾಡಿ ಗ್ರಾಮದ ಜನರನ್ನೇ ಬೆಚ್ಚಿ ಬೀಳಿಸಿದ್ದಾನೆ. ಈ ಪಾಗಲ್‌ ಪ್ರೀಮಿಯ ಹುಚ್ವಾಟದಿಂದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ತಾಲೂಕಿನ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬಾತ ಯುವತಿಗೆ ತನ್ನನ್ನು ಪ್ರೀತಿಸುವಂತೆ, ಮದುವೆಯಾಗುವಂತೆ ಹುಚ್ಚಾಟವಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಅದೇ ಗ್ರಾಮದ ಬಿಕಾಂ ಓದುತ್ತಿರುವ ಯುವತಿ ಬೆನ್ನು ಬಿದ್ದು, ಪೀಡಿಸುತ್ತಿರುವ ತಿಪ್ಪಣ್ಣ ನಿತ್ಯ ಕಾಲೇಜಿಗೆ ಹೋಗುವಾಗಲೇ ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿಯ ಕುಟುಂಸ್ಥರು ಅಳಲು ತೋಡಿಕೊಂಡಿದ್ದಾರೆ.

ಆತನ ಹುಚ್ಚಾಟಕ್ಕೆ ಬೇಸತ್ತು ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಾಳೆವಾಸವಿದ್ದಾಳೆ. ಯುವತಿ ಜೊತೆಗೆ ಮದುವೆ ಮಾಡಿ ಕೊಡುವಂತೆ, ಇಲ್ಲದಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೇದರಿಕೆ ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೆಲ ತಿಂಗಳ ಹಿಂದೆಯೇ ಯುವತಿ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದನಂತೆ ಈತ. ಇದಾದಬಳಿಕ ಮೂರ ದಿನಗಳ ಹಿಂದೆಯೂ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಲ್ಲದೆ, ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಿಟಕಿ ಗ್ಲಾಸ್‌‍ ಒಡೆದು ಪುಂಡಾಟ ಮೆರೆದಿದ್ದಲ್ಲದೆ, ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡಿದ್ದಾನೆ.

ಯಾವುದೇ ಕೆಲಸ ಮಾಡದೇ ಊರಲ್ಲಿ ಸುತ್ತಾಡುವ ಈ ಪಾಗಲ್‌ ಪ್ರೇಮಿಯ ಕಿರಿಕಿರಿಗೆ ಬೇಸತ್ತು ಯುವತಿ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.ಕಳೆದ ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪೊಲೀಸರು ಠಾಣೆಗೆ ಆತನನ್ನು ಕರೆದು ಎಚ್ಚರಿಕೆ ನೀಡಿದ್ದರಿಂದ ಕೆಲ ದಿನಗಳ ಕಾಲ ಯುವತಿ ತಂಟೆಗೆ ಹೋಗದೇ ಸೈಲೆಂಟ್‌ ಆಗಿದ್ದ.

ಈಗ ಆತ ಮತ್ತೆ ಬಾಲ ಬಿಚ್ಚಿರುರುವುದರಿಂದ ಮತ್ತೆ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.ಎರಡು ಬಾರಿಯೂ ನಾಳೆ ಬನ್ನಿ ಎಂದು ಹೇಳಿ ಕಳಿಸಿರುವ ಪೊಲೀಸರ ನಿರ್ಲಕ್ಷ್ಯಕ್ಕೆ ಜೀವ ಭಯದಲ್ಲೇ ಜೀವನ ನಡೆಸುತ್ತಿರುವ ಯುವತಿ ಹಾಗೂ ಆಕೆಯ ತಾಯಿ ಬಗ್ಗೆ ಈಗ ಸರಕಾರ ಗಮನ ಹರಿಸಬೇಕಿದೆ ಎಂಬುದು ಸ್ಥಳೀಯರ ಕಳಕಳಿಯಾಗಿದೆ.

RELATED ARTICLES

Latest News