ನವದೆಹಲಿ, ಮೇ 15- ಸಿಂಧೂ ನದಿ ಜಲ ಒಪ್ಪಂದದ ಅಮಾನತನ್ನು ಮರುಪರಿಶೀಲಿಸಿ ಎಂದು ಭಾರತಕ್ಕೆ ಪಾಕ್ ಮನವಿ ಮಾಡಿಕೊಂಡಿದೆ.ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಇದರಿಂದ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು ತಲೆದೋರಿದೆ.
ಕದನವಿರಾಮ ಘೋಷಣೆಯಾದರೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುವ ಬೆಂಬಲವನ್ನು ಪೂರ್ತಿಯಾಗಿ ನಿಲ್ಲಿಸುವವರೆಗೂ ಸಿಂಧೂ ಜಲ ಒಪ್ಪಂದ ಅಮಾನತ್ತಾಗಿರುತ್ತದೆ. ಎಂದು ಭಾರತ ಖಚಿತಪಡಿಸಿದ್ದಕ್ಕೆ ಮೊದಲು ಪಾಕಿಸ್ತಾನ ಅಹಂಕಾರದ ಮಾತುಗಳನ್ನಾಡಿತ್ತು.
ಭಾರತ ಸಿಂಧೂ ಜಲ ಒಪ್ಪಂದ ಅಮಾನತನ್ನು ಕೈಬಿಡದಿದ್ದರೆ ಕದನವಿರಾಮಕ್ಕೆ ಯಾವುದೇ ಅರ್ಥವಿರುವುದಿಲ್ಲ, ನಮಗೆ ನೀರು ಬಿಡದಿದ್ದರೆ ಅದನ್ನು ಹೇಗೆ ಪಡೆಯಬೇಕೆಂಬುದು ನಮಗೆ ಗೊತ್ತಿದೆ ಎಂದು ಪಾಕ್ ಹೇಳಿಕೆ ನೀಡಿತ್ತು. ಅದಕ್ಕೂ ಭಾರತ ಜಗ್ಗದಿದ್ದಾಗ ಇದೀಗ ಮಾತುಕತೆಯ ಮೂಲಕ ಭಾರತದ ಮನವೊಲಿಸಲು ಮುಂದಾಗಿದೆ.
ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರದ ಬಗ್ಗೆ ಭಾರತವು ಔಪಚಾರಿಕವಾಗಿ ತಿಳಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಸರ್ಕಾರದ ಪರವಾಗಿ ಭಾರತ ಆಕ್ಷೇಪಿಸುವ ನಿರ್ದಿಷ್ಟ ಷರತ್ತುಗಳನ್ನು ಚರ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿದೆ.
ಸಿಂಧೂ ಜಲ ಒಪ್ಪಂದವು 6 ದಶಕಗಳಿಗೂ ಹೆಚ್ಚು ಕಾಲ ಉಳಿದುಕೊಂಡಿರುವ ಪ್ರಮುಖ ನೀರು ಹಂಚಿಕೆ ಒಪ್ಪಂದವಾಗಿದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಮತ್ತೊಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ದಾಳಿಯ ನಂತರ ಭಾರತ 1960ರ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು.
1960ರ ಒಪ್ಪಂದದ ಪ್ರಕಾರ, ಭಾರತದಲ್ಲಿ ನೆಲೆಗೊಂಡಿರುವ ಸಿಂಧೂ ನದಿ ವ್ಯವಸ್ಥೆಯಿಂದ ಸಾಗಿಸಲ್ಪಡುವ ಒಟ್ಟು ನೀರಿನಲ್ಲಿ ಭಾರತವು ಸುಮಾರು ಶೇ. 30ರಷ್ಟನ್ನು ಪಡೆಯಿತು. ಉಳಿದ ಶೇ. 70ರಷ್ಟನ್ನು ಪಾಕಿಸ್ತಾನ ಪಡೆಯಿತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರೊಂದಿಗೆ, ಸ್ಥಗಿತಗೊಂಡಿರುವ ಜಲವಿದ್ಯುತ್ ಯೋಜನೆಗಳನ್ನು ಪೂರ್ಣಗೊಳಿಸುವತ್ತ ನರೇಂದ್ರ ಮೋದಿ ಸರ್ಕಾರವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.