Sunday, April 28, 2024
Homeರಾಷ್ಟ್ರೀಯಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‍ಕುಮಾರ್ ರಾಜೀನಾಮೆ

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‍ಕುಮಾರ್ ರಾಜೀನಾಮೆ

ಪಾಟ್ನಾ,ಜ.28- ಕಳೆದ ಒಂದು ವಾರದಿಂದ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‍ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಸೇರ್ಪಡೆಯಾಗಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನವೇ ಬಿಹಾರದಲ್ಲಿ ನಡೆದ ಈ ರಾಜಕೀಯ ಬೆಳವಣಿಗೆ ಇಂಡಿಯಾ ಒಕ್ಕೂಟಕ್ಕೆ ಭಾರೀ ಹಿನ್ನೆಯೆಂದೇ ವ್ಯಾಖ್ಯಾನಿಸಲಾಗಿದೆ.

ಲಾಲೂಪ್ರಸಾದ್ ನೇತೃತ್ವದ ಆರ್‍ಜೆಡಿ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದ ನಿತೀಶ್‍ಕುಮಾರ್ ಇದೀಗ ಪುನಃ 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಂಜೆ 5 ಗಂಟೆಗೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಬಿಜೆಪಿಯಿಂದ ಸುಶೀಲ್‍ಕುಮಾರ್ ಮೋದಿ ಮತ್ತು ರಾಣಿದೇವಿ ಕೂಡ ಉಪಮುಖ್ಯಮಂತ್ರಿಗಳಾಗಿ ಅಕಾರ ಸ್ವೀಕರಿಸಲಿದ್ದು, ಈವರೆಗೂ ಆರ್‍ಜೆಡಿ ಬಳಿಯಿದ್ದ ಖಾತೆಗಳನ್ನು ಬಿಜೆಪಿಗೆ ನೀಡಲು ಸಮ್ಮತಿಸಲಾಗಿದೆ.


ಇದಕ್ಕೂ ಮುನ್ನ ಬೆಳಿಗ್ಗೆ ಪಾಟ್ನಾದಲ್ಲಿರುವ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರು, ಸಂಸದರು ಹಾಗೂ ಪ್ರಮುಖರ ಜೊತೆ ಸಭೆ ನಡೆಸಿದ ನಿತೀಶ್ ಕುಮಾರ್ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡಿದ ಬೆನ್ನಲ್ಲೇ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ತಮಗಿರುವ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ.

ಸಂಜೆ ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಎರಡು ಪಕ್ಷಗಳ ಮುಖಂಡರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ರಾಜೀನಾಮೆ ನೀಡಿದ ನಂತರ ರಾಜಭವನದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್‍ಕುಮಾರ್, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸರ್ಕಾರ ರಚನೆಗೂ ಹಕ್ಕು ಮಂಡಿಸಲಾಗಿದೆ. ಸಂಪುಟಕ್ಕೆ ಯಾರ್ಯಾರು ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ಕಾದು ನೋಡಿ ಎಂದರು.

ಈವರೆಗೂ ನಾನು ಮಹಾಘಟಬಂದನ್ ಭಾಗವಾಗಿ ಸರ್ಕಾರವನ್ನು ಮುನ್ನಡೆಸಿದ್ದೆ. ಆದರೆ ಕೆಲವು ಪರಿಸ್ಥಿತಿಗಳು ನನ್ನನ್ನು ಆಚೆಯಿಂದ ಬರುವಂತೆ ಮಾಡಿತು. ನಾನು ಏನೇ ನಿರ್ಧಾರ ತೆಗೆದುಕೊಂಡಿದ್ದರೂ ಅದು ಬಿಹಾರ ಮತ್ತು ಇಲ್ಲಿನ ಜನರ ಒಳಿತಿಗಾಗಿ. ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದು ಹೇಳಿದರು. ಇನ್ನೊಂದೆಡೆ ಬಿಜೆಪಿಯು ಪಕ್ಷದ ಹಿರಿಯ ನಾಯಕ ಸುಶೀಲ್‍ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ನಿತೀಶ್ ಕುಮಾರ್‍ಗೆ ಬೆಂಬಲ ನೀಡುವ ಶಾಸಕರ ಪತ್ರವನ್ನು ರಾಜ್ಯಪಾಲರಿಗೆ ನೀಡಿದೆ.

