Friday, May 3, 2024
Homeರಾಷ್ಟ್ರೀಯಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ

ಸಿಕ್ಕಿಂ ಮೇಘಸ್ಪೋಟ : 14 ಜನ ಸಾವು, 102 ಮಂದಿ ನಾಪತ್ತೆ

ಗ್ಯಾಂಗ್ಟಾಕ್,ಅ.5- ಸಿಕ್ಕಿಂನ ಲ್ಹೋನಕ್ ಸರೋವರದ ಮೇಲಿನ ಮೇಘಸ್ಪೋಟದ ಪರಿಣಾಮ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ ಇದುವರೆಗೆ 14 ಜನರು ಸಾವನ್ನಪ್ಪಿದ್ದಾರೆ. 102 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ತಿಳಿಸಿದೆ.

ಪೂರ್ವ ಸಿಕ್ಕಿಂನ ಪಾಕ್ಯೋಂಗ್‍ನಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 59 ಜನರು ನಾಪತ್ತೆಯಾಗಿದ್ದಾರೆ. 23 ಯೋಧರು ಇಲ್ಲಿಂದಲೇ ಕಾಣೆಯಾಗಿದ್ದರು. ಅವರಲ್ಲಿ ಒಬ್ಬ ಸೈನಿಕನನ್ನು ರಕ್ಷಿಸಲಾಗಿದೆ. ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ 3,000 ಪ್ರವಾಸಿಗರು ಸಿಲುಕಿರುವ ಆತಂಕ ವ್ಯಕ್ತವಾಗಿದೆ.

ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳವನ್ನು ಸಂಪರ್ಕಿಸುವ ಮುಖ್ಯ ಮಾರ್ಗ ರಾಷ್ಟ್ರೀಯ ಹೆದ್ದಾರಿ 10 ಅನೇಕ ಕಡೆ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ತೀಸ್ತಾ ನದಿ ಹರಿಯುವ ಉತ್ತರ ಬಂಗಾಳ ಮತ್ತು ಬಾಂಗ್ಲಾದೇಶಗಳಲ್ಲಿ ಕೂಡ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ತೀಸ್ತಾ ತೀರದಲ್ಲಿ ಇರುವ ದಿಕ್ಚು, ಸಿಂಗ್ತಾಮ್ ಮತ್ತು ರಂಗ್ಪೋ ಸೇರಿದಂತೆ ಅನೇಕ ಪಟ್ಟಣಗಳು, ನದಿ ನೀರಿನ ಏರಿಕೆಯಿಂದ ಜಲಾವೃತಗೊಂಡಿವೆ. ಮಂಗಾನ್, ಗ್ಯಾಂಗ್ಟಕ್, ಪಾಕ್ಯಾಂಗ್ ಮತ್ತು ನಮ್ಚಿ ಜಿಲ್ಲೆಗಳ ಶಾಲೆಗಳನ್ನು ಅ.8ರವರೆಗೂ ಮುಚ್ಚಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ನಿನ್ನೆ ಮುಂಜಾನೆ ಮೇಘ ಸ್ಪೋಟ ಸಂಭವಿಸಿತ್ತು. ಇದರಿಂದ ಸರೋವರದ ನೀರು ಉಕ್ಕಿ ಹರಿದು ತೀಸ್ತಾ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ. ಚುಂಗ್ತಾಂಗ್‍ನಲ್ಲಿನ ಅಣೆಕಟ್ಟೆಯ ಭಾಗಗಳು ರಭಸದ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಕೆಳ ಹಂತದ ಪ್ರದೇಶದಲ್ಲಿನ ಪ್ರವಾಹ ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಂಡಿದೆ. ಚುಂಗ್ತಾಂಗ್ ಅಣೆಕಟ್ಟು ಸಿಕ್ಕಿಂ ರಾಜ್ಯದ ಅತಿ ದೊಡ್ಡ ಜಲ ವಿದ್ಯುತ್ ಯೋಜನೆಯಾಗಿದೆ.

ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಬಿ ಪಾಠಕ್ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, ಲೊನಾಕ್ ಸರೋವರದಲ್ಲಿ ಮಂಗಳವಾರ ರಾತ್ರಿ 10:42 ರ ಸುಮಾರಿಗೆ ಮೇಘಸ್ಪೋಟ ಉಂಟಾಗಿದೆ. ನಂತರ ಸರೋವರ ಅದರ ದಂಡೆಯನ್ನು ಭೇದಿಸಿ ತೀಸ್ತಾ ನದಿಯ ಕಡೆಗೆ ಪ್ರವಾಹ ರೂಪದಲ್ಲಿ ಸಾಗಿದೆ. ಶೀಘ್ರವೇ ತೀಸ್ತಾ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆ ವರದಿಯಾಗಿದೆ. ವಿಶೇಷವಾಗಿ ಚುಂಗ್ಥಾಂಗ್ನಲ್ಲಿ ತೀಸ್ತಾ ಸ್ಟೇಜ್ 3 ಅಣೆಕಟ್ಟು ಒಡೆದು ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಚುಂಗ್ಥಾಂಗ್ನ ತೀಸ್ತಾ ಸ್ಟೇಜ್ 3 ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ 12-14 ಕಾರ್ಮಿಕರು ಇನ್ನೂ ಅಲ್ಲಿನ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಮಂಗನ್ ಜಿಲ್ಲೆಯ ಚುಂಗ್ತಾಂಗ್ ಮತ್ತು ಗ್ಯಾಂಗ್ಟಾಕ್ ಜಿಲ್ಲೆಯ ಡಿಕ್ಚು, ಸಿಂಗ್ಟಾಮ್ ಮತ್ತು ಪಾಕ್ಯೊಂಗ್ ಜಿಲ್ಲೆಯ ರಂಗ್ಪೋದಿಂದ ಹಲವರು ನಾಪತ್ತೆಯಾಗಿದ್ದಾರೆ ಹಾಗೂ ಹೆಚ್ಚಿನವರಿಗೆ ಗಾಯಗಳಾಗಿವೆ.

ರಾಜ್ಯದಾದ್ಯಂತ 26 ಜನರು ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಬರ್ದಂಗ್ನಲ್ಲಿ 23 ಸೇನಾ ಸಿಬ್ಬಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಅವರು ಬೆಂಗಾವಲು ವಾಹನ ಪ್ರವಾಹದ ಕೆಸರಿನಲ್ಲಿ ಮುಳುಗಿದೆ. ರಾಜ್ಯ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 3 ಹೆಚ್ಚುವರಿ ತುಕಡಿಗಳನ್ನು ಕೇಳಿದೆ. ಇದನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಎನ್‍ಡಿಆರ್‍ಎಫ್‍ನ ಒಂದು ತುಕಡಿ ಈಗಾಗಲೇ ರಂಗ್ಪೋ ಮತ್ತು ಸಿಂಗ್ಟಮ್ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ನಿವಾಸದ ಮೇಲೆ ಇಡಿ ದಾಳಿ

3 ಸಾವಿರ ಪ್ರವಾಸಿಗರು ಅತಂತ್ರ:
ಅವಘಡದಲ್ಲಿ ಈವರೆಗೂ 26 ಮಂದಿ ಗಾಯಗೊಂಡಿದ್ದಾರೆ. 2 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 14 ಸೇತುವೆಗಳು ಕೊಚ್ಚಿ ಹೋಗಿದ್ದು, 22 ಸಾವಿರಕ್ಕೂ ಹೆಚ್ಚು ಮಂದಿಗೆ ತೊಂದರೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರೆಫ್) ಮತ್ತು ವಿವಿಧ ಸಂಸ್ಥೆಗಳು ಹಾನಿಗೊಳಗಾದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಭಾರತೀಯ ವಾಯುಪಡೆ ಕೂಡ ಸನ್ನದ್ಧವಾಗಿದೆ.

ಸಿಎಂ ಜತೆ ಪ್ರಧಾನಿ ಮೋದಿ ಚರ್ಚೆ: ದುರಂತದ ಬಳಿಕ ಪ್ರಧಾನಿ ನರೇಂದ್ರಮೋದಿ ಅವರು ಮುಖ್ಯಮಂತ್ರಿ ಪ್ರೇಮ್‍ಸಿಂಗ್ ತಮಂಗ್ ಅವರ ಜೊತೆ ಮಾತನಾಡಿ ಪರಿಸ್ಥಿತಿಯ ವಿವರ ಪಡೆದುಕೊಂಡಿದ್ದಾರೆ. ಹಾಗೆಯೇ ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ನೀಡಿದ್ದಾರೆ. ಈ ನೈಸರ್ಗಿಕ ವಿಕೋಪವನ್ನು ಸಿಕ್ಕಿಂ ಸರ್ಕಾರ ವಿಪತ್ತು ಎಂದು ಘೋಷಣೆ ಮಾಡಿದೆ.

RELATED ARTICLES

Latest News