ಬೆಂಗಳೂರು,ಜೂ.14- ಕ್ಯಾನ್ಸರ್ನಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ಚಿಕಿತ್ಸೆಯ ಜೊತೆಗೆ ಓದಿಗೂ ಅವಕಾಶವಾಗುವಂತೆ ನಗರದ ಕಿದ್ವಾಯಿ ಆಸ್ಪತ್ರೆಯ ಬಳಿ ವಸತಿ ಸಹಿತ ಶಾಲೆ ಆರಂಭಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 3,500 ಮಕ್ಕಳು ಕ್ಯಾನ್ಸರ್ನಿಂದ ಬಾಧಿತರಾಗಿದ್ದು, ಅವರಿಗೆ ಕಲಿಕೆಯ ಅವಕಾಶ ವಂಚಿತ ರಾಗದಂತೆ ಈ ಕ್ರಮ ಕೈಗೊಳ್ಳ ಲಾಗಿದೆ ಎಂದರು.
ಕ್ಯಾನ್ಸರ್ ಗುಣಮುಖವಾಗುವ ಆರೋಗ್ಯ ಸಮಸ್ಯೆ. ರೋಗ ಬಂದಾಕ್ಷಣ ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ತಾವು ಸಚಿವರಾದ ಮೇಲೆ ಕ್ವಾಲಿಟಿ, ಇಕ್ವಾಲಿಟಿ, ಆಕ್ಸಿಸಬಲಿಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕ್ಯಾನ್ಸರ್ ಕಾರಣಕ್ಕಾಗಿ ಅವರಿಗೆ ಶಿಕ್ಷಣ ಕೈಗೆಟಕುದಂತಿರಬಾರದು ಎಂದು ಹೇಳಿದರು.
ಕಿದ್ವಾಯಿ ಬಳಿ ಜಾಗ ಹುಡುಕಲು ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನಮ ಇಲಾಖೆಯ 3 ಎಕರೆಯಷ್ಟು ಜಾಗ ಸಿಕ್ಕರೆ ಇದೇ ವರ್ಷದ ಜುಲೈನಿಂದಲೇ ಶಾಲೆ ಆರಂಭಿಸುವ ಉಮೇದಿನಲ್ಲಿ ನಾವಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಗತ್ಯವಿರುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮಕ್ಕಳಿಗೆ ಓದಲು ಅನುಕೂಲವಾಗುವಂತೆ ಶಾಲೆ, ಅದರ ಪಕ್ಕದಲ್ಲೇ ಹಾಸ್ಟೆಲ್, 5 ರಿಂದ 6 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಪೋಷಕರಿರಬೇಕಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಕಟ್ಟಡ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಈ ಶಾಲೆಯಲ್ಲಿ ಒದಗಿಸಲಾಗುವುದು. ಜೊತೆಗೆ ಆಸ್ಪತ್ರೆಗೆ ಮತ್ತು ಶಾಲೆಗೆ ಮಿನಿಬಸ್ನಂತಹ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದರು.
ಕ್ಯಾನ್ಸರ್ನಿಂದ ಬಾಧಿತರಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸಂತ್ರಸ್ತರಿಂದಲೇ ಈ ಯೋಜನೆಯ ವರದಿಯನ್ನು ತಯಾರಿಸಲಾಗಿದೆ. ಎಲ್ಲಾ ರೀತಿಯ ಸಕಲ ಸೌಲಭ್ಯಗಳೊಂದಿಗೆ ಶಾಲೆಯನ್ನು ಆರಂಭಿಸಲಾಗುವುದು. ಮೊದಲಿಗೆ ಸ್ವಂತ ಕಟ್ಟಡ ಸಿಗದೇ ಇದ್ದರೆ ಅಥವಾ ಕಟ್ಟಡ ನಿರ್ಮಿಸಲು ಸಾಧ್ಯವಾಗದೇ ಇದ್ದರೆ ಬಾಡಿಗೆ ಕಟ್ಟಡದಲ್ಲೇ ಶಾಲೆ ಆರಂಭಿಸಲಾಗುವುದು. ಆರಂಭದಲ್ಲಿ 10ನೇ ತರಗತಿಯವರೆಗೂ ಶಾಲೆ ನಡೆಸಲಾಗುತ್ತದೆ. ಅಗತ್ಯ ಬಿದ್ದರೆ ಅದನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.
ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಬಹಳ ಮುಖ್ಯವಾಗಿದೆ. ಹೀಗಾಗಿ ಕಿದ್ವಾಯಿ ಆಸ್ಪತ್ರೆಯ ಬಳಿಯೇ ಶಾಲೆ ಆರಂಭಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಬೇರೆಬೇರೆ ಕಡೆಗಳಲ್ಲಿಯೂ ಈ ರೀತಿಯ ಶಾಲೆ ಆರಂಭಿಸುವ ಚಿಂತನೆ ಇದೆ. ಮೊದಲ ಹಂತದಲ್ಲಿ ಒಂದೂವರೆ ಸಾವಿರ ಮಕ್ಕಳಿಗೆ ವಸತಿಸಹಿತ ಶಾಲೆ ಆರಂಭಿಸಲಾಗುವುದು. ಇದಕ್ಕಾಗಿ ಸಿಎಸ್ಆರ್ ನಿಧಿಯನ್ನು ಬಳಸಲಾಗುತ್ತದೆ ಎಂದರು.
