ಬೆಂಗಳೂರು,ಜೂ.15- ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ಜು.1 ರಿಂದ ಮೊಬೈಲ್ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಹಲವು ದಿನಗಳಿಂದ ಚಾಲನೆಯಲ್ಲಿದ್ದ ಪ್ರಕ್ರಿಯೆಗಳು ಅಂತಿಮ ಹಂತಕ್ಕೆ ಬಂದಿದ್ದು, ಕೊನೆಗೂ ಸರ್ಕಾರಿ ಆದೇಶ ಹೊರಬಿದ್ದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಿಗುವುದಿಲ್ಲ ಎಂಬ ದೂರಿಗೆ ಹಿತೈಷಿ ಹಾಡಲು ನೂತನ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಪ್ರಸ್ತುತ ಬಳಸಲ್ಪಡುತ್ತಿರುವ ಹಾಜರಾತಿ ನಿರ್ವಹಣಾ ವ್ಯವಸ್ಥೆಯ ಹಾರ್ಡ್ವೇರ್, ಸಾಫ್್ಟವೇರ್ಗಳೂ ಆಧಾರ್ ಆಧಾರಿತ ಬಯೋಮೆಟ್ರಿಕ್ ಪ್ರಮಾಣಿಕರಣವನ್ನು ಅವಲಂಬಿಸಿದೆ. ಹಾರ್ಡ್ವೇರ್ ಸಾಧನಗಳಿಗೆ ಆಗಾಗ್ಗೆ ದುರಸ್ತಿ ಮತ್ತು ಆವರ್ತಕ ಬದಲಾವಣೆಗಳ ಅಗತ್ಯವಿದೆ. ಇದು ಗಣನೀಯ ವೆಚ್ಚಗಳಿಗೆ ಕಾರಣವಾಗಿತ್ತು. ಬಯೋಮೆಟ್ರಿಕ್ ಸಾಧನಗಳ ಸ್ಥಿರ ಸ್ವರೂಪದಿಂದ ಹಾಜರಾತಿ ಗುರುತಿಸುವಿಕೆಯನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸಿದೆ. ಕ್ಷೇತ್ರ ಸಂಬಂಧಿ ದೂರ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಇದು ಸಹಕಾರಿಯಾಗಿರಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಹೊಸ ಸೌಲಭ್ಯದಲ್ಲಿ ಮೊಬೈಲ್ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ರಾಜ್ಯದ 12 ಸಾವಿರ ಆರೋಗ್ಯ ಸಂಸ್ಥೆಗಳನ್ನೊಳಗೊಂಡು ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಆಡಳಿತದ ಚೌಕಟ್ಟಿನಲ್ಲಿ ಮೊಬೈಲ್ ಹಾಜರಾತಿ ವ್ಯವಸ್ಥೆಯಿದ್ದು, ಇನ್ನು ಮುಂದೆ ವೈದ್ಯರ ಕರಾರುವಕ್ಕಾದ ಲಭ್ಯತೆಯನ್ನು ಸರ್ಕಾರ ಖಾತ್ರಿಪಡಿಎಸಲಿದೆ ಎಂದು ಸಚಿವರು ತಿಳಿಸಿದ್ದಾರೆ.