ಬೆಂಗಳೂರು, ಮೇ 16-ಜಿಲ್ಲೆಗಳಲ್ಲಿ ಅತ್ಯಂತ ದುರ್ಬಲವಾಗಿರುವ ಗ್ರಾಮ ಪಂಚಾಯತಿಗಳನ್ನು ಆರಿಸಿಕೊಂಡು ಅವುಗಳ ಸಮಗ್ರ ಅಭಿವೃದ್ಧಿ ಸಲುವಾಗಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕಾಯಕ ಗ್ರಾಮ ಯೋಜನೆಯಡಿ ದತ್ತು ಸ್ವೀಕಾರ ಮಾಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.
ಗ್ರಾಮೀಣ ನೀರು ಸರಬರಾಜು ಇಲಾಖೆ ಬೆಂಗಳೂರಿನಲ್ಲಿ ಗ್ರಾಮೀಣ ಕರ್ನಾಟಕದ ಕುಡಿಯುವ ನೀರು ಸರಬರಾಜು ಸ್ಥಿಗತಿಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಂಜನಿಯರ್ ಗಳನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.
ಗ್ರಾಮಗಳಲ್ಲಿ ಸುಸ್ಥಿರ ಜಲ ಹಾಗೂ ಸುಸ್ಥಿರ ವಿದ್ಯುತ್ ಸರಬರಾಜು ಮಾಡುವ ಮಹತ್ತರ ಆಶಯವನ್ನು ಈ ಬಾರಿ ಕಾರ್ಯಗತಗೊಳಿಸಲು ಮೊದಲ ಹೆಜ್ಜೆ ಇರಿಸಲಾಗಿದೆ. ಗ್ರಾಮಗಳ ಸುಧಾರಣೆ, ಆರ್ಥಿಕ ಸುಸ್ಥಿರತೆಯ ಬಗ್ಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು. ಪ್ರವಾಸಿ ಸ್ಥಳಗಳಲ್ಲಿನ ಗ್ರಾಮ ಪಂಚಾಯತಿ ಆಸ್ತಿಗಳನ್ನು ವರಮಾನ ಮೂಲ ಆಸ್ತಿಗಳನ್ನಾಗಿಸಬೇಕು ಎಂದು ಅವರು ಸಲಹೆ ಮಾಡಿದರು.
ಭಾರತ ದೇಶದಲ್ಲಿನ ಪಂಚಾಯತ್ ಸಂಸ್ಥೆಗಳಲ್ಲಿ ಕರ್ನಾಟಕ ಅಳವಡಿಸಿಸಿಕೊಂಡಿರುವ ಪದ್ಧತಿಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಥಮ ಸ್ಥಾನ ನೀಡಿದೆ. ಈ ಬಾರಿ ಗ್ರಾಮ ಪಂಚಾಯತಿಗಳಲ್ಲಿ 1271 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಕರಸಂಗ್ರಹಣೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಎರಡೂ ಸಾಧನೆಗಳಿಗೆ ಸಾರಥ್ಯ ವಹಿಸಿದ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಸಚಿವರು ಶ್ಲಾಘಿಸಿದರು.
ಜನರಲ್ಲಿ ಜಾಗೃತಿ ಮೂಡಿಸಿ: ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ. ಅತೀಕ್ ಮಾತನಾಡಿ, ರಾಜ್ಯದಲ್ಲಿ ನದಿ ನೀರಿನ ಮೂಲಗಳನ್ನು ಅವಲಂಭಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು ಮಳೆಗಾಲ ಹೊರತುಪಡಿಸಿ ಇತರೆ ಸಮಯದಲ್ಲಿ ನದಿಗಳಲ್ಲಿ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗುವ ಕಾರಣ ನಿರಂತರ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ.
ನೀರಿನ ಸೋರಿಕೆಯಿಂದಾಗಿ ನೀರು ಕಲುಷಿತವಾಗುವ ಸಂಭವ ಹೆಚ್ಚಿರುತ್ತದೆ. ಇದರಿಂದ ಜನರಲ್ಲಿ ಅನಾರೋಗ್ಯ ಉಂಟಾಗುವ ಕಾರಣ ನಿಯಮಿತವಾಗಿ ನೀರನ್ನು ಪರೀಕ್ಷೆ ಮಾಡಿ ಸರಬರಾಜು ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಮುಖ್ಯ ಅಭಿಯಂತರ ಎಜಾಜ್ ಹುಸೇನ್ ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನ ಮತ್ತು ಪ್ರಗತಿ ಕುರಿತು ಮಾಹಿತಿ ನೀಡಿದರು.
ಡಿಎಸ್ಎಸ್ ಅನುಷ್ಠಾನ ಮತ್ತು ಕಾರ್ಯಾಚರಣೆ ತರಬೇತಿ ಹಾಗೂ ಮುಂದಿನ ಹಂತಗಳಿಂದ ಒಳನೋಟಗಳ ಕುರಿತು ಅಮೆರಿಕ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರೊ.ರಾಬರ್ಟ್ ಹೊವ್ ವಿಷಯ ಮಂಡನೆ ಮಾಡಿದರು.
ನಿರ್ವಹಣಾ ಕ್ರಮಗಳು ಮತ್ತು ಒಪ್ಪಂದದ ಮೇಲ್ವಿಚಾರಣೆಗಾಗಿ ಡಿಎಸ್ಸ್ ಮತ್ತು ಬಳಕೆಯ ಡೇಟಾ ಅಗತ್ಯತೆಗಳು, ವರದಿ ಮಾಡುವ ಪ್ರಕ್ರಿಯೆ ಕುರಿತು ಟೆಕ್ನಿಕಲ್ ಲೀಡ್ ಆಫ್ ಟೈಮ್ ಗ್ಲೋಬಲ್ ಡಂಕನ್ ಮ್ಯಾಕ್ಸಿಕ್ ಹೋಲ್ ವಿಷಯ ಮಂಡಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.