Thursday, November 6, 2025
Home Blog Page 7

ವರ್ಷಗಳ ಬಳಿಕ ಎಳನೀರಿನ ಬೆಲೆಯಲ್ಲಿ ತುಸು ಇಳಿಕೆ

ಬೆಂಗಳೂರು, ನ.4- ಕಳೆದೆರಡು ವರ್ಷಗಳ ಹಿಂದಿನ ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತವಾಗಿ ಗಗನಕ್ಕೇರಿದ್ದ ಎಳನೀರು ಬೆಲೆ ಸದ್ಯಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಎಳನೀರು ಬೆಲೆ ಏರುತ್ತದೆ. ಆದರೆ, ಈ ವರ್ಷ ಪೂರ್ತಿ ಏರಿಕೆಯಾಗಿರುವುದು ಇದೇ ಮೊದಲು. ಹಣ ಕೊಟ್ಟರೂ ಎಳನೀರು ಸಿಗದಷ್ಟು ಬರ ಬಂದಿತ್ತು. ಕೇವಲ ಎಳನೀರು ಮಾತ್ರವಲ್ಲ ತೆಂಗಿನಕಾಯಿ, ಕೊಬ್ಬರಿ, ಚಿಪ್ಪು ಬೆಲೆ ಏರಿಕೆಯಾಗಿ ದಾಖಲೆ ನಿರ್ಮಾಣ ಮಾಡಿತ್ತು.

ಕಳೆದೆರಡು ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆಯಾಗಿ ಕಪ್ಪುತಲೆ ಹುಳುಬಾಧೆ ಹಾಗೂ ನುಸಿಪೀಡೆಯಿಂದ ಈ ವರ್ಷ ತೆಂಗಿನ ಇಳುವರಿ ಸಂಪೂರ್ಣವಾಗಿ ಕುಸಿದಿದ್ದು, ಎಳನೀರು ಶತಕದ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ತೆಂಗಿನ ಕಾಯಿಯೂ ಸಹ 60 ರಿಂದ 80ರೂ., ಕೊಬ್ಬರಿ ಕ್ವಿಂಟಾಲ್‌ಗೆ 35 ಸಾವಿರ ರೂ. ಹಾಗೂ ಚಿಪ್ಪು ಟನ್‌ಗೆ 25 ಸಾವಿರಕ್ಕೆ ಮಾರಾಟವಾಗಿ ಇತಿಹಾಸ ಸೃಷ್ಟಿಸಿತ್ತು.

ಏಷ್ಯಾದಲ್ಲೇ ಅತಿದೊಡ್ಡ ಎಳನೀರು ಮಾರುಕಟ್ಟೆಯಾದ ಮದ್ದೂರು ಎಪಿಎಂಸಿಯಲ್ಲಿ ಈ ವರ್ಷ ಹಣ ಕೊಟ್ಟರೂ ಎಳನೀರು ಸಿಗದಷ್ಟು ಕೊರತೆ ಎದುರಾಗಿತ್ತು. ಮದ್ದೂರು ಮಾರುಕಟ್ಟೆಗೆ ರಾಮನಗರ, ಮಂಡ್ಯ, ಮೈಸೂರು, ಕೊಳ್ಳೆಗಾಲ, ಟಿ.ನರಸೀಪುರ, ತುಮಕೂರು ಸೇರಿದಂತೆ ಮತ್ತಿತರ ಕಡೆಗಳಿಂದ ಬಹಳ ಹಿಂದಿನ ಕಾಲದಿಂದಲೂ ಎಳನೀರು ಪೂರೈಕೆಯಾಗುತ್ತದೆ. ಇಲ್ಲಿಂದ ರಾಜಧಾನಿ ಬೆಂಗಳೂರು, ನೆರೆಯ ತುಳುನಾಡು, ಆಂಧ್ರ ಪ್ರದೇಶಕ್ಕೂ ಸರಬರಾಜಾಗುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ನಿರೀಕ್ಷಿತ ಪ್ರಮಾಣದಲ್ಲಿ ಎಳನೀರು ಬಾರದೆ ಇದ್ದುದರಿಂದ ಬೆಲೆ ಹೆಚ್ಚಳವಾಗಿ ಸರಬರಾಜು ಸಂಪೂರ್ಣವಾಗಿ ಇಳಿಮುಖವಾಗಿತ್ತು.