ಚರ್ಚೆಗೆ ಗ್ರಾಸವಾದ ಸೂರಜ್-ಶಿವಕುಮಾರ್ ಭೇಟಿ

78 ಶಾಸಕರನ್ನು ಹೊಂದಿರುವ ಬಿಜೆಪಿ ನಿತೀಶ್‍ಕುಮಾರ್ ಮುಖ್ಯಮಂತ್ರಿಯಾಗಲು ಒಪ್ಪಿಗೆ ಸೂಚಿಸಿದೆ.
ಬಿಹಾರದಲ್ಲಿ ಇದೀಗ ಜೆಡಿಯು, ಬಿಜೆಪಿ, ಎಚ್‍ಎಂಎಂ ನೇತೃತ್ವದ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈ ಹಿಂದೆ ನಿತೀಶ್‍ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿದ್ದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸೋಡಾ ಚೀಟಿ ಕೊಟ್ಟು ಆರ್‍ಜೆಡಿ ಜೊತೆ ಸರ್ಕಾರ ರಚನೆ ಮಾಡಿದ್ದರು. ಇತ್ತೀಚೆಗೆ ಎರಡೂ ಪಕ್ಷಗಳ ನಡುವೆ ಉಂಟಾದ ಮನಸ್ತಾಪದಿಂದ ನಿತೀಶ್‍ಕುಮಾರ್ ಬೇಸರಗೊಂಡಿದ್ದರು ಎಂದು ತಿಳಿದುಬಂದಿದೆ.

ಇಂಡಿಯಾ ಮೈತ್ರಿಕೂಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್‍ಕುಮಾರ್ ಪ್ರಧಾನಿ ನರೇಂದ್ರ ಮೋದಿ ಎದುರು ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಒತ್ತಡ ಹಾಕಿದ್ದರು. ಇತ್ತೀಚೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಮೈತ್ರಿಕೂಟದ ಪ್ರಮುಖರು ಸಂಚಾಲಕರಾಗಿ ಮುನ್ನಡೆಸಬೇಕೆಂದು ಮನವಿ ಮಾಡಿದ್ದರೂ ಅವರು ಹಿಂದೆ ಸರಿದಿದ್ದರು. ಇದೇ ಸಂದರ್ಭದಲ್ಲಿ ಬಿಹಾರದ ಹಿಂದುಳಿದ ಪ್ರಭಾವಿ ನಾಯಕ ಕರ್ಪೂರಿ ಠಾಕೂರ್‍ಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿತ್ತು.

ದಯಾಮರಣ ಕೋರಿ ಸುಪ್ರೀಂ ಮೆಟ್ಟಿಲೇರಲು ಸಿದ್ದವಾದ ಕೇರಳ ಕುಟುಂಬ

ಅವರ ನೂರನೇ ಜನ್ಮಶತಾಬ್ದಿ ಕಾರ್ಯಕ್ರಮದ ವೇಳೆ ನಿತೀಶ್‍ಕುಮಾರ್ ಮಾಡಿದ ಭಾಷಣ ಆರ್‍ಜೆಡಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಕರ್ಪೂರಿ ಠಾಕೂರ್ ಎಂದಿಗೂ ಕುಟುಂಬ ರಾಜಕಾರಣ ಮಾಡಲಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ವಿವಿಧ ಹುದ್ದೆಗಳನ್ನು ಅನುಭವಿಸಿದರೂ ಆಡಳಿತದಲ್ಲಿ ಎಂದಿಗೂ ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶ ನೀಡಿರಲಿಲ್ಲ ಎಂದು ಹೇಳಿದ್ದು ವಿವಾದದ ಕಿಡಿ ಹೊತ್ತಿಸಿತ್ತು.

ನಿತೀಶ್‍ಕುಮಾರ್ ತಮ್ಮ ಕುಟುಂಬವನ್ನೇ ಗುರಿಯಾಗಿಟ್ಟುಕೊಂಡು ಈ ಮಾತನ್ನು ಹೇಳಿದ್ದಾರೆ ಎಂದು ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯರವರು ಕೆಲವರಿಗೆ ಕುಟುಂಬದ ರಾಜಕಾರಣ ಏನೆಂದರೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಸಿಎಂ ವಿರುದ್ಧವೇ ವಾಗ್ದಾಳಿ ನಡೆಸಿದ್ದರು.

RELATED ARTICLES

Latest News