Saturday, July 27, 2024
Homeರಾಜ್ಯಕಾಂಗ್ರೆಸ್ ಸರ್ಕಾರ ಕನ್ನಡಿಗರ ಮೇಲೆ ಚಪ್ಪಡಿ ಕಲ್ಲು ಹಾಕಿದೆ : ಸಿಎಂಗೆ ಅಶೋಕ್ ತಿರುಗೇಟು

ಕಾಂಗ್ರೆಸ್ ಸರ್ಕಾರ ಕನ್ನಡಿಗರ ಮೇಲೆ ಚಪ್ಪಡಿ ಕಲ್ಲು ಹಾಕಿದೆ : ಸಿಎಂಗೆ ಅಶೋಕ್ ತಿರುಗೇಟು

ಬೆಂಗಳೂರು, ಡಿ.26- ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ತಲೆ ಮೇಲೆ ಬರೀ ಕಲ್ಲಲ್ಲ, ಚಪ್ಪಡಿ ಕಲ್ಲು ಹಾಕುತ್ತಿರುವುದು ಕಟು ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.

ಅಶೋಕ್ ಆರೋಪಕ್ಕೆ ಅಂಕಿಅಂಶಗಳ ಮೂಲಕ ನಿನ್ನೆ ಸಿದ್ದರಾಮಯ್ಯನವರು ಮಾರುತ್ತರ ನೀಡಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣವಾಗಿಯೇ ತಮ್ಮ ಅಕೃತ ಸಾಮಾಜಿಕ ಜಾಣತಾಣ ದಲ್ಲಿ ಸಾಲು ಸಾಲು ಪೋಸ್ಟ್ ಮಾಡಿರುವ ಅಶೋಕ್ ,ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡುವ ಕಲೆ ತಮಗೆ ಚೆನ್ನಾಗಿ ಕರಗತವಾಗಿದೆ. ಎಷ್ಟಾದರೂ ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರಲ್ಲವೇ? ಎಂದು ಕುಹಕವಾಡಿದ್ದಾರೆ.

15ನೇ ಹಣಕಾಸು ಆಯೋಗ ತನ್ನ 2020-21ರ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂ. ಶಿಫಾರಸು ಮಾಡಿದ್ದುದು ನಿಜ. ಆದರೆ 2021-22 ರಿಂದ 2025-26ರವರೆಗಿನ ತನ್ನ ಅಂತಿಮ ವರದಿಯಲ್ಲಿ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. ಇದು ಸತ್ಯಾಂಶ. ತಾವು ಹೇಳಿರುವುದು ಅರ್ಧ ಸತ್ಯವೆಂದು ತಮಗೂ ಗೊತ್ತು. ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕದ ನಂತರದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನಕ್ಕಾಗಿ 2020-21ನೇ ಹಣಕಾಸು ವರ್ಷದಿಂದ ಈವರೆಗೆ ಕರ್ನಾಟಕಕ್ಕೆ 6561.91 ಕೋಟಿ ರೂ. ಮೊತ್ತವನ್ನು 50 ವರ್ಷಗಳ ಬಡ್ಡಿ ರಹಿತ ಸಾಲವಾಗಿ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಬಡ್ಡಿ ಭರಿಸುತ್ತದೆ. ಇದು ಸತ್ಯವಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

3 ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ಇನ್ನು ತೆರಿಗೆ ಹಂಚಿಕೆ ವಿಷಯಕ್ಕೆ ಬಂದರೆ, 2004-14ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 81,795 ಕೋಟಿ ರೂ. ತೆರಿಗೆ ಹಂಚಿಕೆಯಾಗಿತ್ತು. ಎನ್‍ಡಿಎ ಸರ್ಕಾರದ ಅವಧಿಯಲ್ಲಿ 2014-24 (2023, ನವೆಂಬರ್ 17 ರವರೆಗೆ) 2.77 ಲಕ್ಷ ಕೋಟಿ ರೂ.ಗೂ ಹೆಚ್ಚು ಬಿಡುಗಡೆಯಾಗಿದೆ. ಅಂದರೆ ಯುಪಿಎ ಅವಗೆ ಹೋಲಿಸಿದರೆ 239% ಅಥವಾ 3.4 ಪಟ್ಟು ಹೆಚ್ಚಳವಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಅನುದಾನದ ವಿಷಯಕ್ಕೆ ಬಂದರೆ, 2004-14ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕವು 60,779 ಕೋಟಿ ರೂ. ಅನುದಾನವನ್ನು ಪಡೆದಿದ್ದರೆ, ಎನ್‍ಡಿಎ ಸರ್ಕಾರದ ಅವಧಿಯಲ್ಲಿ 2014-24ರ ನಡುವೆ (ಆರ್ಥಿಕ ವರ್ಷ 2022-23 ರವರೆಗೆ) 2.08 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಪಡೆದಿದೆ. ಅಂದರೆ … ಅವಧಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸಿಕ್ಕ ಕೇಂದ್ರ ಅನುದಾನ 243% ಅಥವಾ 3.4 ಪಟ್ಟು ಹೆಚ್ಚಳವಾಗಿದೆ ಎಂದು ಅಶೋಕ್ ಹೇಳಿದ್ದಾರೆ.

