Home Blog Page 1915

ವಿಶ್ವವಿಖ್ಯಾತ ದಸರಾಕ್ಕೆ ಬರದ ಸಿದ್ಧತೆ, ವೇಳಾಪಟ್ಟಿ ಬಿಡುಗಡೆ

ಬೆಂಗಳೂರು,ಅ.5- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಶರನ್ನಾವರಾತ್ರಿ ಪ್ರಯುಕ್ತ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅ.9ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಆಗಲಿದೆ. ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾವಿಧಿ ವಿಧಾನಗಳು ನಡೆಯಲಿದೆ. ಬಳಿಕ ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಆಗಲಿದೆ. ಬಳಿಕ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ.

ಅ.15ರಂದು 6 ಗಂಟೆಯಿಂದ 6:25 ವರೆಗೆ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 07:05ರಿಂದ 7:45ರ ಶುಭ ಲಗ್ನದಲ್ಲಿ ಕಂಕಣ ಧಾರಣೆ ನಡೆಯಲಿದೆ. ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ.

ನಂತರ 9:45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 10:15ಕ್ಕೆ ಕಳಸ ಪೂಜೆ ಹಾಗೂ ಸಿಂಹಾಸನ ಪೂಜೆ, ಬಳಿಕ ಬೆಳಗ್ಗೆ 11:30ರಿಂದ 11:50ಕ್ಕೆ ಖಾಸಗಿ ದರ್ಬಾರ್ ನಡೆಯಲಿದೆ. ಅಂದು ಮಧ್ಯಾಹ್ನ 1:45ರಿಂದ 02:05ರ ಅವಧಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆ ಮಾಡಲಾಗುತ್ತದೆ.

ಅ.20ರಂದು 10:05ರಿಂದ 10:25ಕ್ಕೆ ಸರಸ್ವತಿ ಪೂಜೆ, ಅ.21ರಂದು ಕಾಳರಾತ್ರಿ ಪೂಜೆ, ಅ.22ರಂದು ಮತ್ತು ಅ.23ರಂದು ದುರ್ಗಾಷ್ಠಮಿ ಪೂಜೆ ನಡೆಯಲಿದೆ. ಅದೇ ದಿನ ಬೆಳಗ್ಗೆ 5:30ಕ್ಕೆ ಚಂಡಿಹೋಮದೊಂದಿಗೆ ಪೂಜೆ ಆರಂಭವಾಗಲಿದೆ. ಆ ಸಮಯದಲ್ಲಿ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಸರಿ ಬಣ್ಣ ಏಕೆ..?

ಬಳಿಕ ಬೆಳಗ್ಗೆ 6:05ರಿಂದ 06:15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಆಗಲಿವೆ. ಬೆಳಗ್ಗೆ 07:15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ ತರಲಾಗುತ್ತದೆ. ಬೆಳಗ್ಗೆ 9:30ಕ್ಕೆ ಚಂಡಿಹೋಮ ಪೂರ್ಣಾಹುತಿ ನಡೆಯಲಿದೆ.

ಬೆಳಗ್ಗೆ 11:45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಬರಲಿವೆ. ಬಳಿಕ ಮಧ್ಯಾಹ್ನ 12:20ಕ್ಕೆ ಆಯುಧಪೂಜೆ ಆರಂಭವಾಗಲಿದೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ ನಡೆಯಲಿದೆ.

ಬಳಿಕ ಸಂಜೆ ಖಾಸಗಿ ದರ್ಬಾರ್ ಇರಲಿದೆ. ನಂತರ ಸಿಂಹ ವಿಸರ್ಜನೆ, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಆಗಲಿದೆ. ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಮಾಡಿ, ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಮಲದೇವಿ ದರ್ಶನ ಪಡೆಯಲಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

ಅ.24ರಂದು ವಿಜಯದಶಮಿ ಆಚರಣೆ ನಡೆಯಲಿದೆ. ಬೆಳಗ್ಗೆ 9:45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 11 ರಿಂದ 11:40ರ ವೇಳೆಗೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ನಡೆಯಲಿದೆ. ಬಳಿಕ ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆಯನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ.

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ಬೆಂಗಳೂರು,ಅ.5- ಬಿಟ್‍ಕಾಯಿನ್ ಹಗರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ದಳ, ಕರ್ನಾಟಕ ಸರ್ಕಾರದ ಇ -ಪ್ರಕ್ಯೂರ್ಮೆಂಟ್ ವೆಬ್‍ಸೈಟ್ ಹ್ಯಾಕ್ ಮಾಡಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿದ್ದು, ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪಿಯನ್ನು ಪಂಜಾಬ್‍ನ ಲೂದಿಯಾನದಲ್ಲಿ ಬಂಧಿಸಿದ್ದಾರೆ.

ಅಂತರಾಷ್ಟ್ರೀಯ ಕುಖ್ಯಾತಿಯ ಶ್ರೀಕಿ ನಡೆಸಿದ ಹ್ಯಾಕರ್ ಕೃತ್ಯದಿಂದ ಸಂಪಾದಿಸಿದ ಹಣವನ್ನು ಸುರಕ್ಷಿತ ಖಾತೆಗಳಿಗೆ ವರ್ಗಾವಣೆ ಮಾಡಿರುವ ಮೂಲಗಳ ಬೆನ್ನು ಬಿದ್ದಿರುವ ಎಸ್‍ಐಟಿ ತಂಡ ಲೂದಿಯಾನದಲ್ಲಿ ಆರೋಪಿ ಅರವಿಂದರ್ ಸಿಂಗ್‍ನನ್ನು ಬಂಧಿಸಿದೆ. ಸಂಕೀರ್ಣವಾದ ಈ ಪ್ರಕರಣದಲ್ಲಿ ಜಾಲದ ಜಾಡು ಹಿಡಿದು ಹೋದಂತೆ ಒಂದೊಂದೇ ಕೊಂಡಿಗಳು ತೆರೆದುಕೊಳ್ಳುತ್ತಿವೆ. ಅದರ ಭಾಗವಾಗಿ ಅರವಿಂದರ್ ಸಿಂಗ್ ಎಸ್‍ಐಟಿ ಬಲೆಗೆ ಬಿದ್ದಿದ್ದಾನೆ.

