Tuesday, May 14, 2024
Homeರಾಜ್ಯಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರವನ್ನು ನಿರ್ಮಲಾ ಸೀತರಾಮನ್‌ ಅವರೇ ಪ್ರಸ್ತಾಪಿಸಿದ್ದರು : ಸಿಎಂ ಸಿದ್ದರಾಮಯ್ಯ

ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರವನ್ನು ನಿರ್ಮಲಾ ಸೀತರಾಮನ್‌ ಅವರೇ ಪ್ರಸ್ತಾಪಿಸಿದ್ದರು : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಏ.28– ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರವನ್ನು ಕಾಂಗ್ರೆಸ್‌‍ ನಾಯಕ ಸ್ಯಾಂ ಪಿತ್ರೋಡಾಗಿಂತಲೂ ಮೊದಲೇ 2019ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಪ್ರಸ್ತಾಪಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಧಾನಿಯವರು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು ಶಿಕ್ಷಾರ್ಹ ಅಪರಾಧವಾಗಿದ್ದರೂ ಯಾರು ಕ್ರಮ ಕೈಗೊಳ್ಳುವ ಪರಿಸ್ಥಿತಿ ದೇಶದಲ್ಲಿ ಇಲ್ಲ ಎಂದು ವಿಷಾದಿಸಿದ್ದಾರೆ.

ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತಿನ ಸಮೀಕ್ಷೆ ನಡೆಸಿ ಹಿಂದೂಗಳ ಸಂಪತ್ತನ್ನು ಏಳೇಳು ಮಕ್ಕಳು ಹುಟ್ಟಿಸುವ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಎಂಬ ಅಪ್ಪಟ ಸುಳ್ಳನ್ನು ನಿರ್ಲಜ್ಜವಾಗಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಿರಲ್ಲಾ? ಇದಕ್ಕೆ ನಿಮಲ್ಲಿ ಆಧಾರ ಏನಿದೆ ? ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌‍ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯ ಯಾವ ಪುಟದಲ್ಲಿ ಈ ಭರವಸೆ ಇದೆ. ಯಾವ ಹಿರಿಯ ನಾಯಕರು ಇದನ್ನು ಹೇಳಿದ್ದಾರೆ ? ದಯವಿಟ್ಟು ತಿಳಿಸಿ ಇಲ್ಲವಾದರೆ ಸುಳ್ಳು ಆರೋಪಕ್ಕಾಗಿ ಕನಿಷ್ಠ ವಿಷಾದವನ್ನಾದರೂ ಸೂಚಿಸಿ ಎಂದು ಆಗ್ರಹಿಸಿದ್ದಾರೆ.

ಪಿತ್ರಾರ್ಜಿತ ಆಸ್ತಿ ತೆರಿಗೆ ಹೇರುವ ಬಗ್ಗೆ ಕಾಂಗ್ರೆಸ್‌‍ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಪಕ್ಷದ ವೇದಿಕೆಯಲ್ಲಿಯೂ ಚರ್ಚೆಯಾಗಿಲ್ಲ. ಆ ಚರ್ಚೆಯನ್ನು ಪಕ್ಷ ನಡೆಸಿದ್ದರೆ ಅದಕ್ಕೆ ಆಧಾರ ಕೊಡಿ. ಸ್ಯಾಮ್‌ ಪಿತ್ರೋಡಾ ಅವರು ಇದನ್ನು ಪ್ರಸ್ತಾಪಿಸಿ ಈ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿರುವುದು ನಿಜ, ಅದು ಅವರ ವೈಯಕ್ತಿಕ ಅಭಿಪ್ರಾಯ.

ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರದ ಚರ್ಚೆ ಶುರುಮಾಡಿರುವುದೇ ನಿಮ್ಮ ಸಹದ್ಯೋಗಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌. 2019ರ ಬಜೆಟ್‌ ನಲ್ಲಿ ಇದನ್ನು ಸೇರಿಸುವ ಬಗ್ಗೆ ಚರ್ಚೆ ನಡೆದಿರುವುದಕ್ಕೆ ಆ ಕಾಲದ ಪತ್ರಿಕೆಗಳ ವರದಿಗಳೇ ಸಾಕ್ಷಿ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ ? ಈಗ ನಿರ್ಮಲಾ ಸೀತಾರಾಮನ್‌ ಅವರನ್ನೂ ದೇಶದ್ರೋಹಿ ಪಟ್ಟಿಗೆ ಸೇರಿಸುವಿರಾ ಎಂದು ಸವಾಲು ಹಾಕಿದ್ದಾರೆ.

ಸಂಪತ್ತಿನ ಸಮಾನ ಹಂಚಿಕೆ ಎನ್ನವುದು ಒಂದು ಉದಾತ್ತ ಚಿಂತನೆಯಾಗಿದೆ. ಇದು ನಮ್ಮ ಸಂವಿಧಾನದ ಆಶಯವೂ ಆಗಿದೆ. ನಮ್ಮ ದೇಶದಲ್ಲಿ 1953ರಲ್ಲಿಯೇ ಎಸ್ಟೇಟ್‌ ತೆರಿಗೆ ಹೇರಲಾಗಿತ್ತು. ಅದನ್ನು ರದ್ದು ಮಾಡಿದವರು ದಿವಂಗತ ಪ್ರಧಾನಿ ರಾಜೀವ್‌ ಗಾಂಧಿಯವರು. 1998ರ ವರೆಗೆ ಚಾಲ್ತಿಯಲ್ಲಿದ್ದ ಗಿಫ್‌್ಟ ತೆರಿಗೆಯನ್ನು ರದ್ದು ಮಾಡಿದವರು ಆಗಿನ ಪ್ರಧಾನಿ ಹೆಚ್‌.ಡಿ.ದೇವೇಗೌಡರು. ಮೋದಿಯವರೇ ನಿಮ್ಮದೇ ಸರ್ಕಾರ 2015ರಲ್ಲಿ ಸಂಪತ್ತಿನ ಮೇಲಿನ ತೆರಿಗೆಯನ್ನೂ ರದ್ದು ಮಾಡಿದೆ. ಇದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿಯವರದು ಸೂಟುಬೂಟು ಸರ್ಕಾರ, ಶ್ರೀಮಂತರ ಪರ ಮತ್ತು ಬಡವರ ವಿರೋಧಿ ಸರ್ಕಾರ ಎನ್ನುವ ನಮ್ಮ ಆರೋಪ ಆಧಾರರಹಿತವಲ್ಲ. 2019ರಲ್ಲಿ ನಿಮ್ಮದೇ ಸರ್ಕಾರ ಶೇ.30ರಷ್ಟಿದ್ದ ಕಾರ್ಪೋರೇಟ್‌ ತೆರಿಗೆಯನ್ನು ಶೇಕಡಾ 22ಕ್ಕೆ ಇಳಿಸಿದೆ. ಈ ಮೂರ್ಖತನದ ನಿರ್ಧಾರದಿಂದಾಗಿ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ಕಳೆದುಕೊಂಡ ಆದಾಯ 1.81 ಲಕ್ಷ ಕೋಟಿ ರೂಪಾಯಿ. ದೇಶದ ಬಡವರ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾಗಿದ್ದ ಈ ಹಣ ಕಾರ್ಪೋರೇಟ್‌ ದೊರೆಗಳ ಜೇಬಿಗೆ ಸೇರಿದೆ. ಅವರ ಲಾಭದಲ್ಲಿ ಯಾರ ಪಾಲು ಎಷ್ಟು? ಪ್ರಧಾನಿ ಮೋದಿಯವರೇ, ಇದೇನಾ ನಿಮ್ಮ ಕಲ್ಪನೆಯ ಸಮಾನ ಆಸ್ತಿ ಹಂಚಿಕೆ ಎಂದು ಕಿಡಿಕಾರಿದ್ದಾರೆ.

