Friday, May 17, 2024
Homeರಾಜ್ಯವರ್ಷದ ಮೊದಲ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ

ವರ್ಷದ ಮೊದಲ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ

ಬೆಂಗಳೂರು, ಜ.11- ವರ್ಷದ ಮೊದಲ ಹಬ್ಬ ಸುಗ್ಗಿ ಹಬ್ಬ ಸಂಕ್ರಾಂತಿ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದ್ದು, ಹಬ್ಬಕ್ಕೆ ಬೇಕಾದ ಅಗತ್ಯವಸ್ತುಗಳ ಖರೀದಿಗೆ ಜನರು ಇಂದಿನಿಂದಲೇ ಮಾರುಕಟ್ಟೆಗಳತ್ತ ಮುಖ ಮಾಡಿದ್ದು, ಬೆಲೆ ಏರಿಕೆ ಬಿಸಿ ತಟ್ಟಿದೆ. ಹಬ್ಬಕ್ಕೆ ಬೇಕಾದ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸುಗಳ ರಾಶಿ ಬಂದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿವೆ. ಮತ್ತೊಂದೆಡೆ ಸಿದ್ಧ ಎಳ್ಳು- ಬೆಲ್ಲ, ಸಕ್ಕರೆ ಅಚ್ಚು ಆಕರ್ಷಿಸುತ್ತಿವೆ. ಆದರೆ, ಬೆಲೆ ಏರಿಕೆ ಗ್ರಾಹಕರ ಜೇಬು ಸುಡುತ್ತಿದೆ.

ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸರ್ವೆಸಾಮಾನ್ಯ. ಆದರೆ, ಈ ಬಾರಿ ರಾಜ್ಯದಲ್ಲಿ ಬರ ಆವರಿಸಿದ್ದು, ಬೆಳೆ ಬಾರದೆ ಮತ್ತಷ್ಟು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಮುಖ್ಯವಾಗಿ ಕಡಲೆಕಾಯಿ, ಆವರೆಕಾಯಿ ಪ್ರಮುಖವಾಗಿದ್ದು ಇವನ್ನು ಮಳೆ ಆಶ್ರಿತ ಪ್ರದೆಶಗಳಲ್ಲಿ ಬೆಳೆಯಲಾಗುತ್ತದೆ. ಈ ಬಾರಿ ಮಳೆ ಬಾರದೆ, ಬೆಳೆ ಬಾರದೆ ಇರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಮಗುವನ್ನು ಕೊಲ್ಲುವ ಮುನ್ನ ಪತಿಯೊಂದಿಗೆ ಮೊಬೈಲ್‍ನಲ್ಲಿ ಜಗಳವಾಡಿದ್ಧ ಸುಚನಾ ಸೇಠ್

ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ, ರಾಮನಗರ ತಾಲೂಕಿನ ಮಾಗಡಿ, ತಾಲೂಕುಗಳಲ್ಲಿ ಹೆಚ್ಚು ಕಡಲೆಕಾಯಿ ಬೆಳೆಯುವ ಕಾಲವೊಂದಿತ್ತು. ಆದರೆ ದಿನ ಕಳೆದಂತೆ ಕಡಲೆ ಬೆಳೆಯುವವರೇ ಇಲ್ಲದಂತಾಗಿದೆ. ನೀರಿನ ಅಭಾವ, ಕಾಡುಪ್ರಾಣಿಗಳ ಹಾವಳಿ, ಕೂಲಿಕಾರ್ಮಿಕರ ಕೊರತೆ, ರಸಗೊಬ್ಬರಗಳ ಬೆಲೆ ಏರಿಕೆಯಿಂದ ರೈತರು ಕಡಲೆಕಾಯಿ ಬೆಳೆಯಲು ಒಲವು ತೊರದೆ ಜಮೀನುಗಳೆಲ್ಲ ಪಾಳು ಬಿದ್ದಿವೆ. ಇದರಿಂದ ಉತ್ಪಾದನೆ ಕುಂಠಿತವಾಗಿ ಬೆಲೆ ಹೆಚ್ಚಳವಾಗಿದೆ . ಆಂಧ್ರ ತಮಿಳುನಾಡಿನಿಂದ ಅಪಾರ ಪ್ರಮಾಣದಲ್ಲಿ ಕಡಲೆಕಾಯಿ ಬಂದಿದ್ದು, ಕೆಜಿಗೆ 100 ರಿಂದ 150 ರೂ. ವರೆಗೂ ಮರಾಟವಾಗುತ್ತಿದೆ.

