Sunday, September 8, 2024
Homeಅಂತಾರಾಷ್ಟ್ರೀಯ | Internationalನಮ್ಮ ಪೈಲಟ್‌ಗಳಿಗೆ ಭಾರತ ಕೊಟ್ಟ ಯುದ್ಧ ವಿಮಾನಗಳನ್ನು ನಡೆಸುವ ಸಾಮರ್ಥ್ಯವಿಲ್ಲ : ಮಾಲ್ಡೀವ್ಸ್ ರಕ್ಷಣಾ ಸಚಿವ

ನಮ್ಮ ಪೈಲಟ್‌ಗಳಿಗೆ ಭಾರತ ಕೊಟ್ಟ ಯುದ್ಧ ವಿಮಾನಗಳನ್ನು ನಡೆಸುವ ಸಾಮರ್ಥ್ಯವಿಲ್ಲ : ಮಾಲ್ಡೀವ್ಸ್ ರಕ್ಷಣಾ ಸಚಿವ

ಮಾಲೆ,ಮೇ 13- ಭಾರತ ದೇಣಿಗೆಯಾಗಿ ನೀಡಿದ ಮೂರು ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ತಮ್ಮ ಪೈಲಟ್‌ಗಳಿಗೆ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವರು ಅಲವತ್ತುಕೊಂಡಿದ್ದಾರೆ. ಚೀನಾ ಪರ ಧೋರಣೆಯ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಅವರ ಹಠಮಾರಿತನದಿಂದಾಗಿ ದ್ವೀಪ ರಾಷ್ಟ್ರದಿಂದ ಭಾರತದ 76 ರಕ್ಷಣಾ ಸಿಬ್ಬಂದಿ ನಿರ್ಗಮಿಸಿದ ಕೆಲವು ದಿನಗಳ ಬಳಿಕ ಅಲ್ಲಿನ ರಕ್ಷಣಾ ಸಚಿವ ಘಾಸೆನ್‌ ಮೌಮೂನ್‌ ಅವರು, ಮಾಲ್ಡೀವ್ಸ್ ಸೇನೆಯು ಅಷ್ಟು ಸಮರ್ಥ ಪೈಲಟ್‌ಗಳನ್ನು ಹೊಂದಿಲ್ಲ ಎಂದಿದ್ದಾರೆ.

ರಾಜಧಾನಿ ಮಾಲೆಯ ಅಧ್ಯಕ್ಷರ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಘಾಸೆನ್‌ ಮೌಮೂನ್‌ ಅವರು, ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಡಾರ್ನಿಯರ್‌ ಏರ್‌ಕ್ರಾಫ್ಟ್ ನ ಕಾರ್ಯಾಚರಣೆ ಸಲುವಾಗಿ ಮಾಲ್ಡೀವ್ಸ್ ನಲ್ಲಿದ್ದ ಭಾರತದ ಸೈನಿಕರನ್ನು ಹಿಂದಕ್ಕೆ ಪಡೆದಿರುವ ಕುರಿತು ವಿವರಣೆ ನೀಡುವಾಗ ಈ ಹೇಳಿಕೆ ಕೊಟ್ಟಿದ್ದಾರೆ.

ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಘಾಸೆನ್‌, ಹಿಂದಿನ ಸರ್ಕಾರಗಳ ನಡುವೆ ನಡೆದ ಒಪ್ಪಂದದಂತೆ ಕೆಲವು ಯೋಧರಿಗೆ ವಿಮಾನ ಹಾರಾಟ ತರಬೇತಿ ನೀಡುವುದನ್ನು ಆರಂಭಿಸಿದ್ದರೂ, ಭಾರತೀಯ ಸೇನೆ ದೇಣಿಗೆಯಾಗಿ ನೀಡಿರುವ ಮೂರು ವಿಮಾನಗಳ ಕಾರ್ಯಾಚರಣೆ ನಡೆಸುವಂತಹ ಸೈನಿಕರು ಮಾಲ್ಡೀವ್‌್ಸ ನ್ಯಾಷನಲ್‌ ಡಿಫೆನ್‌್ಸ ಫೋರ್ಸ್‌ನಲ್ಲಿ (ಎಂಎನ್‌ಡಿಎಫ್‌) ಇಲ್ಲ ಎಂದು ತಿಳಿಸಿದ್ದಾರೆ.

ಈ ಯುದ್ಧ ವಿಮಾನಗಳನ್ನು ಓಡಿಸಲು ವಿವಿಧ ಹಂತಗಳ ತರಬೇತಿ ಮುಗಿಸುವುದು ಅಗತ್ಯವಾಗಿದೆ. ನಮ್ಮ ಯೋಧರು ವಿವಿಧ ಕಾರಣಗಳಿಂದಾಗಿ ಈ ತರಬೇತಿಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಎರಡು ಹೆಲಿಕಾಪ್ಟರ್‌ಗಳು ಮತ್ತು ಒಂದು ಡಾರ್ನಿಯರ್‌ ಏರ್‌ಕ್ರಾಪ್ಟರ್‌ನ ಸಂಪೂರ್ಣ ಕಾರ್ಯಾಚರಣೆಗೆ ನಡೆಸುವ ಸಾಮರ್ಥ್ಯ ಅಥವಾ ಪರವಾನಗಿ ಪಡೆದ ಯಾವುದೇ ವ್ಯಕ್ತಿ ನಮ್ಮ ಪಡೆಯಲ್ಲಿ ಇಲ್ಲ ಎಂದು ರಕ್ಷಣಾ ಸಚಿವ ಹೇಳಿದ್ದಾರೆ.