ಸಂಪತ್ತಿನ ಸಮಾನ ಹಂಚಿಕೆಯ ನಮ್ಮ ಆಶಯವನ್ನೇ ತಿರುಚಿ ಅದಕ್ಕೆ ಕೋಮುವಾದಿ ಬಣ್ಣ ಬಳಿಯಲು ಮುಂದಾಗಿರುವ ಜಾಣ ಪ್ರಧಾನಿಯವರು, ಕೆಲವೇ ಕೆಲವು ಕುಟುಂಬಗಳ ಕೈಯಲ್ಲಿರುವ ದೇಶದ ಸಂಪತ್ತನ್ನು ಸಮಾನವಾಗಿ ಹಂಚುವುದಾಗಿ ರಾಹುಲ್‌ ಗಾಂಧಿಯವರು ಹೇಳಿದ ಕೂಡಲೇ ನಿಮ್ಮ ಹೊಟ್ಟೆ ಉರಿಯುತ್ತಿರುವುದು ಯಾಕೆ? ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನು ಪಾವತಿ ಮಾಡದೆ ನಿಮ್ಮ ಉದ್ಯಮ ಮಿತ್ರರು ವಿದೇಶಕ್ಕೆ ಪರಾರಿಯಾದಾಗ ನಿಮಗೆ ಹೊಟ್ಟೆ ಉರಿಯಲಿಲ್ಲವೇ ಎಂದು ಲೇವಡಿ ಮಾಡಿದ್ದಾರೆ.

ದೇಶದ ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆ ಬೇಡಿಕೆಯನ್ನು ತಳ್ಳಿ ಹಾಕುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರೇ ಉದ್ಯಮಿಗಳಿಗೆ ಸೇರಿರುವ 16 ಲಕ್ಷ ಕೋಟಿ ರೂಪಾಯಿಯನ್ನು ಒಂದೇ ಏಟಿಗೆ ಮನ್ನಾ ಮಾಡಿದಾಗ ದೇಶದ ಆಸ್ತಿಯನ್ನು ಸಮಾನ ಹಂಚಿಕೆಮಾಡಬೇಕೆಂದು ನಿಮಗೆ ಅನಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಪ್ರಧಾನಿಗಳಾದ ಜವಾಹರಲಾಲ್‌ ನೆಹರೂ 33, ಲಾಲ್‌ ಬಹದ್ದೂರ್‌ ಶಾಸ್ತ್ರಿ 5, ಇಂದಿರಾ ಗಾಂಧಿಯವರು 66, ರಾಜೀವ್‌ ಗಾಂಧಿಯವರು 16, ವಿ.ಪಿ.ಸಿಂಗ್‌ ಅವರು 2, ಐ.ಕೆ.ಗುಜ್ರಾಲ್‌ ಅವರು 3, ವಾಜಪೇಯಿ ಅವರು 17 ಮತ್ತು ಮನಮೋಹನ್‌ ಸಿಂಗ್‌ ಅವರು 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ನೀವು ಒಂದೇ ಒಂದು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಿಲ್ಲ. ಮೋದಿಯವರ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ 23 ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ.

ಹತ್ತು ವರ್ಷಗಳಲ್ಲಿ ಪ್ರಧಾನಿಯವರು ಆಸ್ತಿಮಾಡಿಕೊಟ್ಟಿದ್ದು ಅದಾನಿ-ಅಂಬಾನಿಗಳಿಗೆ ಮಾತ್ರ. ಮಾನ ನಿಲ್ದಾಣಗಳು,ಬಂದರುಗಳು, ಕಲ್ಲಿದ್ದಲು ಗಣಿಗಳು, ಅನಿಲ-ತೈಲ ನಿಕ್ಷೇಪಗಳು, ಹೆದ್ದಾರಿ ಟೋಲುಗಳು, ವಿದ್ಯುತ್‌ ನಿಗಮಗಳು ಒಂದೇ ಎರಡೇ ಎಲ್ಲವನ್ನೂ ಅದಾನಿ-ಅಂಬಾನಿ ಮಡಿಲು ಸೇರಿಸಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

RELATED ARTICLES

Latest News