ಶ್ರೀಕಿ ಇ-ಪ್ರಕ್ಯೂರ್ಮೆಂಟ್ ವೆಬ್‍ಸೈಟ್ ಹ್ಯಾಕ್ ಮಾಡಿದ ವೇಳೆ 1.5 ಕೋಟಿ ರೂ.ಗಳನ್ನು ದೆಹಲಿಯ ವ್ಯಕ್ತಿಗಳಿಗೆ ಹಾಗೂ ಮತ್ತೊಂದು ಚಹಂತದಲ್ಲಿ ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಗಳಿಗೆ 10.5 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಅಕ್ರಮವಾದ ಹ್ಯಾಕಿಂಗ್ ಮೂಲಕ ಶ್ರೀಕಿ ಹಣ ಸಂಪಾದಿಸುತ್ತಿದ್ದರೆ ಅದನ್ನು ಬೇರೆ ಬೇರೆಯಾದ ಸುರಕ್ಷಿತ ಖಾತೆಗಳಿಗೆ ವರ್ಗಾವಣೆ ಮಾಡಲು ದೊಡ್ಡ ಜಾಲವೇ ಕೆಲಸ ಮಾಡುತ್ತಿತ್ತು. ಹಣ ಆನ್‍ಲೈನ್ ನಲ್ಲಿ ವರ್ಗಾವಣೆಯಾಗಿರುವುದರಿಂದ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂಬ ಧೈರ್ಯದ ಮೇಲೆ ಬಹಳಷ್ಟು ಅಕ್ರಮಗಳು ನಡೆದಿವೆ ಎಂದು ಹೇಳಲಾಗಿದೆ.

ಮನಿಲ್ಯಾಂಡ್ರಿಂಗ್ ಕಾಯ್ದೆಯನ್ನು ಉಲ್ಲಂಘಿಸಿ ಕೋಟ್ಯಂತರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿರುವುದು ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಬಿಟ್‍ಕಾಯಿನ್ ಮತ್ತು ಇ-ಪ್ರಕ್ಯೂರ್ಮೆಂಟ್ ಹಗರಣದಲ್ಲಿ ಹಣ ಯಾರಿಗೆಲ್ಲಾ ತಲುಪಿದೆ ಎಂಬುದು ಮೊದಲಿನಿಂದಲೂ ಕುತೂಹಲದ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಕಂಡುಕೊಳ್ಳಲು ಎಸ್‍ಐಟಿ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಮೊದಲು ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ಹಾಗೂ ತಾಂತ್ರಿಕ ಮಾಹಿತಿಯನ್ನು ಆಧರಿಸಿ ಎಸ್‍ಐಟಿ ತಂಡದ ತನಿಖಾಕಾಧಿರಿಗಳು ಅತ್ಯಂತ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆಯಿಂದ ಜಾಲದ ಸಿಕ್ಕುಗಳನ್ನು ಒಂದೊಂದಾಗಿ ಬಿಡಿಸಲಾರಂಭಿಸಿದ್ದಾರೆ. ದೆಹಲಿ ಮತ್ತು ನಾಗ್ಪುರದಲ್ಲಿ ಹಣ ಸ್ವೀಕರಿಸಿದ ವ್ಯಕ್ತಿಗಳು ಮತ್ತು ಅವರಿಂದ ಮುಂದುವರೆದು ಯಾರಿಗೆಲ್ಲಾ ನಗದು ರವಾನೆಯಾಗಿದೆ ಎಂಬುದರ ಕುರಿತು ವಿಚಾರಣೆ ಮುಂದುವರೆಯುವ ಸಾಧ್ಯತೆ ಇದೆ.

ಅಂತರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ 2019 ರಲ್ಲಿ ಮಾದಕ ವ್ಯಸನ ಪ್ರಕರಣವೊಂದರಲ್ಲಿ ಸಿಲುಕಿದ್ದ. ವಿಚಾರಣೆ ವೇಳೆ ಆತ ರಾಜ್ಯಸರ್ಕಾರದ ಇ-ಪ್ರಕ್ಯೂರ್ಮೆಂಟ್ ಅನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ.ಗಳನ್ನು ಲಪಟಾಯಿಸಿರುವುದಾಗಿ ಬಾಯ್ಬಿಟ್ಟಿದ್ದ. ಅದೇ ರೀತಿ ಪೋಕರ್ ಸೇರಿದಂತೆ ವಿವಿಧ ಆನ್‍ಲೈನ್ ಗೇಮ್‍ಗಳ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದ. ಅದು ಮುಂದುವರೆದು ಬಿಟ್‍ಕಾಯಿನ್ ಹಗರಣಕ್ಕೂ ಸಂಪರ್ಕಗೊಂಡಿತ್ತು.

ಅ.11ರಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ 3 ದಿನ ಜೆಡಿಎಸ್‍ನ ಕೋರ್ ಕಮಿಟಿ ಪ್ರವಾಸ

ಆರಂಭದಲ್ಲಿ ತನಿಖೆ ನಡೆಸಿದ್ದ ಸಿಸಿಬಿ ಪೋಲೀಸರು ಶ್ರೀಕಿ ಸೇರಿದಂತೆ 11 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಆದರೆ ಹಣ ವರ್ಗಾವಣೆಯಾದ ಮೂಲಗಳ ಕುರಿತು ತನಿಖೆ ನಡೆಸಿರುವ ಸಾಧ್ಯತೆಗಳು ಕ್ಷೀಣವಾಗಿವೆ. ಹಗರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆ ವೇಳೆ ವಿರೋಧಪಕ್ಷದಲ್ಲಿದ್ದ ಕಾಂಗ್ರೆಸ್ ಬಿಟ್‍ಕಾಯಿನ್ ಹಗರಣದಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿತ್ತು.

ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಗರಣವನ್ನು ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ಎಸ್‍ಐಟಿ ತನಿಖೆಗೆ ವಹಿಸಿದೆ. ತನಿಖೆ ನಡೆಸುತ್ತಿರುವ ತಂಡಕ್ಕೆ ಮಹತ್ವದ ಸುಳಿವುಗಳು ದೊರೆತಿದ್ದು, ವಿಚಾರಣೆ ಮುಂದುವರೆದಿದೆ.

ಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ

ಗ್ಯಾಂಗ್ಟಾಕ್,ಅ.5- ಸಿಕ್ಕಿಂನ ಲ್ಹೋನಕ್ ಸರೋವರದ ಮೇಲಿನ ಮೇಘಸ್ಪೋಟದ ಪರಿಣಾಮ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. 102 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ತಿಳಿಸಿದೆ.

ಪೂರ್ವ ಸಿಕ್ಕಿಂನ ಪಾಕ್ಯೋಂಗ್‍ನಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 59 ಜನರು ನಾಪತ್ತೆಯಾಗಿದ್ದಾರೆ. 23 ಯೋಧರು ಇಲ್ಲಿಂದಲೇ ಕಾಣೆಯಾಗಿದ್ದರು. ಅವರಲ್ಲಿ ಒಬ್ಬ ಸೈನಿಕನನ್ನು ರಕ್ಷಿಸಲಾಗಿದೆ. ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 3,000 ಪ್ರವಾಸಿಗರು ಸಿಲುಕಿರುವ ಆತಂಕ ವ್ಯಕ್ತವಾಗಿದೆ.

ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳವನ್ನು ಸಂಪರ್ಕಿಸುವ ಮುಖ್ಯ ಮಾರ್ಗ ರಾಷ್ಟ್ರೀಯ ಹೆದ್ದಾರಿ 10 ಅನೇಕ ಕಡೆ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ತೀಸ್ತಾ ನದಿ ಹರಿಯುವ ಉತ್ತರ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಿ ಕೂಡ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ತೀಸ್ತಾ ತೀರದಲ್ಲಿ ಇರುವ ದಿಕ್ಚು, ಸಿಂಗ್ತಾಮ್ ಮತ್ತು ರಂಗ್ಪೋ ಸೇರಿದಂತೆ ಅನೇಕ ಪಟ್ಟಣಗಳು, ನದಿ ನೀರಿನ ಏರಿಕೆಯಿಂದ ಜಲಾವೃತಗೊಂಡಿವೆ. ಮಂಗಾನ್, ಗ್ಯಾಂಗ್ಟಕ್, ಪಾಕ್ಯಾಂಗ್ ಮತ್ತು ನಮ್ಚಿ ಜಿಲ್ಲೆಗಳ ಶಾಲೆಗಳನ್ನು ಅ.8ರವರೆಗೂ ಮುಚ್ಚಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ನಿನ್ನೆ ಮುಂಜಾನೆ ಮೇಘ ಸ್ಪೋಟ ಸಂಭವಿಸಿತ್ತು. ಇದರಿಂದ ಸರೋವರದ ನೀರು ಉಕ್ಕಿ ಹರಿದು ತೀಸ್ತಾ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ. ಚುಂಗ್ತಾಂಗ್‍ನಲ್ಲಿನ ಅಣೆಕಟ್ಟೆಯ ಭಾಗಗಳು ರಭಸದ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಕೆಳ ಹಂತದ ಪ್ರದೇಶದಲ್ಲಿನ ಪ್ರವಾಹ ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಂಡಿದೆ. ಚುಂಗ್ತಾಂಗ್ ಅಣೆಕಟ್ಟು ಸಿಕ್ಕಿಂ ರಾಜ್ಯದ ಅತಿ ದೊಡ್ಡ ಜಲ ವಿದ್ಯುತ್ ಯೋಜನೆಯಾಗಿದೆ.

ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಬಿ ಪಾಠಕ್ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಲೊನಾಕ್ ಸರೋವರದಲ್ಲಿ ಮಂಗಳವಾರ ರಾತ್ರಿ 10:42 ರ ಸುಮಾರಿಗೆ ಮೇಘಸ್ಪೋಟ ಉಂಟಾಗಿದೆ. ನಂತರ ಸರೋವರ ಅದರ ದಂಡೆಯನ್ನು ಭೇದಿಸಿ ತೀಸ್ತಾ ನದಿಯ ಕಡೆಗೆ ಪ್ರವಾಹ ರೂಪದಲ್ಲಿ ಸಾಗಿದೆ. ಶೀಘ್ರವೇ ತೀಸ್ತಾ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆ ವರದಿಯಾಗಿದೆ. ವಿಶೇಷವಾಗಿ ಚುಂಗ್ಥಾಂಗ್ನಲ್ಲಿ ತೀಸ್ತಾ ಸ್ಟೇಜ್ 3 ಅಣೆಕಟ್ಟು ಒಡೆದು ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಚುಂಗ್ಥಾಂಗ್ನ ತೀಸ್ತಾ ಸ್ಟೇಜ್ 3 ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ 12-14 ಕಾರ್ಮಿಕರು ಇನ್ನೂ ಅಲ್ಲಿನ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಮಂಗನ್ ಜಿಲ್ಲೆಯ ಚುಂಗ್ತಾಂಗ್ ಮತ್ತು ಗ್ಯಾಂಗ್ಟಾಕ್ ಜಿಲ್ಲೆಯ ಡಿಕ್ಚು, ಸಿಂಗ್ಟಾಮ್ ಮತ್ತು ಪಾಕ್ಯೊಂಗ್ ಜಿಲ್ಲೆಯ ರಂಗ್ಪೋದಿಂದ ಹಲವರು ನಾಪತ್ತೆಯಾಗಿದ್ದಾರೆ ಹಾಗೂ ಹೆಚ್ಚಿನವರಿಗೆ ಗಾಯಗಳಾಗಿವೆ.

ರಾಜ್ಯದಾದ್ಯಂತ 26 ಜನರು ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಬರ್ದಂಗ್ನಲ್ಲಿ 23 ಸೇನಾ ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅವರು ಬೆಂಗಾವಲು ವಾಹನ ಪ್ರವಾಹದ ಕೆಸರಿನಲ್ಲಿ ಮುಳುಗಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 3 ಹೆಚ್ಚುವರಿ ತುಕಡಿಗಳನ್ನು ಕೇಳಿದೆ. ಇದನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಎನ್‍ಡಿಆರ್‍ಎಫ್‍ನ ಒಂದು ತುಕಡಿ ಈಗಾಗಲೇ ರಂಗ್ಪೋ ಮತ್ತು ಸಿಂಗ್ಟಮ್ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

3 ಸಾವಿರ ಪ್ರವಾಸಿಗರು ಅತಂತ್ರ:
ಅವಘಡದಲ್ಲಿ ಈವರೆಗೂ 26 ಮಂದಿ ಗಾಯಗೊಂಡಿದ್ದಾರೆ. 2 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 14 ಸೇತುವೆಗಳು ಕೊಚ್ಚಿ ಹೋಗಿದ್ದು, 22 ಸಾವಿರಕ್ಕೂ ಹೆಚ್ಚು ಮಂದಿಗೆ ತೊಂದರೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರೆಫ್) ಮತ್ತು ವಿವಿಧ ಸಂಸ್ಥೆಗಳು ಹಾನಿಗೊಳಗಾದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಭಾರತೀಯ ವಾಯುಪಡೆ ಕೂಡ ಸನ್ನದ್ಧವಾಗಿದೆ.

ಸಿಎಂ ಜತೆ ಪ್ರಧಾನಿ ಮೋದಿ ಚರ್ಚೆ: ದುರಂತದ ಬಳಿಕ ಪ್ರಧಾನಿ ನರೇಂದ್ರಮೋದಿ ಅವರು ಮುಖ್ಯಮಂತ್ರಿ ಪ್ರೇಮ್‍ಸಿಂಗ್ ತಮಂಗ್ ಅವರ ಜೊತೆ ಮಾತನಾಡಿ ಪರಿಸ್ಥಿತಿಯ ವಿವರ ಪಡೆದುಕೊಂಡಿದ್ದಾರೆ. ಹಾಗೆಯೇ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ನೈಸರ್ಗಿಕ ವಿಕೋಪವನ್ನು ಸಿಕ್ಕಿಂ ಸರ್ಕಾರ ವಿಪತ್ತು ಎಂದು ಘೋಷಣೆ ಮಾಡಿದೆ.

