Friday, September 20, 2024
Homeರಾಜಕೀಯ | Politicsಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕತ್ತಿ ಮಸೆಯುತ್ತಿರುವ ಜಾರಕಿಹೊಳಿ-ಯತ್ನಾಳ್‌

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕತ್ತಿ ಮಸೆಯುತ್ತಿರುವ ಜಾರಕಿಹೊಳಿ-ಯತ್ನಾಳ್‌

ಬೆಂಗಳೂರು,ಜು.31- ಅಪ್ಪ-ಮಕ್ಕಳ ಬ್ಲಾಕ್‌ ಮೇಲ್‌ನಿಂದ ಪಕ್ಷವನ್ನು ಹೊರತರಬೇಕು, ಇದರ ಬಗ್ಗೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಸ್ವಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಈ ಹೇಳಿಕೆಯು ಬಿಜೆಪಿ ಪಾಳೆಯದಲ್ಲಿ ಮತ್ತೊಮೆ ಬಿರುಗಾಳಿ ಎಬ್ಬಿಸಿದೆ. ಇಷ್ಟು ದಿನ ಯಡಿಯೂರಪ್ಪ ಫ್ಯಾಮಿಲಿ ಜೊತೆ ಚೆನ್ನಾಗಿದ್ದ ರಮೇಶ್‌ ಜಾರಕಿಹೊಳಿ ಇದ್ದಕ್ಕಿದಂತೆ ಸಿಡಿದೆದ್ದಿದ್ದಾರೆ.

ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿರಬಹುದು. ಆದರೆ ನನಗಲ್ಲ, ನಾನು ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನೇರವಾಗಿ ಸಮರ ಸಾರಿದ್ದಾರೆ. ಇದರಿಂದ ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.

ಇತ್ತ ಬಸನಗೌಡ ಪಾಟೀಲ್‌ ಯತ್ನಾಳ್‌ ಮಾತು ಎತ್ತಿದರೆ ಸಾಕು ಯಡಿಯೂರಪ್ಪ ಕುಟುಂಬದ ವಿರುದ್ಧ ಮುಗಿಬೀಳುತ್ತಾರೆ. ಯತ್ನಾಳ್‌ ಮತ್ತು ರಮೇಶ್‌ ಜಾರಕಿಹೊಳಿ ಕೈ ಜೋಡಿಸಿ ವಿಜಯೇಂದ್ರ ವಿರುದ್ಧ ಯುದ್ಧ ಸಾರಿದ್ದಾರೆ. 2019ರಲ್ಲಿ ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ರಮೇಶ್‌ ಜಾರಕಿಹೊಳಿ ಪಾತ್ರ ಬಹಳ ದೊಡ್ಡದು. ಆ ಸಮಯದಲ್ಲಿ ಕಾಂಗ್ರೆಸ್‌‍ನ 17 ಶಾಸಕರನ್ನು ಬಿಜೆಪಿಗೆ ಕರೆತಂದಿದ್ದು ಇದೇ ರಮೇಶ್‌ ಜಾರಕಿಹೊಳಿ.

ಬಿಜೆಪಿಗೆ ಬರುವ ಎಲ್ಲರಿಗೂ ಸಚಿವ ಸ್ಥಾನ ಕೊಡುತ್ತೇನೆ. ಅದು ನನ್ನ ಜವಾಬ್ದಾರಿ ಎಂದು ಯಡಿಯೂರಪ್ಪ ಅವರು ರಮೇಶ್‌ ಜಾರಕಿಹೊಳಿಗೆ ಭರವಸೆ ಕೊಟ್ಟಿರುತ್ತಾರೆ. ಅದರಂತೆ ರಮೇಶ್‌ ಜಾರಕಿಹೊಳಿ ಜಲ ಸಂಪನೂಲ ಸಚಿವರೂ ಆಗುತ್ತಾರೆ. ಅಲ್ಲಿಂದ ಯಡಿಯೂರಪ್ಪ ಅಂದರೆ ರಮೇಶ್‌ ಜಾರಕಿಹೊಳಿ ಪಾಲಿಗೆ ದೇವರ ಸಮನಾಗುತ್ತಾರೆ. ಕೊಟ್ಟ ಮಾತು ತಪ್ಪದ ಯಡಿಯೂರಪ್ಪ ಬೆನ್ನಿಗೆ ನಿಂತುಕೊಳ್ಳುತ್ತಾರೆ.