ಬೆಂಗಳೂರಿನಲ್ಲಿ ರಸ್ತೆಯುದ್ದಕ್ಕೂ ಕಾಣಸಿಗುತ್ತಿದ್ದ ಎಳನೀರು ಅಂಗಡಿಗಳು ಕಣರೆಯಾಗಿದ್ದವು .ಎಲ್ಲೋ ಒಂದೊಂದು ಕಡೆ ಮಾತ್ರ ಎಳನೀರು ಮರಾಟವಾಗುತ್ತಿದ್ದು, ಅಲ್ಲಿ ಬೆಲೆ ನೋಡಿದರೆ ತಲೆ ತಿರುಗುತ್ತಿತ್ತು. 60 ರಿಂದ 80 ರೂ. ವರೆಗೂ ಮಾರಾಟವಾಗಿತ್ತು. ಕೆಲ ವ್ಯಾಪಾರಿಗಳು ಎಳನೀರು ಸಿಗದೆ ವ್ಯಾಪಾರಬಿಟ್ಟು ತರಕಾರಿ, ಹೂ, ಹಣ್ಣು ಮರಾಟಕ್ಕಿಳಿದಿದ್ದರು. ಮದ್ದೂರು ಮಾರುಕಟ್ಟೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವರ್ತಕರು, ಹಮಾಲಿಗಳು, ಕಾರ್ಮಿಕರು ತೀವ್ರಸಂಕಷ್ಟಕ್ಕೆ ಸಿಲುಕಿದ್ದರು.

ಈ ಬಾರಿ ಮಳೆ ಉತ್ತಮವಾಗಿದ್ದು, ಮತ್ತೆ ಇಳುವರಿ ಚೇತರಿಸಿಕೊಂಡಿದ್ದು, ಮಾರುಕಟ್ಟೆಗೆ ಎಳನೀರು ಬರುತ್ತಿರುವುದರಿಂದ ಮತ್ತೆ ಎಳನೀರು ಅಂಗಡಿಗಳ ವೈಭವ ಮರುಕಳಿಸಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ 40 ರಿಂದ 50 ರೂ.ಗೆ ಮಾರಾಟವಾಗುತ್ತಿದೆ.

ಕಳೆದ 15 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದು, ಬಿರು ಬೇಸಿಗೆಯಲ್ಲೂ ಸಹ 50ರೂ. ದಾಟುತ್ತಿರಲಿಲ್ಲ . ಆದರೆ ಈ ವರ್ಷ ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲೂ ಸಹ 60 ರಿಂದ 80 ರೂ.ಗೆ ಎಳನೀರು ಮಾರಾಟ ಮಾಡಿದ್ದೇವೆ. ನಾವು ಮದ್ದೂರಿನಿಂದ ಎಳನೀರು ತರಿಸುತ್ತೇವೆ ಅಲ್ಲೆ ಮಾಲು ಇಲ್ಲದ್ದರಿಂದ ನಮಗೆ ಪೂರೈಕೆ ಮಾಡುತ್ತಿರಲಿಲ್ಲ ಹಾಗಾಗಿ ಬೆಲೆ ಏರಿಕೆಯಾಗಿತ್ತು. ಸ್ಪಲ್ಪ ದಿನ ಎಳನೀರು ಸಿಗದೆ ತರಕಾರಿ ವ್ಯಾಪಾರ ಮಾಡುವ ಪರಿಸ್ಥಿತಿ ಬಂದಿತ್ತು.

ಈಗ ಮಾಮೂಲಿಯಂತೆ ಎಳನೀರು ಸರಬರಾಜಾಗುತ್ತಿದ್ದು, ಮದ್ದೂರಿನಲ್ಲಿ 30 ರಿಂದ 40 ರೂ.ಗೆ ಸಿಗುತ್ತದೆ. ಸಾಗಾಣಿಕೆ ವೆಚ್ಚ, ಕೂಲಿ, ಜಾಗದ ಬಾಡಿಗೆ ಸೇರಿ 50 ರಿಂದ 60ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಮುಂದಿನ ಕೆಲ ದಿನಗಳಲ್ಲಿ ಇನ್ನೂ ಸ್ವಲ್ಪ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ನಾಗರಬಾವಿಯ ಎಳನೀರು ವ್ಯಾಪಾರಿ ರಾಜಣ್ಣ ಅವರು ತಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಹಾರ ಚುನಾವಣೆ : ಕಾರ್ಮಿಕರಿಗೆ 3 ದಿನ ವೇತನ ಸಹಿತ ರಜೆ ನೀಡುವಂತೆ ಉದ್ಯಮಿದಾರರಲ್ಲಿ ಡಿಕೆಶಿ ಮನವಿ

ಬೆಂಗಳೂರು. ನ.4- ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕಾರ್ಮಿಕರಿಗೆ ಮೂರು ದಿನಗಳ ವೇತನ ಸಹಿತ ರಜೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉದ್ಯಮಿದಾರರಿಗೆ ಮನವಿ ಮಾಡಿದ್ದಾರೆ.ಈ ಕುರಿತು ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್‌ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನವೆಂಬರ್‌ 6 ಮತ್ತು 11ರಂದು ಮತದಾನವಾಗಲಿದೆ.

ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಹಾರದ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲ್ಲಾ ಕಂಪನಿಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್‌ರ‍ಸಗಳು, ಅಂಗಡಿ ಮುಂಗಟ್ಟುಗಳು ಹಾಗೂ ಇತರ ಉದ್ದಿಮೆದಾರರು ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿ ನೆಲೆಸಿರುವವರಿಗೆ ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಬೇಕು. ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಡಿ.ಕೆ.ಶಿವಕುಮಾರ್‌ ಬಿಹಾರಿಗಳ ಜೊತೆ ಸಂವಾದ ನಡೆಸಿದರು. ತವರೂರಿಗೆ ತೆರಳಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಅದಕ್ಕೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಅದರಂತೆ ಉದ್ಯಮಿದಾರರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-11-2025)

ನಿತ್ಯ ನೀತಿ : ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ಎಲ್ಲರಲ್ಲೂ ಇರುವುದಿಲ್ಲ. ಯಾರು ಎಲ್ಲವನ್ನೂ ಸಹಿಸಿಕೊಂಡು ನಿಲ್ಲಬಲ್ಲರೋ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.

ಪಂಚಾಂಗ : ಮಂಗಳವಾರ, 04-11-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಚತುರ್ದಶಿ / ನಕ್ಷತ್ರ: ರೇವತಿ / ಯೋಗ: ವಜ್ರ / ಕರಣ: ಗರಜ
ಸೂರ್ಯೋದಯ – ಬೆ.06.14
ಸೂರ್ಯಾಸ್ತ – 5.52
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕಾಗುತ್ತದೆ.
ವೃಷಭ: ನಿರೀಕ್ಷೆಗಿಂತ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭಗಳು ಎದುರಾಗಬಹುದು.
ಮಿಥುನ: ಮನೆಯ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ನಿಭಾಯಿಸಬೇಕು.

ಕಟಕ: ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಕಾಡಲಿದೆ.
ಸಿಂಹ: ಸುತ್ತಮುತ್ತಲಿನ ಜನರೊಂದಿಗೆ ಜಗಳ ವಾಡದಿರುವುದು ಸೂಕ್ತ.
ಕನ್ಯಾ: ಮಾನಸಿಕ ಒತ್ತಡ ತೊಡೆದುಹಾಕಲು ಪ್ರಯತ್ನಿಸಿ.

ತುಲಾ: ಶಿಕ್ಷಕರೊಂದಿಗೆ ಉತ್ತಮ ಸಂಬಂಧ ಕಾಪಾಡಿ ಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ವೃಶ್ಚಿಕ: ಆಸ್ತಿ, ಅಪಾರ್ಟ್‌ಮೆಂಟ್‌ ಖರೀದಿಯಲ್ಲಿ ಅ ಕ ಹಣ ಹೂಡಿಕೆ ಮಾಡುವಿರಿ.
ಧನುಸ್ಸು: ಬೆನ್ನು ನೋವು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಕಾರಣ ಕೆಲವು ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

ಮಕರ: ಅ ಕೃತ ಪ್ರಯಾಣ ಕೈಗೊಳ್ಳುವಿರಿ ಮತ್ತು ಅದರಿಂದ ಪ್ರಯೋಜನ ಸಿಗಲಿದೆ.
ಕುಂಭ: ಕೌಟುಂಬಿಕ ಅಗತ್ಯತೆ ಮತ್ತು ಜವಾಬ್ದಾರಿ ಪೂರೈಸಲು ಹಣ ಖರ್ಚು ಮಾಡಬೇಕಾಗುತ್ತದೆ.
ಮೀನ: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.

