Friday, May 10, 2024
Homeರಾಜ್ಯರಾಯಚೂರು ಬಿಜೆಪಿ ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ರಾಯಚೂರು ಬಿಜೆಪಿ ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಬೆಂಗಳೂರು, ಏ.27- ರಾಯಚೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿವಿ ನಾಯಕ್‌ ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿ ಪಕ್ಷದಿಂದಲೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ತಾಂತ್ರಿಕ ಕಾರಣಗಳಿಂದ ನಾಮಪತ್ರ ತಿರಸ್ಕತವಾಗಿದೆ. ನಾಮಪತ್ರ ಪರಿಷ್ಕರಣೆ ವೇಳೆ ಬಿ.ವಿ. ನಾಯಕ್‌ ನಾಮಪತ್ರ ತಿರಸ್ಕೃತಗೊಂಡಿದೆ.

ಬಿಜೆಪಿಯಿಂದಲೇ ಬಿವಿ ನಾಯಕ್‌ ನಾಮಪತ್ರ ಸಲ್ಲಿಸಿದ್ದರಿಂದ ಎ.ಬಿ ಫಾರ್ಮ್‌ ಇರಲಿಲ್ಲ.ಒಂದು ವೇಳೆ ಫಾರ್ಮ್‌ ಇಲ್ಲದ ಪಕ್ಷದಲ್ಲಿ 10 ಜನ ಸೂಚಕರು ಇವರ ಪರ ಇರಬೇಕು. ಆದರೆ ಬಿವಿ ನಾಯಕ್‌ ಪರ ಓರ್ವ ಸೂಚಕ ಮಾತ್ರ ಇದ್ದರು. ಇದೇ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ್‌ ನಾಯಕ್‌ ಹೇಳಿದ್ದಾರೆ.

ಬಂಡಾಯ ಅಭ್ಯರ್ಥಿ ಬಿವಿ ನಾಯಕ್‌ ನಾಮಪತ್ರ ತಿರಸ್ಕೃತಗೊಂಡಿರುವ ಕಾರಣ, ಬಿಜೆಪಿ ಪಾಳಯ ನಿಟ್ಟುಸಿರು ಬಿಟ್ಟಿದೆ. ಬಿವಿ ನಾಯಕರ ಬಂಡಾಯದಿಂದ ಕ್ಷೇತ್ರದಲ್ಲಿ ನೆಗೆಟಿವ್‌ ಅಲೆ ಶುರುವಾಗಿತ್ತು. ಆದರೀಗ ನಾಮಪತ್ರ ತಿರಸ್ಕೃತಗೊಂಡಿರೊ ಹಿನ್ನೆಲೆ ಬಿಜೆಪಿ ಪಾಳಯಕ್ಕೆ ಮತ್ತಷ್ಟು ಶಕ್ತಿಬಂದಂತಾಗಿದೆ. ಈಗಾಗಲೇ ವರಿಷ್ಠರ ಸಂಧಾನಕ್ಕೆ ಒಪ್ಪಿದ್ದ ಬಿವಿ ನಾಯಕ್‌ ಇನ್ಮುಂದೆ ಬಿಜೆಪಿ ಪರ ಪ್ರಚಾರಕ್ಕಿಳಿಯುತ್ತಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿವಿ ನಾಯಕ್‌ ರನ್ನ ಶತಾಯಗತಾಯ ಫೀಲ್ಡ್ ಗೆ ಕರೆತಂದು ಪ್ರಚಾರ ಮಾಡಬೇಕು ಅಂತ ಜಿಲ್ಲಾ ಘಟಕ ಹರಸಾಹಸ ಪಡ್ತಿದೆ. ಈ ಮಧ್ಯೆ ಬಿವಿ ನಾಯಕ್‌ ನಾಮಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್‌ ನಾಯಕ್‌ ನಿರಾಕರಿಸಿದ್ದು, ಅದು ಅವರ ವೈಯಕ್ತಿಕ ಅಂತ ಹೇಳ್ತಿದ್ದಾರೆ. ಒಟ್ಟಿನಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಬಿವಿ ನಾಯಕ್‌ ಬಿಜೆಪಿ ಪರ ಬ್ಯಾಟ್‌ ಬೀಸ್ತಾರಾ, ಇಲ್ಲಾ ಒಳಹೊಡೆತ ಕೊಡ್ತಾರಾ ಅನ್ನೋದೇ ಕುತೂಹಲ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದ ಹಿನ್ನೆಲೆ ಬಿವಿ ನಾಯಕ್‌ ಕೆರಳಿದ್ದರು. ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿವಿ ನಾಯಕ್‌ ರಾಜ್ಯ,ಕೇಂದ್ರ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ ಇದರಿಂದ ಟಿಕೆಟ್‌ ಬದಲಾವಣೆ ಆಗಿರಲಿಲ್ಲ.

ಈ ಮಧ್ಯೆ ಬಿವಿ ನಾಯಕ್‌ ಬಂಡಾಯ ತಣಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಗರವಾಲ್‌ ಹರಸಾಹಸ ಪಟ್ಟಿದ್ದರು. ಖುದ್ದು ರಾಯಚೂರಿಗೆ ಆಗಮಿಸಿದ್ದ ಅಗರವಾಲ್‌ ಬಿವಿ ನಾಯಕ್‌ ಮನವೊಲಿಸಿ ಅವರ ಮೂಲಕವೇ ರಾಜಾ ಅಮರೇಶ್ವರ ನಾಯಕ್‌ಗೆ ಬಿ ಫಾರ್ಮ್‌ ಕೊಡಿಸಿದ್ದರು. ಇದಾದ ಬಳಿಕ ಎಲ್ಲವೂ ತಣ್ಣಗಾಯ್ತು ಅಂತ ಭಾವಿಸಲಾಗಿತ್ತು. ಆದರೆ ಆಗಿದ್ದೇ ಬೇರೆ.

ಬಿಜೆಪಿ ಸಂಸದ ಹಾಗೂ ಘೋಷಿತ ಅಭ್ಯರ್ಥಿ ರಾಜಾ ಅಮರೇಶ್ವರ್‌ ನಾಯಕ್‌ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಬಿವಿ ನಾಯಕ್‌ ಬಂಡಾಯವೆದ್ದು ಅಜ್ಞಾತ ಸ್ಥಳದಿಂದಲೇ ತಮ್ಮ ಸೂಚಕರ ಮೂಲಕ ನಾಮಪತ್ರ ಸಲ್ಲಿಸಿದ್ದರು. ಅಚ್ಚರಿ ಅಂದ್ರೆ ಬಿವಿ ನಾಯಕ್‌ ಕೂಡ ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದರು.

RELATED ARTICLES

Latest News