ಶಿಖರ್ ಧವನ್- ಆಯೇಷಾ ದಾಂಪತ್ಯ ಜೀವನ ಅಂತ್ಯ

ನವದೆಹಲಿ,ಅ.5- ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಎಡಗೈ ಆಟಗಾರ ಶಿಖರ್ ಧವನ್ ದಾಂಪತ್ಯ ಜೀವನ ಕೊನೆಗೊಂಡಿದೆ. ಶಿಖರ್ ಧವನ್ ಅವರು ತಮ್ಮ ಪತ್ನಿ ಆಯೇಷಾ ಮುಖರ್ಜಿಗೆ ವಿಚ್ಛೇದನ ನೀಡಿದ್ದು, ದೆಹಲಿಯ ಪಟಿಯಾಲ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನಕ್ಕೆ ಅನುಮತಿ ಕೊಟ್ಟಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಶಿಖರ್ ಧವನ್, ಪತ್ನಿ ಆಯೇಷಾ ಮುಖರ್ಜಿ ಅವರಿಂದ ವರ್ಷಗಟ್ಟಲೆ ಮಾನಸಿಕ ಹಿಂಸೆ ಅನುಭವಿಸಿದ್ದಾರೆ ಎಂದು ಅಭಿಪ್ರಾಯಪಟ್ಟು ವಿಚ್ಛೇದನ ಮಂಜೂರು ಮಾಡಿದೆ. ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಧಿಶ ಹರೀಶ್ ಕುಮಾರ್ ಒಪ್ಪಿಕೊಂಡಿದ್ದು, ತಮ್ಮ ಆದೇಶದಲ್ಲಿ, ಧವನ್ ಅವರ ಪತ್ನಿ ತಮ್ಮ ಮೇಲಿನ ಆರೋಪಗಳನ್ನು ವಿರೋಧಿಸಲ್ಲೂ ಇಲ್ಲ ಅಥವಾ ಸ್ವತಃ ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.

2012ರಲ್ಲಿ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆಯೇಷಾ ಅವರಿಗೆ ಇದು ಎರಡನೇ ಮದುವೆ ಆಗಿತ್ತು. ಈ ಇಬ್ಬರು ದಂಪತಿಗಳಿಗೆ ಒಬ್ಬ ಮಗನಿದ್ದು, ಮಗನ ಖಾಯಂ ಕಸ್ಟಡಿಯ ಕುರಿತು ಯಾವುದೇ ಆದೇಶವನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ನ್ಯಾಯಾಲಯವು ಧವನ್‍ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ಭೇಟಿಯಾಗುವ ಹಕ್ಕು ನೀಡಿದ್ದು, ಮಗನೊಂದಿಗೆ ವೀಡಿಯೊ ಕರೆ ಮೂಲಕ ಮಾತುಕತೆ ನಡೆಸುವುದಕ್ಕೂ ಅನುಮತಿ ನೀಡಿದೆ. ಇದಲ್ಲದೆ ಮಗನ ಶಾಲಾ ರಜೆಯ ಅವಧಿಯ ಕನಿಷ್ಠ ಅರ್ಧದಷ್ಟು ರಜೆಯನ್ನು ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಕಳೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಧವನ್ ಕುಟುಂಬದೊಂದಿಗೆ ರಾತ್ರಿಯ ತಂಗುವಿಕೆ ಸೇರಿದಂತೆ ಭೇಟಿ ಉದ್ದೇಶಗಳಿಗಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ಆಯೇಷಾ ಅವರಿಗೆ ನ್ಯಾಯಾಲಯ ಆದೇಶಿಸಿದೆ.

ಕಾವೇರಿ ವಿವಾದ ಇತ್ಯರ್ಥಕ್ಕೆ ಕೇಂದ್ರ ಮಧ್ಯಪ್ರವೇಶಿಸಬೇಕು : ಸಚಿವ ಚಲುವರಾಯಸ್ವಾಮಿ

ಮಂಡ್ಯ,ಅ.5- ಜೆಡಿಎಸ್, ಬಿಜೆಪಿ ನಾಯಕರು ಕಾವೇರಿ ನದಿ ನೀರಿನ ವಿಚಾರದಲ್ಲಿ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಪ್ರಧಾನಿ ಮಧ್ಯಸ್ಥಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಹಾಗೂ ಕನ್ನಡಪರ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಾರೆ. ಬೆಳೆ ಹಾಗೂ ನೀರಿನ ರಕ್ಷಣೆ ವಿಷಯದಲ್ಲಿ ಅವರ ಕಾಳಜಿಗಳು ಸ್ತುತ್ಯಾರ್ಹ ಎಂದು ಹೇಳಿದರು.

ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್‍ನ ತೀರ್ಪು ಹಾಗೂ ಕೇಂದ್ರ ಸರ್ಕಾರದ 2 ತಾಂತ್ರಿಕ ಸಮಿತಿಗಳ ಆದೇಶ ಪ್ರಮುಖವಾಗಿದೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಬಿಜೆಪಿಯವರಿಗೆ ರಾಜ್ಯದ ಜನರ ವಿಷಯದಲ್ಲಿ ಕನಿಷ್ಠ ಕೃತಜ್ಞತೆ ಇಲ್ಲ. 25 ಜನ ಸಂಸದರು ಗೆದ್ದಿದ್ದಾರೆ. ಕಾವೇರಿ ವಿಷಯದಲ್ಲಿ ಅವರ ಪಾತ್ರ ಏನು. ಮಂಡ್ಯದಲ್ಲಿ ಬಂದು ಮಾದ್ಯಮದ ಎದುರು ಪ್ರತಿಭಟನೆ ಮಾಡಿ ಪ್ರಚಾರ ಮಾಡುವುದಕ್ಕಷ್ಟೇ ಸೀಮಿತವೇ ಎಂದು ಪ್ರಶ್ನಿಸಿದರು.

ರಾಜಕಾರಣಕ್ಕಾಗಿ ಪ್ರಧಾನಿಯವರನ್ನು ಭೇಟಿ ಮಾಡುವ ನಾಯಕರು ಕಾವೇರಿ ವಿಷಯದಲ್ಲಿ ಪ್ರಧಾನಿಯವರ ಜೊತೆ ಏಕೆ ಚರ್ಚೆ ಮಾಡುತ್ತಿಲ್ಲ. ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ. ಕಾವೇರಿ ನದಿ ಪಾತ್ರದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕೇಂದ್ರ ಮಧ್ಯ ಪ್ರವೇಶ ಮಾಡಬೇಕು ಎಂದರು.

ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಎರಡು ಬಾರಿ ಸರ್ವಪಕ್ಷ ಸಭೆ ನಡೆಸಿದೆ. ಕೇಂದ್ರದಲ್ಲಿ ಸರ್ವಪಕ್ಷ ಸಂಸದರ ಜೊತೆಯೂ ಚರ್ಚೆ ನಡೆಸಲಾಗಿದೆ. ಮೂರು ದಿನ ದೆಹಲಿಯಲ್ಲೇ ಉಳಿದು ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ವಾಸ್ತವತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಪ್ರಧಾನಿಯವರ ಭೇಟಿಗೆ ಎಷ್ಟೇ ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹಾಗೂ ಇತರರು ಸಹಾಯ ಮಾಡಲಿಲ್ಲ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

ಪ್ರಧಾನಮಂತ್ರಿಯವರು ಮಧ್ಯಪ್ರವೇಶ ಮಾಡಲಾಗುವುದಿಲ್ಲ ಎಂದು ರಾಜ್ಯದ ಬಿಜೆಪಿ ನಾಯಕರೇ ಹೇಳುತ್ತಿರುವುದು ಸರಿಯಲ್ಲ. ಈ ಹಿಂದೆ ವಾಜಪೇಯಿ ಕೂಡ ಅಂತರಾಜ್ಯ ನದಿ ವಿವಾದದಲ್ಲಿ ಮಧ್ಯಪ್ರವೇಶ ಮಾಡಿದ್ದರು. ಬಿಜೆಪಿಯವರು ಪ್ರಧಾನಿಯವರ ಬಳಿ ಚರ್ಚೆ ಮಾಡದೇ ತಾವಾಗಿಯೇ ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಘೋಷಿಸುತ್ತಿದ್ದಾರೆ. ಹಾಗಿದ್ದ ಮೇಲೆ ರಾಜಕಾರಣ ಮಾಡುವುದನ್ನು ಬಿಟ್ಟು ಮನೆಯಲ್ಲಿರಲಿ ಎಂದು ಕಿಡಿಕಾರಿದರು.

ಇಂಡಿಯಾ ಘಟಬಂದನ್‍ಗಾಗಿ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಆರೋಪ ಆಧಾರರಹಿತ. ರಾಜ್ಯ ಹಿತಾಸಕ್ತಿ ವಿಷಯದಲ್ಲಿ ಎರಡೂ ರಾಜ್ಯಗಳು ತಮ್ಮದೇ ಆದ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ರಾಜಕೀಯವೇ ಬೇರೆ, ರಾಜ್ಯದ ಹಿತಾಸಕ್ತಿಯೇ ಬೇರೆ. ರಾಜ್ಯಸರ್ಕಾರ ಹೇಳದೇ, ಕೇಳದೆ ತಮಿಳುನಾಡಿಗೆ ನೀರು ಬಿಟ್ಟಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಾರೆ. ತಾಂತ್ರಿಕ ಸಮಿತಿಗಳ ಆದೇಶವನ್ನು ಎಲ್ಲಾ ಕಾಲದಲ್ಲೂ ಸರ್ಕಾರಗಳು ಪಾಲನೆ ಮಾಡಿವೆ. ಸಂಕಷ್ಟದ ಸಂದರ್ಭದಲ್ಲಿ ಆದೇಶ ಪಾಲನೆ ಮಾಡಲಾಗದ ಬಗ್ಗೆ ನಾವು ಸಾಕಷ್ಟು ಮನವರಿಕೆ ಮಾಡಿಕೊಟ್ಟಿದ್ದೇವೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಈ ಪ್ರಯತ್ನದ ಹಂತದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ರಾಜ್ಯಸರ್ಕಾರಕ್ಕೆ ಸಹಕಾರ ನೀಡಿಲ್ಲ. ಹೀಗಾಗಿ ಕಾವೇರಿ ವಿಷಯದಲ್ಲಿನ ಹೊಣೆಗಾರಿಕೆ ಬಿಜೆಪಿಯವರದ್ದೇ. ನಾಟಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆಯೇ ಹೊರತು ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಕಾವೇರಿ ನೀರು ನಿಯಂತ್ರಣಾ ಸಮಿತಿ ಇದೇ 12 ರಂದು ಮತ್ತೆ ಸಭೆ ನಡೆಸಲಿದ್ದು, ಅಂದು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದಿಸುತ್ತಿವೆ ಎಂದರು. ರಾಜ್ಯದಲ್ಲಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಅದರ ಕುರಿತು ಸಚಿವ ಸಂಪುಟ ಹಾಗೂ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರದ ಅಕಾರಿಗಳ ಮೂರು ತಂಡಗಳು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ನಾಲ್ಕು ದಿನಗಳ ಕಾಲ ಬರ ಅಧ್ಯಯನ ನಡೆಸಲಿವೆ ಎಂದು ಹೇಳಿದರು.

ಎನ್‍ಐಎ ಅಧಿಕಾರಿಗಳಿಗೆ ಖಲಿಸ್ತಾನ್ ಉಗ್ರರಿಂದ ಬೆದರಿಕೆ

ನವದೆಹಲಿ,ಅ.5-ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಅಧಿಕಾರಿಗಳಿಗೆ ಖಲಿಸ್ತಾನ ಪರ ಉಗ್ರರು ಹಾಗೂ ನಕ್ಸಲೀಯರು ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಇದೀಗ ಎಚ್ಚೆತ್ತುಕೊಂಡಿರುವ ಕೇಂದ್ರ ಗೃಹಸಚಿವಾಲಯ ದೇಶದ ಎಲ್ಲ ರಾಜ್ಯಗಳಲ್ಲಿರುವ ಎನ್‍ಐಎ ಕಚೇರಿ ಮತ್ತು ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪತ್ರ ಬರೆದಿದೆ.

ಕೆಲವು ದಿನಗಳ ಹಿಂದೆ ದೇಶಾದ್ಯಂತ ಖಲಿಸ್ತಾನ ಪರ ಅನುಕಂಪ ಹೊಂದಿರುವವರ ಮೇಲೆ ಎನ್‍ಐಎ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕಾರವಾಗಿ ಉಗ್ರರು ಮತ್ತು ನಕ್ಸಲೀಯರು ಎನ್‍ಐಎ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಬೆದರಿಕೆವೊಡ್ಡಿದ್ದಾರೆ ಎಂದು ಗೃಹ ಇಲಾಖೆ ರಾಜ್ಯ ಸರ್ಕಾರಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖ ಮಾಡಿದೆ.