2021ರ ಮಾರ್ಚ್‌ನಲ್ಲಿ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಾರೆ. ಆಗ ಸಿಎಂ ಆಗಿದ್ದ ಯಡಿಯೂರಪ್ಪ , ಜಾರಕಿಹೊಳಿ ವಿರುದ್ಧ ಆರೋಪ ಬರುತ್ತಿದ್ದಂತೆ ರಾಜೀನಾಮೆ ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಆರೋಪದಿಂದ ಮುಕ್ತನಾದರೆ ಮತ್ತೆ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ಕೊಡುತ್ತಾರೆ. ಅದಾದ ಮೇಲೆ ಅವರ ಮೇಲಿನ ಆರೋಪ ತಣ್ಣಗಾದರೂ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಜಾರಕಿಹೊಳಿ ಜಲಸಂಪನೂಲ ಸಚಿವರಾಗಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಅವರ ಅನುಪಸ್ಥಿತಿಯ ಬಗ್ಗೆ ಉಲ್ಲೇಖಿಸದೇ ಯಡಿಯೂರಪ್ಪ ಸಭೆ ನಡೆಸುತ್ತಾರೆ.

ವಿಶ್ವೇಶ್ವರಯ್ಯ ಜಲ ನಿಗಮದ ಕೋಟ್ಯಂತರ ರೂಪಾಯಿ ಕಾಮಗಾರಿ ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡುತ್ತಾರೆ. ಇದು ರಮೇಶ್‌ ಜಾರಕಿಹೊಳಿ ಮತ್ತಷ್ಟು ಕೆರಳಲು ನಾಂದಿ ಹಾಡಿತು.

ವಿಜಯೇಂದ್ರ ಮೇಲೆ ಕತ್ತಿ ಮಸೆಯುತ್ತಿರುವುದ್ಯಾಕೆ?
ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದಾಗ ಬಿಜೆಪಿಯಲ್ಲಿ ಆಂತರಿಕ ಕಲಹ ಹೆಚ್ಚಾಗಿತ್ತು. ಘಟಾನುಘಟಿ ನಾಯಕರಾದ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ್‌ ಸವದಿ ಆಗ ಬಿಜೆಪಿ ತೊರೆದಿದ್ದರು. ಬಿಜೆಪಿಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ ಎಂಬ ಸನ್ನಿವೇಶ ಎದುರಾಗಿತ್ತು.

ಅವರೆಲ್ಲರನ್ನೂ ಒಗ್ಗೂಡಿಸಿ,, ಪಕ್ಷವನ್ನು ಹದ್ದುಬಸ್ತಿಗೆ ತರುವ ಕೆಲಸ ರಾಜ್ಯಾಧ್ಯಕ್ಷರ ಮೇಲಿತ್ತು. ಆದರೆ, ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದು ಕೆಲವು ಬಿಜೆಪಿ ನಾಯಕರಿಗೆ ಸುತಾರಾಂ ಇಷ್ಟ ಇರಲಿಲ್ಲ. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸಾರಥ್ಯ ವಹಿಸಿದ್ದು ರಮೇಶ್‌ ಜಾರಕಿಹೊಳಿಗೂ ಇಷ್ಟ ಇರಲಿಲ್ಲ ಎಂಬ ವಿಷಯ ಈಗ ಬಹಿರಂಗವಾಗಿದೆ.

ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕ ಮೇಲೆ ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಆದರೆ, ನನ್ನನ್ನು ತೆಗೆದುಕೊಳ್ಳಲಿಲ್ಲ ಅನ್ನೋದು ರಮೇಶ್‌ ಜಾರಕಿಹೊಳಿ ವಾದ. ಯತ್ನಾಳ್‌ ಆರೋಪದಂತೆ ಡಿಕೆ ಶಿವಕುಮಾರ್‌ ಹಾಗೂ ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವ ಬಗ್ಗೆ ಜಾರಕಿಹೊಳಿಗೆ ಸಹಿಸಲು ಆಗುತ್ತಿಲ್ಲ. ಡಿಕೆ ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೊಳಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಹಾವು-ಮುಂಗೂಸಿಯಂಥ ದ್ವೇಷ ಇರುವಂತೆ ಕಾಣುತ್ತದೆ.