2009ರಿಂದ 2014ರ ಅವಯಲ್ಲಿ ಕರ್ನಾಟಕದವರೇ ಇಬ್ಬರು ರೈಲ್ವೆ ಖಾತೆ ಸಚಿವರಾಗಿದ್ದರೂ ಸಹ ಕರ್ನಾಟಕಕ್ಕೆ ಕೇವಲ 835 ಕೋಟಿ ದೊರೆತಿತ್ತು. ಅದೇ .. ಸರ್ಕಾರ ಬಂದ ಮೇಲೆ 2014-22ರ ಅವಧಿಯಲ್ಲಿ ಒಟ್ಟು 3,424 ಕೋಟಿ ಹಾಗೂ 2023-24 ಒಂದೇ ವರ್ಷದಲ್ಲಿ 7,561 ಕೋಟಿ ಅನುದಾನ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.

ಸಾಲ ಮನ್ನಾ ಆಸೆಗಾಗಿ ಬರ ಬರಲಿ ಎಂದು ರೈತರು ಆಸೆ ಪಡುತ್ತಾರೆ ಎಂದು ಉಡಾಫೆ ಮಾತಾಡುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ರೈತರಿಗೆ ಬರ ಪರಿಹಾರದ ವಿಷಯದ ಬಗ್ಗೆ ಮಾತನಾಡುವ ನೈತಿಕತೆಯೇ ಉಳಿದಿಲ್ಲ. ಕೇಂದ್ರ ಸರ್ಕಾರದ ಪ್ರಕ್ರಿಯೆ ಮುಗಿದ ಕೂಡಲೇ ರಾಜ್ಯ ಪಾಲಿನ ಪರಿಹಾರ ತಾನಾಗಿಯೇ ಬಂದೇ ಬರುತ್ತದೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ 2000 ರೂಪಾಯಿ ಇನ್ನು ಯಾಕೆ ರೈತರನ್ನು ತಲುಪಿಲ್ಲ? ಉತ್ತರ ಕೊಡಿ ಸಿದ್ದರಾಮಯ್ಯನವರೇ ಎಂದು ತಪರಾಕಿ ಕೊಟ್ಟಿದ್ದಾರೆ.

ಬಂದೂಕು ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿಗಳಾಗಿ 12 ವರ್ಷಗಳ ಕಾಲ ಒಂದು ರಾಜ್ಯವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವ ಇದೆ. ರಾಜ್ಯ ಸರ್ಕಾರಗಳ ಹಣಕಾಸಿನ ಇತಿಮಿತಿ, ಅಗತ್ಯತೆಗಳ ಬಗ್ಗೆ ಸಂಪೂರ್ಣ ಅರಿವಿದೆ, ಸಂವೇದನೆಯೂ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪ್ರಧಾನಿ ಮೋದಿ ಅವರಿಂದ ಕರ್ನಾಟಕ ಸೇರಿದಂತೆ ಯಾವ ರಾಜ್ಯಕ್ಕೂ ಎಂದಿಗೂ ಅನ್ಯಾಯವಾಗುವುದಿಲ್ಲ ಎಂದು ಅಶೋಕ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು, 14 ಬಾರಿ ಬಜೆಟ್ ಮಂಡಿಸಿರುವ ಅನುಭವ ಇರುವ ತಾವು ಆಂಕಿ-ಅಂಶಗಳನ್ನು ಅಧ್ಯಯನ ಮಾಡಿ, ವಾಸ್ತವಾಂಶ ಅರಿತು ಮಾತನಾಡಬೇಕು ಸಿದ್ದರಾಮಯ್ಯನವರೇ. ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ತಮಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

RELATED ARTICLES

Latest News