Thursday, May 2, 2024
Homeರಾಜ್ಯಜಮೀರ್ ವಿರುದ್ಧದ ಪ್ರತಿಭಟನೆ ಹಿಂಪಡೆದ ಪ್ರತಿಪಕ್ಷಗಳು

ಜಮೀರ್ ವಿರುದ್ಧದ ಪ್ರತಿಭಟನೆ ಹಿಂಪಡೆದ ಪ್ರತಿಪಕ್ಷಗಳು

ಬೆಳಗಾವಿ, ಡಿ.12- ಸಚಿವ ಜಮೀರ್ ಅಹಮ್ಮದ್ಖಾನ್ ರ ಹೇಳಿಕೆಯನ್ನು ವಿರೋಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯಿಂದ ನಡೆಸುತ್ತಿದ್ದ ಧರಣಿಯನ್ನು ಇಂದು ಹಿಂಪಡೆದರು. ವಿಧಾನಸಭೆಯ ಕಲಾಪದ ಆರಂಭದಲ್ಲೇ ವಿಪಕ್ಷಗಳ ಶಾಸಕರು ಧರಣಿಯನ್ನು ಮುಂದುವರೆಸಿದರು. ಗೃಹಸಚಿವ ಪರಮೇಶ್ವರ್ ಅವರು ಎದ್ದು ನಿಂತು, ಇಡೀ ದೇಶವೇ ನಮ್ಮನ್ನು ನೋಡುತ್ತಿದೆ.

ಇಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ನಿನ್ನೆಯಿಂದಲೂ ಧರಣಿ ನಡೆಸುತ್ತಿದ್ದೀರ. ಇದರಿಂದಾಗಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಗಮನ ಸೆಳೆಯುವ ಸೂಚನೆ. ಶಾಸನ ರಚನೆ ಸೇರಿದಂತೆ ಮಹತ್ವದ ಕಲಾಪಗಳಲ್ಲಿ ಪ್ರತಿಪಕ್ಷಗಳ ಶಾಸಕರು ಭಾಗವಹಿಸಿರಲಿಲ್ಲ ಎಂದು ವಿಷಾದಿಸಿದರು.

ಬರದ ಮೇಲೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯಬೇಕಿದೆ. ಅದರಲ್ಲಿ ಅವರು ಭಾಗವಹಿಸಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ವಿಪಕ್ಷ ನಾಯಕ ಆರ್.ಅಶೊಕ್ ಮಾತನಾಡಲು ಎದ್ದು ನಿಂತಾಗ ಸಭಾಧ್ಯಕ್ಷರು ಮಧ್ಯಪ್ರವೇಶಿಸಲು ಯತ್ನಿಸಿದರು. ನಮಗೂ ಮಾತನಾಡಲು ಅವಕಾಶ ನೀಡಬೇಕು. ಸಭಾಧ್ಯಕ್ಷರು ಆಡಳಿತ ಪಕ್ಷದ ಕಡೆಗಷ್ಟೇ ನೋಡಬಾರದು, ನಮ್ಮನ್ನೂ ಗಮನಿಸಬೇಕು. ಗೃಹಸಚಿವರು ಮಾತನಾಡಲು ಅವಕಾಶ ಕೊಟ್ಟಿದ್ದೀರ. ನಾನು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಮಧ್ಯಪ್ರವೇಶ ಮಾಡುವುದು ಬೇಡ ಎಂದರು.

ಇನ್ಷ್ಯೂರೆನ್ಸ್ ಕಂಪೆನಿ ಹೆಸರಲ್ಲಿ ಯಾಮಾರಿಸ್ತಾರೆ ಹುಷಾರ್..!