ಅಭಿವೃದ್ಧಿ ಕಾಣದ ದೇವರಾಜ ಅರಸ್‌‍ ಅವರ ಮನೆ

ಮೈಸೂರು, ನ. 3– ಅಭಿವೃದ್ದಿಯ ಹರಿಕಾರ ಎಂದೇ ಹೆಸರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌‍ ರವರ ಪ್ರತಿಮೆ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ಅನಾವರಣಗೊಂಡಿದೆ. ಆದರೆ ಅವರು ಹುಟ್ಟಿ ಬೆಳೆದು ಆಶ್ರಯ ನೀಡಿದ್ದ ಗೃಹ ಅಭಿವೃದ್ಧಿ ಕಾಣದೆ ನಿಂತಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಡಿ.ದೇವರಾಜ ಅರಸ್‌‍ ರವರು ಹುಟ್ಟಿಬೆಳೆದ ನಿವಾಸದ ಬಗ್ಗೆ 1970ರ ದಶಕದಲ್ಲಿ ರಾಜಕಾರಿಣಿಗಳಿಂದ, ಜನಗಳಿಂದ ತುಂಬಿ ತುಳುಕುತ್ತಿದ್ದ ಈ ಮನೆ ಇದೀಗ ನಿರ್ಜೀವವಾಗಿದೆ. ಅಭಿವೃದ್ದಿಯ ಹರಿಕಾರನಾಗಿ ಹೆಸರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌‍ ರವರ ಮನೆಗೆ ಅಭಿವೃದ್ದಿಯೇ ಮರೀಚಿಕೆಯಾಗಿದೆ. ಇವರಿಂದ ರಾಜಕೀಯ ಪಟ್ಟುಗಳನ್ನ ಕಲಿತ ಎಷ್ಟೋ ರಾಜಕಾರಿಣಿಗಳಿಗೆ ಈ ನಿವಾಸ ಜ್ಞಾಪಕಕ್ಕೂ ಬಾರದಿರುವುದು ವಿಪರ್ಯಾಸ.

1915ರಲ್ಲಿ ಜನಿಸಿದ ಡಿ. ದೇವರಾಜ್‌ ಅರಸ್‌‍ ರವರು 1982ರ ವರೆಗೆ ಇದೇ ನಿವಾಸದಲ್ಲಿ ವಾಸ ಮಾಡಿದವರು. ದೇವರಾಜ ಅರಸ್‌‍ ರವರ ರಾಜಕೀಯ ಹುಟ್ಟಿಗೆ ಕಾರಣವಾದ ಮನೆಯೂ ಇದಾಗಿದೆ. ರಾಜ್ಯದ ಜನತೆಗೆ ಇವರು ಆಡಳಿತದ ಅವಧಿಯಲ್ಲಿ ಕೊಟ್ಟ ಕೊಡುಗೆಗಳು ಅವಿಸರಣೀಯ. ಇವರ ಗರಡಿಯಲ್ಲಿ ಪಳಗಿದ ರಾಜಕಾರಣಿಗಳಿಗೆ ಇಂದಿಗೂ ಇವರ ಅಭಿವೃದ್ದಿಯ ಮಂತ್ರವೇ ಜೀವನಾಡಿ. ಪ್ರತಿಯೊಂದು ವಿಚಾರ ದಲ್ಲೂ ಡಿ.ದೇವರಾಜ ಅರಸ್‌‍ ರವರ ರಾಜಕೀಯವನ್ನೇ ಉದಾಹರಣೆ ಯಾಗಿ ಬಳಸಿಕೊಳ್ಳುತ್ತಿರುವುದು ಪ್ರಸ್ತುತ.

ಇಂತಹ ಒಬ್ಬ ಮಹಾನ್‌ ಹಾಗೂ ಮಾದರಿ ನಾಯಕನನ್ನ ರಾಜ್ಯಕ್ಕೆ ಕೊಟ್ಟ ಈ ಮನೆಯಲ್ಲಿ ಉಳಿದಿರುವುದು ನೆನಪುಗಳು ಮಾತ್ರ. ದೇವರಾಜ ಅರಸುರವರ ನಿವಾಸವನ್ನು ಅಭಿವೃದ್ದಿಪಡಿಸುವ ಸಾಕಷ್ಟು ಪ್ರಯತ್ನಗಳು ನಡೆದವಾದರೂ ಲಿತಾಂಶ ಮಾತ್ರ ಶೂನ್ಯ.
2015 ರಲ್ಲಿ ಈ ಮನೆಯನ್ನ ಮ್ಯೂಸಿಯಂ ಮಾಡಲು ಹೊರಟವರು ಕೈಕಟ್ಟಿ ಕುಳಿತರು.