ಪಾಕಿಸ್ತಾನದ ಗುಪ್ತಚರ ವಿಭಾಗವಾದ ಐಎಸ್‍ಐ ಜೊತೆಗೆ ಕಳೆದ ವರ್ಷ ಭಾರತದಲ್ಲಿ ನಿಷೇಧಕ್ಕೊಳಪಟ್ಟಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಕೆಲವು ಸಕ್ರಿಯ ಸದಸ್ಯರು ಕೈ ಜೋಡಿಸಿದ್ದು ಎನ್‍ಐಎ ಅಧಿಕಾರಿಗಳ ಮೇಲೆ ಯಾವುದೇ ಸಂದರ್ಭದಲ್ಲೂ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಿದೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಎನ್‍ಐಎ ಅಧಿಕಾರಿಗಳ ಬಗ್ಗೆ ರಹಸ್ಯವಾಗಿ ಭಯೋತ್ಪಾದಕ ಸಂಘಟನೆಗಳು ಮಾಹಿತಿ ಕಲೆ ಹಾಕುತ್ತಿದ್ದು, ಐಎಸ್‍ಐ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾದಲ್ಲಿ ಗುರುತಿಸಿಕೊಂಡಿದ್ದ ಸದಸ್ಯರು ಹಾಗೂ ನಕ್ಸಲೀಯರಿಗೆ ವಿದೇಶದಲ್ಲಿರುವ ಖಲಿಸ್ತಾನ ಬೆಂಬಲಿತ ಉಗ್ರರು ಆರ್ಥಿಕ ನೆರವು ಒದಗಿಸಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ಈಗಾಗಲೇ ನಿಷೇಧಕ್ಕೊಳಟ್ಟಿರುವ ಅಲ್ ಬದ್ರ್ ಸಂಘಟನೆಯು ಸಕ್ರಿಯವಾಗಲು ಹವಣಿಸುತ್ತಿದೆ. ಎನ್‍ಐಎ ಅಧಿಕಾರಿಗಳು ದಾಳಿ ನಡೆಸುವ ಸಂದರ್ಭದಲ್ಲಿ ಇವರು ಪ್ರತಿ ದಾಳಿ ಮಾಡಬಹುದು. ಹೀಗಾಗಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆಯೂ ಸೂಚಿಸಲಾಗಿದೆ.

ಎನ್‍ಐಎ ಅಧಿಕಾರಿಗಳ ಮೇಲೆ ಪಿಎಫ್‍ಐ ಜೊತೆಗೆ ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಯಿದ್ದೀನ್, ಆರ್‍ಪಿಎಫ್, ಪಿಎಲ್‍ಎ ಸೇರಿದಂತೆ ಮತ್ತಿತರ ಸಂಘಟನೆಗಳ ಕಣ್ಣು ಬಿದ್ದಿದೆ. ಹೀಗಾಗಿ ಭದ್ರತೆ ಒದಗಿಸುವುದು ಅತ್ಯವಶ್ಯಕ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ತನಿಖಾ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಐಎಸ್‍ಐ ಕೆಲವು ಭಯೋತ್ಪಾದಕರನ್ನು ನಿಯೋಜಿಸಿದೆ. ವಿಶೇಷವಾಗಿ ಉನ್ನತ ಅಧಿಕಾರಿಗಳು, ತನಿಖಾ ಸಂಸ್ಥೆಗಳು, ಗಣ್ಯರು ಅವರ ಹಿಟ್ ಲಿಸ್ಟ್‍ನಲ್ಲಿದ್ದಾರೆ.

ಕಳೆದ ತಿಂಗಳು ಎನ್‍ಐಎ ಅಕಾರಿಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದ 62 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಬಹುತೇಕ ಮಾವೋವಾದಿ ನಕ್ಸಲೀಯರಿಗೆ ಬೆಂಬಲ ನೀಡುವವರು, ಹಣಕಾಸು ನೆರವು ಒದಗಿಸುವವರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗಿತ್ತು.

ಇಸ್ರೇಲ್‍ನಲ್ಲಿ ಸದ್ದು ಮಾಡುತ್ತಿದೆ ಅಖೇಲಿ ವೆಬ್‍ಸರಣಿ

ದಾಳಿಗೊಳಗಾದವರು ಬ್ಯಾಂಕ್ ಖಾತೆಗಳನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇದರಿಂದ ನಕ್ಸಲೀಯರಿಗೆ ಹೋಗುತ್ತಿದ್ದ ಆರ್ಥಿಕ ನೆರವು ಬಂದ್ ಆಗಿದೆ. ಈ ಬೆಳವಣಿಗೆಗಳಿಂದ ಕುಪಿತಗೊಂಡಿರುವ ನಕ್ಸಲೀಯರು ಎನ್‍ಐಎ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ್ದಾರೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಭೋಪಾಲ್,ಅ.5- ವಿಧಾನಸಭೆ ಚುನಾವಣೆಗೂ ಮುನ್ನ ಮಧ್ಯಪ್ರದೇಶ ಸರ್ಕಾರ ಮಹಿಳೆಯರ ಪರವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೀಗ ಮಧ್ಯಪ್ರದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 35ರಷ್ಟು ಮೀಸಲಾತಿ ದೊರೆಯಲಿದ್ದು , ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮಧ್ಯಪ್ರದೇಶದ ನಾಗರಿಕ ಸೇವೆಗಳ (ಮಹಿಳೆಯರ ನೇಮಕಾತಿಗಾಗಿ ವಿಶೇಷ ನಿಬಂಧನೆಗಳು) ನಿಯಮಗಳು, 1997ನ್ನು ತಿದ್ದುಪಡಿ ಮಾಡಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದ್ದು, ಇದರಲ್ಲಿ ಅರಣ್ಯ ಇಲಾಖೆ ಹೊರತುಪಡಿಸಿ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ನೀಡಲಾಗುವುದು ಎಂದು ತಿಳಿಸಿದೆ.

ಅಧಿಸೂಚನೆಯ ಪ್ರಕಾರ, ಯಾವುದೇ ಸೇವಾ ನಿಯಮದಲ್ಲಿ ಏನೇ ಇದ್ದರೂ, ರಾಜ್ಯದ ಅಡಿಯಲ್ಲಿ ಸೇವೆಯಲ್ಲಿರುವ (ಅರಣ್ಯ ಇಲಾಖೆ ಹೊರತುಪಡಿಸಿ) ಎಲ್ಲಾ ಹುದ್ದೆಗಳಲ್ಲಿ 35 ಪ್ರತಿಶತವನ್ನು ಮಹಿಳೆಯರಿಗೆ ಮೀಸಲಿಡಬೇಕು ಮತ್ತು ನೇರ ನೇಮಕಾತಿ ಹಂತದಲ್ಲಿ ಮಹಿಳೆಯರ ಪರವಾಗಿ ಮೀಸಲಾತಿಯನ್ನು ಒದಗಿಸಬೇಕು ಹೇಳಲಾದ ಮೀಸಲಾತಿಯು ಅಡ್ಡಲಾಗಿ ಮತ್ತು ವಿಭಾಗವಾರು ಇರುತ್ತದೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಬೋಧಕ ಹುದ್ದೆಗಳಲ್ಲಿ ಶೇ.50ರಷ್ಟು ಮೀಸಲಾತಿ:
ಈ ಹಿಂದೆ, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯ ಪೊಲೀಸ್ ಮತ್ತು ಇತರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 35 ಪ್ರತಿಶತ ಮೀಸಲಾತಿ ಮತ್ತು ಬೋಧಕ ಹುದ್ದೆಗಳಲ್ಲಿ ಮಹಿಳೆಯರಿಗೆ 50 ಪ್ರತಿಶತ ಮೀಸಲಾತಿಯನ್ನು ಘೋಷಿಸಿದ್ದರು. ಇದಲ್ಲದೇ ಸ್ಥಳೀಯ ಸಂಸ್ಥೆಗಳಲ್ಲಿ ಮೇಲ್ದರ್ಜೆ ಸೇರಿದಂತೆ ಇತರೆ ಹುದ್ದೆಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಅಷ್ಟೇ ಅಲ್ಲ, ಉತ್ತಮ ಶಿಕ್ಷಣಕ್ಕಾಗಿ ಸರ್ಕಾರವು ಹೆಣ್ಣುಮಕ್ಕಳ ಶುಲ್ಕವನ್ನು ಭರಿಸುತ್ತದೆ.