ಭಾರತೀಯ ಸಿಬ್ಬಂದಿ ವಾಪಸ್‌ :
ಎರಡು ದೇಶಗಳ ನಡುವಿನ ಒಪ್ಪಂದದ ಭಾಗವಾಗಿ ಫೆಬ್ರವರಿಯಲ್ಲಿ ನಿಗದಿ ಮಾಡಿದ್ದ ಗಡುವನ್ನು ಪಾಲಿಸಿರುವ ಭಾರತೀ ಸೇನಾ ಸಿಬ್ಬಂದಿ, ಶುಕ್ರವಾರ ಮಾಲ್ಡೀವ್ಸ್ ನಿಂದ ನಿರ್ಗಮಿಸಿದ್ದಾರೆ. ಮೇ 10ರಂದು ಭಾರತದ ಎಲ್ಲಾ ಸೇನಾ ಸಿಬ್ಬಂದಿ ತನ್ನ ನೆಲವನ್ನು ತೊರೆಯಬೇಕು ಎಂದು ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ಗಡುವು ನೀಡಿದ್ದರು.

ಭಾರತೀಯ ಸೇನಾ ಸಿಬ್ಬಂದಿ ಸ್ಥಾನಕ್ಕೆ ನಾಗರಿಕರನ್ನು ನಿಯೋಜಿಸಲಾಗಿದೆ. ಇದು ದಕ್ಷಿಣದಲ್ಲಿನ ಸಣ್ಣ, ಆದರೆ ಕಾರ್ಯತಂತ್ರದ ದೃಷ್ಟಿಯಿಂದ ಭಾರತಕ್ಕೆ ಬಹಳ ಮುಖ್ಯವಾಗಿರುವ ದ್ವೀಪ ರಾಷ್ಟ್ರದಲ್ಲಿ ಚೀನಾದ ಪ್ರಭಾವ ಹೆಚ್ಚಾಗಿರುವುದು ಭಾರತಕ್ಕೆ ಹಿನ್ನಡೆ ಉಂಟುಮಾಡಿದೆ.

ಘಾಸೆನ್‌ ಅವರ ಹೇಳಿಕೆಗೆ ವಿರೋಧಾಭಾಸ ಎಂಬಂತೆ, ಮುಯಿಜ್ಜು ಆಡಳಿತದ ಹಿರಿಯ ಅಧಿ ಕಾರಿಗಳು ಹಿಂದಿನ ಸರ್ಕಾರವನ್ನು ಟೀಕಿಸಿದ್ದು, ಎಂಎನ್‌ಡಿಎಫ್‌ನಲ್ಲಿ ಸಮರ್ಥ ಪೈಲಟ್‌ಗಳು ಇದ್ದರು ಎಂದು ಹೇಳಿದ್ದಾರೆ.

ದೇಣಿಗೆ ನೀಡಿರುವ ಭಾರತ :
ಹಿಂದಿನ ಅಧ್ಯಕ್ಷರಾದ ಮೊಹಮದ್‌ ನಶೀದ್‌ ಮತ್ತು ಅಬ್ದುಲ್ಲಾ ಯಮೀನ್‌ ಅವರ ಸರ್ಕಾರಗಳಿದ್ದಾಗ ಭಾರತ ನೀಡಿದ ಹೆಲಿಕಾಪ್ಟರ್‌ಗಳು ಮತ್ತು ಕಳೆದ ಬಾರಿಯ ಅಧ್ಯಕ್ಷ ಇಬ್ರಾಹಿಂ ಮೊಹಮದ್‌ ಸೊಲಿಹ್‌ ಸರ್ಕಾರ ಇದ್ದಾಗ ನೀಡಿದ ಡಾರ್ನಿಯರ್‌ ಏರ್‌ಕ್ರಾಫ್ಟ್ ಗಳನ್ನು ಚಲಾಯಿಸಲು ಮಾಲ್ಡೀವ್ಸ್ ಸೈನಿಕರಿಗೆ ತರಬೇತಿ ನೀಡುವುದೇ ದ್ವೀಪ ರಾಷ್ಟ್ರಕ್ಕೆ ಭಾರತೀಯ ಸೈನಿಕರು ಆಗಮಿಸಲು ಮುಖ್ಯ ಕಾರಣವಾಗಿತ್ತು ಎಂದು ಅಲ್ಲಿನ ವೆಬ್‌ ಪತ್ರಿಕೆಯೊಂದು ವರದಿ ಮಾಡಿದೆ.

RELATED ARTICLES

Latest News