ಮಂಜುನಾಥ್‌ ರವರು ಶಾಸಕರಾಗಿದ್ದ ವೇಳೆ ಹಾಗೂ ಹಿಂದುಳಿದ ವರ್ಗ ಹಾಗೂ ಕಲ್ಯಾಣ ಇಲಾಖೆ ಸಚಿವರಾಗಿದ್ದ ಆಂಜನೇಯ ರವರ ಅವಧಿಯಲ್ಲಿ ಕಲ್ಲಹಳ್ಳಿ ಗ್ರಾಮದ ಅಭಿವೃದ್ದಿಗೆ ದತ್ತು ಸ್ವೀಕಾರವಾಯ್ತು. ಆದರೆ ಈ ಯೋಜನೆಯೂ ಮೂಲೆ ಗುಂಪಾಯಿತು. ಡಿ.ದೇವರಾಜ ಅರಸ್‌‍ ರವರ ನಿವಾಸಕ್ಕೆ ತಲುಪ ಬೇಕಾದರೂ ರಸ್ತೆಯಲ್ಲಿರುವ ಹಳ್ಳಗುಂಡಿಗಳನ್ನ ತಪ್ಪಿಸಿಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಿದೆ. ಸದ್ಯ ಈ ಮನೆಗೆ ಪ್ರತಿದಿನ ಸ್ವಚ್ಛಗೊಳಿಸಲು ವ್ಯಕ್ತಿಯೊಬ್ಬರು ಬರುತ್ತಾರೆ. ಕಸಗುಡಿಸಿ ಮನೆಯಲ್ಲಿರುವ ಮಹಾವೀರ ಪ್ರತಿಮೆಗೆ ಪೂಜೆ ಸಲ್ಲಿಸಿ ತೆರಳುವುದು ಹೊರತು ಪಡಿಸಿದರೆ ಇನ್ಯಾವ ಚಟುವಟಿಕೆಯೂ ಅಲ್ಲಿ ಇಲ್ಲ. ದೇವರಾಜ ಅರಸ್‌‍ ರವರ ಪುತ್ರಿ ಹಾಗೂ ಮೊಮಕ್ಕಳೂ ಸಹ ಇತ್ತ ಸುಳಿಯದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಇಂದು ಡಿ.ದೇವರಾಜ ಅರಸ್‌‍ ರವರ ಪ್ರತಿಮೆಯನ್ನ ಅನಾವರಣ ಗೊಳಿಸುವ ಮೂಲಕ ಸರ್ಕಾರ ಸರಣೆ ಮಾಡುತ್ತಿದೆ ಆದರೆ ಮತ್ತೊಂದೆಡೆ ಇವರ ನಿವಾಸವನ್ನು ಅಭಿವೃದ್ಧಿಪಡಿಸಬೇಕೆಂದು ಸಾರ್ವಜನಿಕರ ಆಶಯವಾಗಿದೆ.

ದಲಿತ ಅಥವಾ ಮುಸ್ಲಿಂ ಸಮುದಾಯಕ್ಕೆ ಸಿಎಂ ಸ್ಥಾನ ನೀಡಲು ಆಗ್ರಹ

ಬೆಂಗಳೂರು, ಅ.3-ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ದಲಿತ ಅಥವಾ ಮುಸ್ಲೀಂ ಸಮುದಾಯದ ನಾಯಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಉತ್ತರ ಕರ್ನಾಟಕದ ರೈತ ಮುಖಂಡ ಯಾಸೀನ ಜವಳಿ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌‍ ಪಕ್ಷದ ಬೆನ್ನೆಲುಬಾಗಿರುವ ದಲಿತ ಹಾಗೂ ಮುಸ್ಲೀಂ ಸಮುದಾಯದವರು ಇದುವರೆಗೂ ಮುಖ್ಯಮಂತ್ರಿಯಾಗಿಲ್ಲ. ಈ ಸಮುದಾಯದವರು ಕೇವಲ ಮತ ಹಾಕಲು ಮಾತ್ರ ಬೇಕೆ? ಅಧಿಕಾರ ಬಂದಾಗ ಈ ಸಮುದಾಯಕ್ಕೆ ಪ್ರಾತಿನಿಧ್ಯ ಬೇಡವೇ? ಎಂ ಪ್ರಶ್ನಿಸಿದ್ದಾರೆ.

ಈ ಸಮುದಾಯಗಳಿಗೆ ಕಾಂಗ್ರೆಸ್‌‍ ಆದ್ಯತೆ ನೀಡುವುದಾದರೆ ಈ ವರ್ಗದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ, ಇಲ್ಲವಾದರೆ ಯಾವ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಡಿ. ಒಂದು ವೇಳೆ ಅವರನ್ನು ಕೆಳಗಿಳಿಸಿದರೆ ದಲಿತ ಅಥವಾ ಮುಸ್ಲೀಂ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ.