ಇನ್ನು ದಿನ್ನೆ ಜಮೀನುಗಳಲ್ಲಿ ಬೆಳೆದ ಆವರೆ ಕಾಯಿಯ ಸೊಗಡೇ ಬೇರೆ. ಅದರಲ್ಲೂ ಮಾಗಡಿ ಅವರೆ ಎಂದರೆ ಹೆಸರುವಾಸಿ. ಆದರೆ ಈ ಬಾರಿ ಮಳೆ ಕೈ ಕೊಟ್ಟಿದ್ದು, ಮಳೆಯಾಶ್ರಿತ ಪ್ರದೇಶಗಳಲ್ಲಿ ಅವರೆ ಬೆಳೆ ಬಂದಿಲ್ಲ. ನೀರಾವರಿ ಪ್ರದೇಶದಲ್ಲಿ ಬೆಳೆದ ಬೆಳೆ ಬಂದಿದ್ದು, ಇದರಲ್ಲಿ ಸೊಗಡೆ ಇಲ್ಲದಂತಾಗಿದ್ದು, ಕೆಜಿಗೆ 60 ರಿಂದ 70 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಮೊದಲೆಲ್ಲಾ ಹಬ್ಬಕ್ಕೆ ಇನ್ನೂ ಕೆಲ ದಿನ ಬಾಕಿ ಇರುವಾಗಲೆ ಹಿರಿಯರು ಮನೆಯಲ್ಲೆ ಕಡಲೆಬೀಜ, ಎಳ್ಳು, ಹುರಿದು, ಕೊಬ್ಬರಿ ಹಾಗೂ ಬೆಲ್ಲ ಹೆಚ್ಚಿಟ್ಟುಕೊಂಡು ಸಾಂಪ್ರದಾಯಿಕವಾಗಿ ಮಿಶ್ರಣ ಮಾಡಿ ಹಬ್ಬದ ದಿನ ಎಳ್ಳು-ಬೆಲ್ಲ ಬೀರುತ್ತಿದ್ದರು. ಆದರೆ ಇತ್ತಿಚೀನ ದಿನಗಳಲ್ಲಿ ಎಲ್ಲವೂ ರೆಡಿಮೆಡ್ ಆಗಿದೆ. ಯಾರೂ ಕೂಡ ಮನೆಯಲ್ಲಿ ಎಳ್ಳು-ಬೆಲ್ಲ ಮಾಡುವ ಗೋಜಿಗೆ ಹೊಗುವುದಿಲ್ಲ. ಅಂಗಡಿಯಲ್ಲಿ ಬಗೆಬಗೆಯ ಮಿಶ್ರಣ ದೊರೆಯುತ್ತಿದ್ದು, ಅದನ್ನು ತಂದು ಹಬ್ಬ ಮಾಡುತ್ತಾರೆ.

ಟೆಕ್ಕಿಗಳಿಂದ ಹಣದಾಸೆಗಾಗಿ ಮ್ಯಾಟ್ರೋಮೋನಿ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ

ಇದು ನಗರ ಪ್ರದೇಶದ ಕಥೆಯಲ್ಲ ಗ್ರಾಮೀಣ ಭಾಗದ ಕೆಲವರು ರೆಡಿಮೆಡ್‍ಗೆ ಆಕರ್ಷಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಸಿದ್ಧ ಪಡಿಸಿದ ಎಳ್ಳು-ಬೆಲ್ಲ ಕೆಜಿಗೆ 250 ರಿಂದ 300 ರೂ.ಗೆ ಮರಾಟ ಮಾಡಲಾಗುತ್ತಿದೆ. ಚಳಿಗಾಲದಲ್ಲಿ ಎಳ್ಳು-ಬೆಲ್ಲ, ಕೊಬ್ಬರಿ ಸೇವಿಸಿದರೆ ಚರ್ಮ ಒಡೆಯುವುದಿಲ್ಲ ಎಂಬ ವೈಜ್ಞಾನಿಕ ಕಾರಣದಿಂದ ಹಬ್ಬದ ಹೆಸರಿನಲ್ಲಾದರೂ ಜನರು ಎಳ್ಳು-ಬೆಲ್ಲ ಸವಿಯಲಿ ಎಂದು ಹಿರಿಯರು ಸಂಪ್ರದಾಯ ಮಾಡಿದ್ದರು. ಆದರೆ ನಮ್ಮ ಜನ ಆಧುನೀಕರಣಕ್ಕೆ ಜೋತು ಬಿದ್ದು ನೆಪಮಾತ್ರಕ್ಕೆ ಹಬ್ಬ ಮಾಡಿ ರೆಡಿಮೇಡ್ ತಿನ್ನುತ್ತಾರೆ. ಇದರಲ್ಲಿ ಯಾವ ಪದಾರ್ಥವೂ ಸಮ ಪ್ರಮಾಣದಲ್ಲಿ ಇರುವುದಿಲ್ಲ.

ಬೆಂಗಳೂರಿನ ಕೆಆರ್ ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ವಿಜಯನಗರ, ಜಯನಗರ, ದಾಸರಹಳ್ಳಿ, ಕೆಆರ್‍ಪುರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗೆಣಸು, ಕಬ್ಬು, ಅವರೆಕಾಯಿ, ಕಡಲೆಕಾಯಿ ರಾಶಿ ರಾಶಿ ಬಂದಿದ್ದು, ಖರೀದಿ ಭರಾಟೆ ಜೋರಾಗಿದೆ. ಇನ್ನು ಹೂ-ಹಣ್ಣುಗಳ ಬೆಲೆಯೂ ಸಹ ತುಸು ಹೆಚ್ಚಾಗಿದೆ. ಏಲಕ್ಕಿ ಬಾಳೆ ಕೆಜಿ 100ರೂ.ಗೆ ಮರಾಟವಾಗುತ್ತಿದೆ.

ಯಾವ ಯಾವ ಬೆಲೆ ಎಷ್ಟಿದೆ ಅನ್ನೋದು ನೊಡುವುದಾದರೆ ಸಿದ್ಧ ಎಳ್ಳು-ಬೆಲ್ಲ ಮಿಶ್ರಣ ಕೆಜಿಗೆ 250- 300 ರೂ., ಕಬ್ಬು ಜೋಡಿ 80-100ರೂ., ಹಸಿಕಡಲೆಕಾಯಿ ಕೆಜಿ 100-150ರೂ., ಅವರೆಕಾಯಿ 60-80ರೂ., ಏಕಕ್ಕಿಬಾಳೆ 100-120ರೂ., ಸಕ್ಕರೆ ಅಚ್ಚು 200 ರೂ.ಗೆ ಮರಾಟವಾಗುತ್ತಿದೆ. ಇನ್ನೂ ಹಬ್ಬಕ್ಕೆ ಮೂರು ದಿನ ಬಾಕಿ ಉಳಿದಿದ್ದು ಇಂದಿನಿಂದಲೇ ಜನರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.

RELATED ARTICLES

Latest News