ಬೆಂಗಳೂರು,ಸೆ.26– ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗಿದ್ದು, ವಾರದಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮಲ್ಲೇಶ್ವರಂನ 18ನೇ ಅಡ್ಡ ರಸ್ತೆಯಲ್ಲಿರುವ ಮೈದಾನದಲ್ಲಿ ಉತ್ತರ ವಿಭಾಗದ ಪೊಲೀಸರು ಹಮಿಕೊಂಡಿದ್ದ ರಾಣಿ ಚೆನ್ನಮ ಪಡೆ-ಮಹಿಳಾ ಜಾಗೃತಿ ಕಾರ್ಯಕ್ರಮಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾರ್ವಜನಿಕರಲ್ಲಿ ಸ್ಥೈರ್ಯ ಮೂಡಿಸಲು ನಗರದಾದ್ಯಂತ ಪೊಲೀಸರು ನಾಕಾ ಬಂದಿ ಹಾಕಿ ಪರಿಶೀಲಿಸುತ್ತಿದ್ದಾಗ ಮಾದಕ ವಸ್ತುಗಳು ಪತ್ತೆಯಾಗಿವೆ. ಅಲ್ಲದೇ ದಾಖಲೆ ಇಲ್ಲದ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.
ಜನಸ್ನೇಹಿಯಾಗಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ರಮ ವಹಿಸಲಾಗಿದೆ. ನಗರದಲ್ಲಿ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಗಸ್ತು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.ಅಪರಾಧ ವಿಭಾಗದ ಪೊಲೀಸರಿಗೆ ನಗರದಲ್ಲಿ ಹೆಚ್ಚು ನಾಕಾ ಬಂಧಿ, ಗಸ್ತು ಹಾಗೂ ಏರಿಯಾ ಡೊಮಿನೇಷನ್ಗೆ ಮಾಡುವಂತೆ ಸೂಚಿಸಿರುವ ಆಯುಕ್ತರು, ರಾತ್ರಿ ಗಸ್ತು ಹೊರತುಪಡಿಸಿ ಹೆಚ್ಚುವರಿಯಾಗಿ ಗಸ್ತು ಮಾಡಲು ಸಲಹೆ ನೀಡಿದ್ದಾರೆ.
ಪ್ರತಿ ಮಂಗಳವಾರ ಹಾಗೂ ಗುರುವಾರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಏರಿಯಾವನ್ನು ಡೊಮಿನೇಷನ್ ಮಾಡಲು, ರಾತ್ರಿ 9 ಗಂಟೆಯಿಂದ 11 ಗಂಟೆಯ ಅಂತರದಲ್ಲಿ ತಪಾಸಣೆ ಮಾಡುವಂತೆ, ಪರಿಶೀಲನೆ ವೇಳೆ ಮಹಿಳೆಯರು ಮತ್ತು ಮಕ್ಕಳ ನಡುವೆ ಒಳ್ಳೆಯ ರೀತಿ ವರ್ತಿಸುವಂತೆ ಆಯುಕ್ತರು ಸೂಚಿಸಿದ್ದಾರೆ.
ಅದೇ ರೀತಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಕಾಲ್ನಡಿಗೆಯಲ್ಲಿ ಅತೀ ಸೂಕ ಹಾಗೂ ಜನಸಂದಣಿ ಏರಿಯಾದಲ್ಲಿ ಗಸ್ತು ತಿರುಗಲು ತಿಳಿಸಿದರು.ಈ ಎಲ್ಲಾ ಚಟುವಟಿಕೆಗಳಲ್ಲಿ ಇನ್್ಸಪೆಕ್ಟರ್ಗಳು,ಎಸಿಪಿಗಳು ಹಾಗೂ ಡಿಸಿಪಿಗಳು ಭಾಗವಹಿಸುವಂತೆ, ಈ ಬಗ್ಗೆ ಆಗಿಂದ್ದಾಗೆ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ.ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಉಪ ಪೊಲೀಸ್ ಆಯುಕ್ತ ನೇಮೆಗೌಡ ಉಪಸ್ಥಿತರಿದ್ದರು.