ಎರಡನೇ ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ. ಇದು ನಿಜವೇ ಆಗಿದ್ದರೆ ಕಾಂಗ್ರೆಸ್‌‍ ಪಕ್ಷ ದೊಡ್ಡ ಹಿನ್ನೆಡೆ ಅನುಭವಿಸಲಿದೆ. ಕಾಂಗ್ರೆಸ್‌‍ನಲ್ಲಿ ಮಾಸ್‌‍ ಲೀಡರ್‌ ಯಾರೂ ಇಲ್ಲದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಮರೆತ ಸರ್ಕಾರ : ಆರ್‌.ಅಶೋಕ್‌

ಬೆಂಗಳೂರು,ನ.3- ಕುರ್ಚಿ ಕಿತ್ತಾಟದಲ್ಲಿ ರೈತರನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರ, ಬೆಳಗಾವಿ, ಬಾಗಲಕೋಟೆ, ಉತ್ತರಕನ್ನಡ ಜಿಲ್ಲೆಗಳ ಕಬ್ಬು ಬೆಳೆಗಾರರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸದ ಈ ರೈತವಿರೋಧಿ ಕಾಂಗ್ರೆಸ್‌‍ ಸರ್ಕಾರ ಇದ್ದರೆಷ್ಟು, ಹೋದರೆಷ್ಟು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಇನ್ನು ರೈತರು ತಮ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು ಸ್ವಾಮಿ? ಇನ್ನೆಷ್ಟು ದಿನ ಈ ಭಂಡ ಬಾಳು ನಿಮದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಸೂರ್ಯಕಾಂತಿ, ಉದ್ದಿನಕಾಳು, ಸೋಯಾಬೀನ್‌ ಹೆಸರುಕಾಳು ಬೆಳೆದ ರೈತರು ತಮ ಫಸಲು ಮಾರಲಾಗದೆ ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಕಬ್ಬು ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಅಲಗಾಡುತ್ತಿರುವ ಕುರ್ಚಿಯಿಂದ ಹತಾಶರಾಗಿದ್ದು, ತಾಳೆ ಕಳೆದುಕೊಂಡು ಎಲ್ಲರ ಮೇಲೂ ಸಿಡಿಮಿಡಿ ಎನ್ನುತ್ತಿದ್ದೀರಿ. ನಾಯಕತ್ವ ಬದಲಾವಣೆ ಗೊಂದಲದಿಂದ ಸಚಿವರು, ಶಾಸಕರು ದಿಕ್ಕು ತೋಚದೆ ಹೈರಾಣಾಗಿ ಮನೆಯಿಂದ ಆಚೆ ಬರುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಾಣಲಿ ಹೆಲ್ಮೆಟ್‌ ಸವಾರನಿಗಾಗಿ ಪೊಲೀಸರ ಶೋಧ

ಬೆಂಗಳೂರು,ನ.3- ದಂಡದಿಂದ ತಪ್ಪಿಸಿಕೊಳ್ಳಲು ಬೈಕ್‌ ಹಿಂಬದಿ ಸವಾರನೊಬ್ಬ ಬಾಣಲಿಯನ್ನು ಹೆಲ್ಮೆಟ್‌ನಂತೆ ತಲೆ ಮೇಲೆ ಇಟ್ಟುಕೊಂಡಿರುವುದು ನಗರದಲ್ಲಿ ಕಂಡು ಬಂದಿದೆ.ಈ ಬೈಕ್‌ ಸವಾರ ಹಾಗೂ ಹಿಂಬದಿ ಸವಾರನಿಗಾಗಿ ಪೊಲೀಸರು ಶೋಧ ನಡೆಸುತ್ತಿ ದ್ದಾರೆ.

ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲೆಟ್‌ ಧರಿಸದೆ ಸಂಚರಿಸಿದರೆ ದಂಡ ಬೀಳುವುದಂತೂ ಗ್ಯಾರಂಟಿ. ಹಾಗಾಗಿ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹಿಂಬದಿ ಕುಳಿತುಕೊಂಡು ಬಾಣಲಿ ತಲೆಗೆ ಇಟ್ಟುಕೊಂಡಿರುವುದು ವಿಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನಗೆಪಾಟಲಾಗಿದೆ. ಈ ಬೈಕ್‌ನ ಹಿಂಬದಿ ಸವಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ವೈದ್ಯೆ ಕೃತಿಕಾರೆಡ್ಡಿ ಕೊಲೆ ಪ್ರಕರಣ : ಪತಿಯ ಕರಾಳ ಮುಖ ಬಹಿರಂಗ