ಇತ್ತೀಚೆಗೆ ಕೇಂದ್ರದ ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಿದೆ. ಅದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮೋದನೆ ಪಡೆದ ನಂತರ ಕಾನೂನಾಗಿ ಮಾರ್ಪಟ್ಟಿದೆ. ನಾರಿ ಶಕ್ತಿ ವಂದನ್ ಕಾಯ್ದೆ ಎಂಬ ಶೀರ್ಷಿಕೆಯ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ಖಚಿತಪಡಿಸುತ್ತದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಸರಿ ಬಣ್ಣ ಏಕೆ..?

ನವದೆಹಲಿ,ಅ.5- ಕಿತ್ತಳೆ ಬಣ್ಣದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ಪ್ರಾರಂಭಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಬೆರೆಸಬಾರದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆರೋಪಗಳಿಗೆ ತಿಳಿಸಿದ್ದಾರೆ. ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಅವರು, ಮಾನವನ ಕಣ್ಣುಗಳಿಗೆ 2 ಬಣ್ಣಗಳು ಹೆಚ್ಚು ಗೋಚರಿಸುತ್ತವೆ. ಅವುಗಳೆಂದರೆ ಹಳದಿ ಮತ್ತು ಕಿತ್ತಳೆ ಬಣ್ಣ. ಯುರೋಪ್‍ನಲ್ಲಿ ಸುಮಾರು ಶೇ.80ರಷ್ಟು ರೈಲುಗಳನ್ನು ಕಿತ್ತಳೆ ಅಥವಾ ಹಳದಿ ಬಣ್ಣದ ಸಂಯೋಜನೆಯೊಂದಿಗೆ ಮಾಡಲಾಗುತ್ತದೆ ಎಂದಿದ್ದಾರೆ.


ಹಳದಿ ಮತ್ತು ಕಿತ್ತಳೆ ಬಣ್ಣಗಳಂತೆ ಹೊಳೆಯುವ ಬೆಳ್ಳಿಯಂತಹ ಇತರ ಹಲವು ಬಣ್ಣಗಳಿವೆ. ಆದರೆ ನಾವು ಮಾನವನ ಕಣ್ಣಿಗೆ ಚೆನ್ನಾಗಿ ಗೋಚರಿಸುವ ದೃಷ್ಟಿಕೋನದಿಂದ ಅದರ ಬಗ್ಗೆ ಮಾತನಾಡಿದರೆ, ಈ ಎರಡು ಬಣ್ಣಗಳು ಅತ್ಯುತ್ತಮವೆಂದು ಪರಿಗಣಿಸಬಹುದು ಎಂದು ವೈಷ್ಣವ್ ಎಂದಿದ್ದಾರೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ವಂದೇ ಭಾರತ್ ರೈಲುಗಳಲ್ಲಿ ಕಿತ್ತಳೆ ಬಣ್ಣ ಬಳಸಿರುವುದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಇದು 100% ವೈಜ್ಞಾನಿಕ ಚಿಂತನೆ. ಈ ಕಾರಣದಿಂದಲೇ ಹಡಗು ಹಾಗೂ ವಿಮಾನಗಳಲ್ಲಿ ಇಡಲಾಗಿರುವ ಬ್ಲ್ಯಾಕ್ ಬಾಕ್ಸ್‍ಗಳಿಗೆ ಕಿತ್ತಳೆ ಬಣ್ಣ ಬಳಿಯಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಳಸುವ ರಕ್ಷಣಾ ದೋಣಿಗಳು ಹಾಗೂ ಲೈಫ್ ಜಾಕೆಟ್‍ಗಳು ಕೂಡಾ ಕಿತ್ತಳೆ ಬಣ್ಣದಲ್ಲಿರುತ್ತವೆ ಎಂದು ಅವರು ವಿವರಿಸಿದರು.

ಭಾರತೀಯ ರೈಲ್ವೆ ತನ್ನ ಮೊದಲ ಕಿತ್ತಳೆ ಹಾಗೂ ಬೂದು ಬಣ್ಣದ ಸಂಯೋಜನೆಯ ವಂದೇ ಭಾರತ್ ರೈಲನ್ನು ಕೇರಳದ ಕಾಸರಗೋಡು ಹಾಗೂ ತಿರುವನಂತಪುರಂ ನಡುವೆ ಸಂಚರಿಸಲು ನೀಡಿದೆ. ಸೆಪ್ಟೆಂಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 9 ರೈಲುಗಳೊಂದಿಗೆ ವೀಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡಿದ್ದರು.

ಅ.11ರಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ 3 ದಿನ ಜೆಡಿಎಸ್‍ನ ಕೋರ್ ಕಮಿಟಿ ಪ್ರವಾಸ

ಬೆಂಗಳೂರು, ಅ.5-ಜೆಡಿಎಸ್‍ನ ಕೋರ್ ಕಮಿಟಿ ಆರಂಭಿಸಿರುವ ಪಕ್ಷದ ಪುನಶ್ಚೇತನ ಪರ್ವದ ಎರಡನೇ ಕಾರ್ಯಕ್ರಮವು ಕಿತ್ತೂರು ಕರ್ನಾಟಕ ಭಾಗದಲ್ಲಿ ಅ.11ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದ ಕೋರ್ ಕಮಿಟಿಯು ಪಕ್ಷದ ಪುನರ್ ಸಂಘಟನೆಗಾಗಿ ರಾಜ್ಯ ಪ್ರವಾಸವನ್ನು ಆರಂಭಿಸಿದ್ದು, ವಿಭಾಗವಾರು ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಂಡಿತ್ತು. ಎರಡನೇ ಹಂತದಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರವಾಸ ಹಮ್ಮಿಕೊಂಡಿದೆ.