ಡಾ.ರಾಜ್ಕುಮಾರ್ ಅವರ ಸಹೋದರ ವರದರಾಜು ಅವರ ಮೊಮಕ್ಕಳಿಗೂ ಈ ರೀತಿಯ ಆರೋಗ್ಯ ಸಮಸ್ಯೆಗೆ ನಾವೇ ಚಿಕಿತ್ಸೆ ಕೊಡಿಸಿದ್ದೇವೆ. ಅದರ ಕಷ್ಟನಷ್ಟಗಳ ಅರಿವಿದೆ. ನೂತನ ಶಾಲೆಯ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು. ಸಾಮಾನ್ಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳೊಂದಿಗೆ ಆತೀಯವಾಗಿ ಬೆರೆಯಲು ಬೋಧಕ, ಬೋಧಕೇತರ ಸಿಬ್ಬಂದಿಗಳನ್ನು ಸಜ್ಜುಗೊಳಿಸುವುದಾಗಿ ಹೇಳಿದರು.
ತಾವು ಶಿಕ್ಷಣ ಸಚಿವರಾದ ಬಳಿಕ ಏನಾದರೂ ಹೊಸದಾಗಿ ಮಾಡಬೇಕು ಎಂಬ ಆಲೋಚನೆ ಬಂದಿತ್ತು. ಈ ಕಾರಣಕ್ಕೆ ಕ್ಯಾನ್ಸರ್ ಬಾಧಿತ ಮಕ್ಕಳ ವಸತಿಶಾಲೆ ರೂಪಿಸಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಮಾತ್ರ ಬೋಧನೆ ಮಾಡುತ್ತಿರುವುದಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗುತ್ತಿದೆ. ಇದನ್ನು ಸರಿಪಡಿಸಲು ದ್ವಿಭಾಷಾ ಮಾಧ್ಯಮ ಜಾರಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು ತಮಗೆ ಅನುಕೂಲವಾದಂತಹ ಮಾಧ್ಯಮವನ್ನು
ಆಯ್ಕೆ ಮಾಡಿಕೊಳ್ಳಬಹುದು. ಈ ಕ್ರಮದಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿದ್ದು, ಅಂತಹ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹತ್ತಿರದ ಶಾಲೆಗೆ ವಿನಿಯೋಜನೆಗೊಳಿಸುವುದಾಗಿ ತಿಳಿಸಿದರು.
ಡಯಟ್ಗೆ ವರ್ಗಾವಣೆ ಮಾಡಿಸಿಕೊಂಡು ಕಾಲಾಹರಣಕ್ಕೆ ಬರುವ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಆಯಾ ವ್ಯಾಪ್ತಿಯ ಕಳಪೆ ಶಾಲೆಗಳ ಉಸ್ತುವಾರಿಯನ್ನು ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಆ ಶಾಲೆಯ ಫಲಿತಾಂಶ ಉತ್ತಮಗೊಳ್ಳಬೇಕು. ಇಲ್ಲದೇ ಇದ್ದರೆ ಡಯಟ್ಗೆ ವರ್ಗಾವಣೆ ತೆಗೆದುಕೊಂಡ ಶಿಕ್ಷಕರನ್ನು ವಾಪಸ್ ಬೋಧನಾ ಕಾರ್ಯನಿರ್ವಹಣೆಗೆ ನಿಯೋಜಿಸಲಾಗುತ್ತದೆ ಎಂದರು.
ಅಜೀಂ ಪ್ರೇಮ್ಜಿ ಪ್ರತಿಷ್ಠಾನದಿಂದ 50 ಸಾವಿರ ಶಿಕ್ಷಕರುಗಳಿಗೆ ತರಬೇತಿ ಕೊಡಿಸಲು ಮನವಿ ನೀಡಲಾಗಿದೆ. ಉತ್ತಮ ಶಿಕ್ಷಕರಿಂದ ಬೋಧನೆ ಮಾಡಿಸಲು ಶಿಕ್ಷಣ ಇಲಾಖೆಯ ಯೂ-ಟ್ಯೂಬ್ ಚಾನೆಲ್ ಆರಂಭಿಸಲಾಗುತ್ತಿದೆ. ರಾಜ್ಯದ ಏಳೆಂಟು ಕಡೆ ಸ್ವಂತ ಸ್ಟುಡಿಯೋಗಳನ್ನು ಶುರು ಮಾಡುತ್ತೇವೆ ಎಂದು ಹೇಳಿದರು.