ಬೆಂಗಳೂರು,ನ.3-ವೈದ್ಯೆ ಕೃತಿಕಾರೆಡ್ಡಿ ಕೊಲೆ ಮಾಡಿದ ನಂತರ ಆರೋಪಿ ಪತಿ ಮಹೇಂದ್ರರೆಡ್ಡಿ ನಿನಗಾಗಿ ಪತ್ನಿಯನ್ನು ಕೊಂದಿದ್ದೇನೆ ಎಂದು ತನ್ನ ಸ್ನೇಹಿತೆಗೆ ಮೆಸೇಜ್‌ ಕಳುಹಿಸಿರುವುದು ಮಾರತಹಳ್ಳಿ ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪತ್ನಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಮಹೇಂದ್ರ ರೆಡ್ಡಿಯ ಒಂದೊಂದು ಕರಾಳತೆ ಬೆಳಕಿಗೆ ಬರುತ್ತಿವೆ.ಪೊಲೀಸರ ತನಿಖೆ ವೇಳೆ ಮಹೇಂದ್ರರೆಡ್ಡಿ ವಿರುದ್ಧ ಬಗೆದಷ್ಟೂ ಒಂದೊಂದೇ ವಿಷಯಗಳು ಬಯಲಾಗುತ್ತಿವೆ.

ಆಪ್ತ ಸ್ನೇಹಿತೆ ಜೊತೆ ಮಹೇಂದ್ರರೆಡ್ಡಿ ಪ್ರತಿನಿತ್ಯ ಚಾಟಿಂಗ್‌ ಮಾಡುತ್ತಿದ್ದನು. ಅದರಿಂದ ಬೇಸರಗೊಂಡು ಆಕೆ ಈತನನ್ನು ಬ್ಲಾಕ್‌ ಮಾಡಿದ್ದಳು. ಹಾಗಾಗಿ ಫೋನ್‌ ಪೇ ನಲ್ಲಿ ಚಾಟಿಂಗ್‌ ಮಾಡಿ ಐ ಕಿಲ್‌ ಮೈ ವೈಫ್‌….. ಬಿಕಾಸ್‌‍ ಆಫ್‌ ಯು ಎಂದು ಮೆಸೇಜ್‌ ಕಳುಹಿಸಿ ತದ ನಂತರ ಆ ಮೆಸೇಜ್‌ ಡಿಲಿಟ್‌ ಆಗದ ಕಾರಣ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮಹೇಂದ್ರರೆಡ್ಡಿಯ ಮೊಬೈಲ್‌ ಫೋನನ್ನು ರಿಟ್ರೀವ್‌ ಮಾಡಿರುವ ಪೊಲೀಸರು, ಅದರಲ್ಲಿರುವ ಚಾಟಿಂಗ್‌ಗಳನ್ನು ಪರಿಶೀಲಿಸಿದಾಗ ಸ್ನೇಹಿತೆ ಜೊತೆ ಈ ರೀತಿ ಮೆಸೇಜ್‌ ಕಳುಹಿಸಿರುವುದು ಹಾಗೂ ಕೆಲವು ವೈಯಕ್ತಿಕ ವಿಚಾರಗಳು ಗೊತ್ತಾಗಿದ್ದು, ಈ ಪ್ರಕರಣಕ್ಕೆ ಇನ್ನಷ್ಟು ಸಾಕ್ಷ್ಯ ದೊರೆತಂತಾಗಿವೆ.

ಈ ಸಂಬಂಧ ಆರೋಪಿ ಮಹೇಂದ್ರರೆಡ್ಡಿ ಸ್ನೇಹಿತೆಯನ್ನೂ ಸಹ ತನಿಖಾಧಿಕಾರಿ ಕರೆದು ವಿಚಾರಣೆಗೆ ಒಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಪತ್ನಿ ಕೃತಿಕಾರೆಡ್ಡಿಯ ಆರೋಗ್ಯ ಸಮಸ್ಯೆ ತಿಳಿದಿದ್ದ ಮಹೇಂದ್ರರೆಡ್ಡಿ ಒಂದು ವೇಳೆ ಪತ್ನಿಗೆ ವಿಚ್ಛೇಧನ ನೀಡಿದರೆ ಏನೂ ಸಿಗುವುದಿಲ್ಲ ಎಂದು ಅರಿತು ನಂತರ ಕೊಲೆಗೆ ಸಂಚು ರೂಪಿಸಿ ಅದರಂತೆ ಪತ್ನಿಗೆ ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ಸಹಜ ಸಾವು ಎಂದು ಬಿಂಬಿಸಿ ಒಳ್ಳೆಯವನಂತೆ ನಟಿಸಿದ್ದನು. ತದ ನಂತರ ಕೃತಿಕಾರೆಡ್ಡಿಯ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾನೆ.

ಲಿಫ್ಟ್ ನೊಳಗೆ ಬಟ್ಟೆ ಒಗೆದಂತೆ ಒಗೆದು ನಾಯಿಯನ್ನು ಸಾಯಿಸಿದ ಮನೆಗೆಲಸದಾಕೆ

ಬೆಂಗಳೂರು, ನ.3– ಕ್ರೂರ ಮನಸ್ಥಿತಿಯ ಮನೆಗೆಲಸದಾಕೆ ಶ್ವಾನವನ್ನು ಲಿಫ್‌್ಟನಲ್ಲಿ ಬಟ್ಟೆ ಒಗೆದ ಹಾಗೆ ಒಗೆದು ಸಾಯಿಸಿರುವ ಘಟನೆ ಬಾಗಲೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ನಗರದ ಬೆಳ್ಳಳ್ಳಿಯ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ.