ಗೃಹಸಚಿವರು ಇದೇ ಮಾತುಗಳನ್ನು ನಿನ್ನೆಯೇ ಹೇಳಬಹುದಿತ್ತು. ಆದರೆ ನಮ್ಮನ್ನು ಸತಾಯಿಸಿ ಕಾಲಾಹರಣ ಮಾಡಲಾಗಿದೆ. ಸರ್ಕಾರದ ದೌರ್ಜನ್ಯಗಳು ಹೆಚ್ಚಾಗಿವೆ. ಕೂಗಾಡಿ ನಮ್ಮ ಗಂಟಲು ಒಣಗಿದೆ. ಸದನದ ಯಾವುದೇ ಕಲಾಪಗಳಲ್ಲೂ ತಾವು ಭಾಗವಹಿಸಲಾಗಿಲ್ಲ. ಸರ್ಕಾರ ನಿನ್ನೆ ಮಂಡಿಸಿದ ವಿವಿಧ ಮಸೂದೆಗಳಲ್ಲಿ ಜನರ ಮೇಲೆ 2500 ಕೋಟಿ ರೂ. ತೆರಿಗೆ ವಿಸಿದೆ. ಇದರ ಬಗ್ಗೆ ನಾವು ಪ್ರಸ್ತಾಪಿಸಬೇಕಿದೆ ಎಂದು ಅವರು ಹೇಳಿದರು.

ಸಂವಿಧಾನಬದ್ಧವಾದ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ಆಗಿದೆ ಎಂಬುದಷ್ಟೇ ನಮ್ಮ ಕಳಕಳಿ. ಇದರಲ್ಲಿ ವೈಯಕ್ತಿಕ ವಿಚಾರಗಳಿಲ್ಲ ಎಂದರು.ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಬೇಕೆಂಬುದು ನಮ್ಮ ಕಾಳಜಿ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಬಗ್ಗೆ ತಮ್ಮೊಂದಿಗೆ ಚರ್ಚೆ ಮಾಡಿದ್ದಾರೆ. ನಾವು ಧರಣಿಯನ್ನು ಹಿಂಪಡೆಯುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಳ ಕುರಿತು ಚರ್ಚೆಯನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು. ಅಗತ್ಯವಾದರೆ ಪ್ರಶ್ನೋತ್ತರ ಸೇರಿದಂತೆ ಎಲ್ಲಾ ಕಲಾಪಗಳನ್ನೂ ಬದಿಗಿರಿಸಿ ಎಂದು ಸಲಹೆ ನೀಡಿದರು.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಜಮೀರ್ ಅವರ ಹೇಳಿಕೆ ಬಗ್ಗೆ ಈಗಾಗಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅದರ ಹೊರತಾಗಿಯೇ ಸರ್ಕಾರ, ವಿಪಕ್ಷಗಳು ಮತ್ತು ತನ್ನ ಪೀಠದ ಪ್ರತ್ಯೇಕ ಅಭಿಪ್ರಾಯಗಳನ್ನು ಹೊಂದಿರುವುದು ಸರಿಯಲ್ಲ. ಹೇಳಿಕೆ ನೀಡಿ ಒಂದು ತಿಂಗಳು ಕಳೆದಿವೆ. ಕಳೆದ ಒಂದು ವಾರದಿಂದ ಸದನ ಉತ್ತಮವಾಗಿ ನಡೆಯುತ್ತಿತ್ತು. ವಿಪಕ್ಷ ನಾಯಕರು ನಿನ್ನೆ ಏಕಾಏಕಿ ವಿಷಯ ಪ್ರಸ್ತಾಪಿಸಿ ಧರಣಿ ನಡೆಸುವುದು ಸರಿಯಲ್ಲ.

ನಿಯಮಾನುಸಾರ ನೋಟಿಸ್ ಕೊಟ್ಟರೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಸಭಾಧ್ಯಕ್ಷ ಪೀಠ, ಸದನ, ಶಾಸಕರ ಗೌರವ ತಿಳಿಯಬೇಕು ಎಂಬುದು ಎಲ್ಲರ ಕಾಳಜಿಯಾಗಿದೆ. ನಿಯಮಬದ್ಧವಾಗಿ ಕಾರ್ಯಕಲಾಪ ನಡೆಸುವುದು ನಮ್ಮ ಬದ್ಧತೆ ಎಂದು ಹೇಳಿದರು.
ಬಳಿಕ ವಿಪಕ್ಷಗಳ ಶಾಸಕರು ಧರಣಿಯನ್ನು ಹಿಂಪಡೆದರು.

RELATED ARTICLES

Latest News