ಅ.11ರಿಂದ 13ರವರೆಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡು ಆಯಾ ಜಿಲ್ಲೆಯ ಜಿಲ್ಲಾಧ್ಯಕ್ಷರು, ಸ್ಥಳೀಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಪಕ್ಷದ ಪದಾಕಾರಿಗಳು, ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಧಿಸಿದ್ದ ಅಭ್ಯರ್ಥಿಗಳು, ಪಕ್ಷದ ಮುಖಂಡರ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಪಕ್ಷದ ಪುನರ್ ಸಂಘಟನೆಗೆ ಸಂಬಂಧಿಸಿದಂತೆ ಕೋರ್ ಕಮಿಟಿಯು ಅಭಿಪ್ರಾಯ ಸಂಗ್ರಹ ಮಾಡಲಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜಾತಿಗಣತಿ ಚರ್ಚೆ : ಅ.9ಕ್ಕೆ ದೆಹಲಿಯಲ್ಲಿ ಕಾಂಗ್ರೆಸ್ ಮಹತ್ವದ ಸಭೆ

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಸಂಬಂಸಿದ ಸಭೆಯನ್ನು ಅ.11ರಂದು ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಸಂಬಂಸಿದ ಸಭೆಯನ್ನು ಅ.12ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಿದ್ದು, ಬೆಳಗಾವಿ ವಿಭಾಗದ ಸಭೆಯನ್ನು ಬೆಳಗಾವಿಯಲ್ಲಿ ನಡೆಸಲಾಗುತ್ತದೆ.

ಸೆ.26 ಮತ್ತು 27 ರಂದು ಕಲ್ಯಾಣ ಕರ್ನಟಕ ಭಾಗದದಲ್ಲಿ ಸಭೆಗಳನ್ನು ನಡೆಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಸಲಹೆ, ಸೂಚನೆ ಆಲಿಸಲಾಗಿದೆ. ಹೀಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕೋರ್ ಕಮಿಟಿಯು ಪಕ್ಷದ ಪುನಶ್ಚೇತನ ಹಾಗೂ ಪದಾಕಾರಿಗಳ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದೆ. ಆ ನಂತರ ಪಕ್ಷದ ಎಲ್ಲಾ ಹಂತದ ಪದಾಧಿಕಾರಿಗಳ ಬದಲಾವಣೆ ಮಾಡಲು ವರಿಷ್ಠರು ಉದ್ದೇಶಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

ಶಿವಮೊಗ್ಗ, ಅ.5- ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ ಮಾಡಿದೆ. ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆಯೇ ಎರಡು ಕಾರುಗಳಲ್ಲಿ ಆಗಮಿಸಿರುವ ಇಡಿ ಅಧಿಕಾರಿಗಳು, ಶಿವಮೊಗ್ಗದ ಶರಾವತಿ ನಗರದ ನಿವಾಸ ಹಾಗೂ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಮಂಜುನಾಥಗೌಡ ಮನೆ ಮೇಲೂ ದಾಳಿ ಮಾಡಿದ್ದಾರೆ.

ಪಟ್ಟಣದ ಬೆಟ್ಟಮಕ್ಕಿಯ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆರ್.ಎಂ. ಮಂಜುನಾಥ್ ಗೌಡರು ಬೆಂಗಳೂರಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿರುವ ಆರ್.ಎಂ.ಎಂ. ಅವರ ಮೂರು ನಿವಾಸಗಳ ಮನೆಗಳ ಮೇಲೆ ಇಡಿ ದಾಳಿ ಮಾಡಿದ್ದು, ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ನಿವಾಸ, ತೀರ್ಥಹಳ್ಳಿಯ ಕಲ್ಲುಕೊಪ್ಪ ನಿವಾಸದ ಮೇಲೆ ಹಾಗೂ ಶಿವಮೊಗ್ಗದ ಶರಾವತಿ ನಗರದಲ್ಲಿರುವ ನಿವಾಸದ ಮೇಲೂ ದಾಳಿ ಮಾಡಿದ್ದರೆನ್ನಲಾಗಿದೆ.

ಮನೆ ಸುತ್ತಮುತ್ತ ಶಸ್ತ್ರಾಸ್ತ್ರ ಪೊಲೀಸರು ಸುತ್ತುವರೆದಿದ್ದರು. ಸರ್ಕಾರಿ ಕಾರುಗಳಲ್ಲಿ ಬಂದಿದ್ದ ಅಧಿಕಾರಿಗಳ ತಂಡ ಆರ್.ಎಂ.ಎಂ. ನಿವಾಸಗಳಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇಸ್ರೇಲ್‍ನಲ್ಲಿ ಸದ್ದು ಮಾಡುತ್ತಿದೆ ಅಖೇಲಿ ವೆಬ್‍ಸರಣಿ

ರಿಯಲ್ ಎಸ್ಟೇಟ್ ಕಂಪನಿ ಮೇಲೆ ದಾಳಿ: ಮತ್ತೊಂದೆಡೆ ರಾಜಧಾನಿ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‍ನ ಹಲವು ನಗರಗಳಲ್ಲಿ ಇರುವ ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಪುರವಂಕರ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದ ಸುಮಾರು 40 ಕಚೇರಿ, ಸ್ಥಳ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯು ನಿನ್ನೆ (ಅಕ್ಟೋಬರ್ 4) ದಾಳಿ ನಡೆಸಿದೆ. ಆದಾಯ ತೆರಿಗೆ ಇಲಾಖೆಯು ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್‍ನ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಇರುವ ಕಚೇರಿಗಳ ಮೇಲೆ ದಾಳಿಯನ್ನು ನಡೆಸಲಾಗಿದೆ.

ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ವಲಯದ ನಿರ್ಮಾಣದ ಕಂಪನಿಯಾದ ಪುರವಂಕರ ಲಿಮಿಟೆಡ್, ಪ್ರತಿ ಷೇರಿಗೆ 124.70 ರೂಪಾಯಿಯಂತೆ ಬುಧವಾರ ವಹಿವಾಟು ಕೊನೆಗೊಳಿಸಿದೆ. ಬುಧವಾರ ಮಧ್ಯಾಹ್ನ 3:59ಕ್ಕೆ ಸ್ಟಾಕ್ ಸುಮಾರು ಶೇಕಡ 2.73 ರಷ್ಟು ಕುಸಿತವನ್ನು ದಾಖಲಿಸಿದೆ.

ಪ್ರೀತಿ ಒಪ್ಪಿಕೊಳ್ಳದ ಕುಟುಂಬ, ಪ್ರೇಮ ವಿವಾಹವಾಗಿದ್ದ ದಂಪತಿ ಆತ್ಮಹತ್ಯೆ

ಇನ್ನು ಗುರುವಾರ ಈ ಸಮಯಕ್ಕೆ ಪುರವಂಕರ ಲಿಮಿಟೆಡ್ ಸ್ಟಾಕ್ ಸುಮಾರು ಶೇಕಡ 3.29 ರಷ್ಟು ಜಿಗಿತ ಕಂಡು, 128.80 ರೂಪಾಯಿಗೆ ತಲುಪಿದೆ. ಸ್ಟಾಕ್‍ನ 52 ವಾರಗಳ ಗರಿಷ್ಠ ಮಟ್ಟ 136.45 ರೂಪಾಯಿ ಆಗಿದ್ದು, 52 ವಾರಗಳ ಕನಿಷ್ಠ ಮಟ್ಟ 58.20 ರೂಪಾಯಿ ಆಗಿದೆ.