ಇವರ ಮನೆ ಹಾಗೂ ದುಬಾರಿ ಬೆಲೆಯ ಶ್ವಾನ ವನ್ನು ನೋಡಿಕೊಳ್ಳಲು ತಮಿಳುನಾಡು ಮೂಲದ ಪುಷ್ಪಲತಾ ಎಂಬಾಕೆಯನ್ನು ಕಳೆದ 6ತಿಂಗಳಿಂದ ನೇಮಿಸಿಕೊಂಡಿದ್ದಾರೆ.ಪುಷ್ಪಲತಾ ಮನೆಗೆಲಸ ಮಾಡಿಕೊಂಡು ವಿಧ್ಯಾರ್ಥಿನಿ ಜೊತೆಯಲ್ಲೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.

ಅ.31 ರಂದು ರಾತ್ರಿ ಪುಷ್ಪಲತಾ ಶ್ವಾನವನ್ನು ಅಪಾರ್ಟ್‌ಮೆಂಟ್‌ನ ಲಿಫ್ಟ್ ನಲ್ಲಿ ಹೊರಗೆ ವಾಕಿಂಗ್‌ಗೆ ಕರೆದುಕೊಂಡು ಹೋಗಿ ವಾಪಸ್‌‍ ಬರುವ ಸಂದರ್ಭದಲ್ಲಿ ಲಿಫ್‌್ಟನೊಳಗೆ ಆ ನಾಯಿ ಮರಿಯನ್ನು ಬಟ್ಟೆ ಒಗೆದ ಹಾಗೆ ಒಗೆದು ಸಾಯಿಸಿದ್ದಾಳೆ.

ನಂತರ ಮನೆಗೆ ಹೋಗಿ ನಾಯಿ ಬಿದ್ದು ಸತ್ತಿದೆ ಎಂದು ವಿದ್ಯಾರ್ಥಿನಿಗೆ ಹೇಳಿದ್ದಾಳೆ. ತಕ್ಷಣ ವಿದ್ಯಾರ್ಥಿನಿ ಸೆಕ್ಯೂರಿಟಿ ಗಾರ್ಡ್‌ಗೆ ವಿಚಾರಿಸಿ, ನಂತರ ಅನುಮಾನಗೊಂಡು ಸಿಸಿ ಕ್ಯಾಮೆರಾ ನೋಡಿದಾಗ ಮನೆಗೆಲಸದಾಕೆಯೇ ಸಾಯಿಸಿರುವುದು ಕಂಡು ಬಂದಿದೆ.

ಈ ದೃಶ್ಯ ಲಿಫ್ಟ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಯಿಮರಿ ಸಾಯಿಸಿರುವ ವಿಷಯ ತಿಳಿದು ಮನೆಗೆಲಸದಾಕೆಯ ವಿರುದ್ಧ ವಿದ್ಯಾರ್ಥಿನಿ ಬಾಗಲೂರು ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅಪಾರ್ಟ್‌ಮೆಂಟ್‌ನ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಪೊಲೀಸರು ಆರೋಪಿ ಪುಷ್ಪಲತಾಳನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಆನೆಗಳ ಸಾವು ಕುರಿತು ತನಿಖೆಗೆ ಆದೇಶ

ಬೆಂಗಳೂರು, ಅ.3-ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ಸುಳೇಗಾಳಿ ಗ್ರಾಮದಲ್ಲಿ ನಿನ್ನೆ ವಿದ್ಯುತ್‌ ಸ್ಪರ್ಶದಿಂದ ಎರಡು ಆನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆಅವರು ತನಿಖೆಗೆ ಆದೇಶಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಇದೇ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಲೋಪವಿದ್ದಲ್ಲಿ ಶಿಸ್ತು ಕ್ರಮದ ಶಿಫಾರಸ್ಸಿನೊಂದಿಗೆ 5 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವರು ಸೂಚಿಸಿದ್ದಾರೆ. ಬೇಲಿಗೆ ವಿದ್ಯುತ್‌ ಸಂಪರ್ಕ ನೀಡಿ ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಪ್ರಕರಣವನ್ನು ದಾಖಲಿಸಲು ಅವರು ನಿರ್ದೇಶನ ನೀಡಿದ್ದಾರೆ.