Sunday, September 29, 2024
Homeಬೆಂಗಳೂರುಮಹಾಲಕ್ಷ್ಮಿ ಹಂತಕನ ಗುರುತು ಪತ್ತೆ

ಮಹಾಲಕ್ಷ್ಮಿ ಹಂತಕನ ಗುರುತು ಪತ್ತೆ

Mahalakshmi killer identified

ಬೆಂಗಳೂರು,ಸೆ.23- ನಗರದ ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಎಂಬುವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿ ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿರುವ ಆರೋಪಿಯ ಗುರುತು ಪತ್ತೆಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊಲೆ ಆರೋಪಿಯು ಹೊರರಾಜ್ಯದವನು ಎಂಬುದು ಗೊತ್ತಾಗಿದೆ. ಆತ ನಗರದಲ್ಲಿ ವಾಸವಾಗಿದ್ದ. ಮಹಾಲಕ್ಷ್ಮಿಯನ್ನು ಆತನೇ ಕೊಲೆ ಮಾಡಿರುವ ಸಾಕ್ಷ್ಯಾಧಾರ ಲಭ್ಯವಾಗಿದೆ. ಕೊಲೆ ನಂತರ ಆತ ಹೊರರಾಜ್ಯಕ್ಕೆ ಪರಾರಿಯಾಗಿದ್ದಾನೆ ಎಂದರು.

ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಒಂದು ತಂಡ ಹೊರರಾಜ್ಯಕ್ಕೆ ಹೋಗಿ ಕಾರ್ಯೋನುಖವಾಗಿದೆ. ಎಲ್ಲಾ ದೃಷ್ಟಿಕೋನಗಳಲ್ಲೂ ತನಿಖೆ ಮಾಡುತ್ತಿದ್ದೇವೆ. ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದು, ವರದಿ ಕೈ ಸೇರಿದ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ ಎಂದು ಅವರು ವಿವರಿಸಿದರು.

ವೈಯಾಲಿಕಾವಲ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪೈಪ್‌ಲೈನ್‌ ರಸ್ತೆಯಲ್ಲಿ ಮಹಾಲಕ್ಷ್ಮಿ ವಾಸವಾಗಿದ್ದ ಮನೆಯಲ್ಲಿ ಆರೋಪಿಯು ಆಕೆಯನ್ನು ಕೊಲೆ ಮಾಡಿ ದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಫ್ರಿಡ್‌್ಜನಲ್ಲಿಟ್ಟು ಯಾವುದೇ ಕುರುಹುಗಳು ಸಿಗದಂತೆ ಚಾಲಾಕಿತನದಿಂದ ತನ್ನ ಕೆಲಸ ಮುಗಿಸಿ ಪರಾರಿಯಾಗಿದ್ದಾನೆ.

ಎಷ್ಟು ದಿನಗಳ ಹಿಂದೆ ಮಹಾಲಕ್ಷ್ಮಿಯನ್ನು ಕೊಲೆ ಮಾಡಲಾಗಿದೆ ಎಂಬುದು ವೈದ್ಯಕೀಯ ಪರೀಕ್ಷೆಯ ಹಾಗೂ ಎಫ್‌ಎಸ್‌‍ಎಲ್‌ ವರದಿಗಳಿಂದ ಗೊತ್ತಾಗಲಿದೆ. ಅವುಗಳಿಗಾಗಿ ಕಾಯುತ್ತಿದ್ದೇವೆ. ವರದಿಗಳು ಬಂದ ನಂತರ ಇನ್ನಷ್ಟು ಮಾಹಿತಿಗಳು ಹೊರಬರಲಿದೆ ಎಂದರು.
ಆರೋಪಿಯು ಯಾವ ಕಾರಣಕ್ಕೆ ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದಾನೆ ಎಂಬುದು ಆತನ ಬಂಧನದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಅವರು ಹೇಳಿದರು.

ನಗರದಲ್ಲಿ ಗಣೇಶಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಈತನಕ ಯಾವುದೇ ಅಹಿತಕರ ಹಾಗೂ ಸಣ್ಣಪುಟ್ಟ ಘಟನೆಗಳೂ ಸಹ ನಡೆದಿಲ್ಲ ಎಂದು ಆಯುಕ್ತರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಈಶಾನ್ಯ ರಾಜ್ಯದಲ್ಲಿ ನಗರ ಪೊಲೀಸರ ಹುಡುಕಾಟ :
ವಯ್ಯಾಲಿಕಾವಲ್ನ ಮನೆಯೊಂದರಲ್ಲಿ ಮಹಿಳೆಯನ್ನು ಕೊಲೆ ಮಾಡಿ ಈಶಾನ್ಯ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಹಂತಕನಿಗಾಗಿ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿಟಿವಿಗಳ ಪರಿಶೀಲನೆ, ಕುಟುಂಬಸ್ಥರಿಂದ ಹಾಗೂ ಸ್ನೇಹಿತರಿಂದ ಹೆಚ್ಚಿನ ಮಾಹಿತಿಗಳನ್ನು ತಂಡಗಳು ಕಲೆಹಾಕುತ್ತಿವೆ.

ಮೂಲತಃ ಹೊರ ರಾಜ್ಯದವರಾದ ಮಹಾಲಕ್ಷ್ಮಿ ರಾಜ್ಯದಲ್ಲಿ ನೆಲೆಸಿದ್ದು, ಕೌಟುಂಬಿಕ ವಿಚಾರಕ್ಕೆ ಮನಸ್ತಾಪವಾಗಿ ಪತಿಯಿಂದ ದೂರವಾಗಿ ವಯ್ಯಾಲಿಕಾವಲ್ನ ವಿನಾಯಕ ನಗರದ ಪೈಪ್ಲೈನ್ ರಸ್ತೆಯಲ್ಲಿ ಮೂರು ತಿಂಗಳ ಹಿಂದೆಯಷ್ಟೇ ಬಾಡಿಗೆ ಮನೆ ಮಾಡಿಕೊಂಡು, ಮಾಲ್ವೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು.

ಈ ನಡುವೆ ಮಹಾಲಕ್ಷ್ಮಿ (29)ಯನ್ನು ಆಕೆಯ ಮನೆಯಲ್ಲೇ ಆರೋಪಿಯು ಕೊಲೆ ಮಾಡಿ ದೇಹವನ್ನು 50ಕ್ಕೂ ಹೆಚ್ಚು ತುಂಡುತುಂಡಾಗಿ ಕತ್ತರಿಸಿ, ತರಕಾರಿ ಜೋಡಿಸುವಂತೆ ಫ್ರಿಡ್್ಜನಲ್ಲಿಟ್ಟು ಸ್ಥಳದಲ್ಲಿ ಯಾವುದೇ ಸುಳಿವು ಸಿಗದಂತೆ ಚಾಲಾಕಿತನದಿಂದ ಎಸ್ಕೇಪ್ ಆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಹುಶಃ ಈ ಘಟನೆ 10ರಿಂದ 15 ದಿನಗಳ ಹಿಂದೆಯೇ ನಡೆದಿರುವ ಅನುಮಾನ ವ್ಯಕ್ತವಾಗಿದೆ. ನಿನ್ನೆ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದರ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆರೋಪಿ ಈಶಾನ್ಯ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ಪಡೆದಿರುವ ಒಂದು ತಂಡ ಆ ರಾಜ್ಯಗಳಿಗೆ ತೆರಳಿ ಆರೋಪಿಗಾಗಿ ಶೋಧ ನಡೆಸುತ್ತಿದೆ.

RELATED ARTICLES

Latest News