ರಮೇಶ್‌ ಜಾರಕಿಹೊಳಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ. ಕಾಂಗ್ರೆಸ್‌‍ನಲ್ಲಿ ರಮೇಶ್‌ ಜಾರಕಿಹೊಳಿ ಮಾತುಗಳು ನಡೆಯುತ್ತಿದ್ದವು. ಆದರೆ, ಬಿಜೆಪಿಗೆ ಬಂದ ಮೇಲೆ ಆರಂಭದಲ್ಲಿ ರಮೇಶ್‌ ಜಾರಕಿಹೊಳಿ ಹವಾ ಇತ್ತು. ಸಚಿವ ಸ್ಥಾನಕ್ಕೆ ಯಾವಾಗ ರಾಜೀನಾಮೆ ನೀಡಿದ್ರೋ ಅಲ್ಲಿಂದ ಪ್ರಭಾವ ಕಡಿಮೆಯಾಯ್ತು. ಪಕ್ಷವೂ ಅವರನ್ನು ಕಡೆಗಣಿಸುತ್ತಾ ಬಂತು. ಪಕ್ಷದಲ್ಲಿ ಏನೇ ನಿರ್ಣಯ ತೆಗೆದುಕೊಂಡರು ಕೂಡ ಇವರನ್ನು ಕೇಳುತ್ತಿರಲಿಲ್ಲ. ಇದು ಅವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಇಷ್ಟು ದಿನ ಎಲ್ಲವನ್ನೂ ತಡೆದುಕೊಂಡಿದ್ದ ಸಾಹುಕಾರ್‌ ಈಗ ಸಿಡಿದೆದ್ದಿದ್ದಾರೆ.

ಯತ್ನಾಳ್‌ ಹಾಗೂ ರಮೇಶ್‌ ಜಾರಕಿಹೊಳಿ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ. ಇಬ್ಬರದ್ದೂ ಒಂದೇ ಟಾರ್ಗೆಟ್‌ ಅದು ವಿಜಯೇಂದ್ರ. ಇತ್ತ ವಿಜಯೇಂದ್ರ ಮುಡಾ ಹಗರಣ ವಿರೋಧಿಸಿ ಪಾದಯಾತ್ರೆ ಮಾಡಲು ನಿರ್ಧಾರ ಮಾಡಿಕೊಂಡರೆ, ಇತ್ತ ರಮೇಶ್‌ ಜಾರಕಿಹೊಳಿ ಮತ್ತು ಯತ್ನಾಳ್‌ ವಾಲೀಕಿ ನಿಗಮ ಹಗರಣ ಖಂಡಿಸಿ ಪಾದಯಾತ್ರೆ ಮಾಡಲು ರೆಡಿಯಾಗಿದ್ದಾರೆ.

ಇದು ಕಾಂಗ್ರೆಸ್‌‍ ವಿರುದ್ಧದ ಹೋರಾಟ ಅನ್ನೋದಕ್ಕಿಂತ ವಿಜಯೇಂದ್ರ ಹಾಗೂ ಯತ್ನಾಳ್‌-ಜಾರಕಿಹೊಳಿ ನಡುವಿನ ಹೋರಾಟ ಅಂತ ಬಿಂಬಿತವಾಗುತ್ತಿದೆ. ಇಲ್ಲಿ ಇನ್ನೊಂದು ವಿಷಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುವುದು ಬಿಜೆಪಿಯಲ್ಲಿನ ಒಂದು ಬಣ ಸಿದ್ದರಾಮಯ್ಯರನ್ನು ವಿರೋಧಿಸುತ್ತಿದೆ. ಇನ್ನೊಂದು ಬಣ ಸಿದ್ದರಾಮಯ್ಯ ಪರವಾಗಿರುವಂತೆ ವರ್ತಿಸುತ್ತಿದೆ.

ರಮೇಶ್‌ ಜಾರಕಿಹೊಳಿ ಮತ್ತು ಯತ್ನಾಳ್‌ ಒಂದಾಗಿ ಭಿನ್ನ ಹಾದಿ ತುಳಿದಿದ್ದು ಬಿಜೆಪಿ ಹೈಕಮಾಂಡ್‌ನಲ್ಲಿ ಒತ್ತಡ ಉಂಟು ಮಾಡಿದೆ. ಬಿಜೆಪಿಯಲ್ಲಿ ಇದೇ ಬಣ ರಾಜಕೀಯ ಮುಂದುವರಿದರೆ, ಪಕ್ಷಕ್ಕೆ ಡ್ಯಾಮೇಜ್‌ ಆಗುವ ಜೊತೆಗೆ ಮುಂದೆ ನಡೆಯುವ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಹೈಕಮಾಂಡ್‌ ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ಪಕ್ಷದ ಆಂತರಿಕ ಕಲಹವನ್ನು ನಿವಾರಿಸುವ ಅನಿವಾರ್ಯತೆ ಇದೆ.

RELATED ARTICLES

Latest News