ಬಳ್ಳಾರಿ, ಜ.25- ರೀಲ್ಸ್ ಮಾಡೋದು, ಫೋಟೋ ಶೂಟ್ ಮಾಡೋರು ಮನೆ ಬಾಗಿಲು ಮುರಿದು ಪೆಟ್ರೋಲ್, ಡೀಸೆಲ್ ಹಾಕಿ ಬೆಂಕಿ ಹಚ್ಚಿ ರೀಲ್ಸ್ ಮಾಡುತ್ತಾರೆಯೇ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ.
ಕಂಟೋನೆಂಟ್ ಪ್ರದೇಶದ ಜಿ ಸ್ಕೈರ್ ಲೇಔಟ್ನಲ್ಲಿನ ಮಾದರಿ ಗ್ಲಾಸ್ ಹೌಸ್ನಲ್ಲಿ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐದು ತಿಂಗಳ ಹಿಂದೆ ಈ ಪ್ರದೇಶದಲ್ಲಿನ ಮುಖ್ಯದ್ವಾರದ ಗೇಟ್ ಮುರಿದು ಒಳ ಹೊಕ್ಕು ಕಳುವು ಮಾಡಿದ್ದರು. ಆಗ ಪೊಲೀಸರಿಗೆ ದೂರು ನೀಡಲಾಗಿತ್ತು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡಿ, ಅವರ ಮೇಲೆ ಎಫ್ಐಆರ್ ದಾಖಲಿಸಬೇಡಿ ಎಂದು ಶಾಸಕ ನಾ.ರಾ. ಭರತ್ ರೆಡ್ಡಿ ಅವರೇ ಪೊಲೀಸರಿಗೆ ಒತ್ತಡ ಹಾಕಿದ್ದರು, ಕಳೆದ ನಾಲ್ಕೈದು ತಿಂಗಳ ಹಿಂದಿನಿಂದಲೂ ನಮ ಆಸ್ತಿ ಮೇಲೆ ನಾ.ರಾ. ಭರತ್ ರೆಡ್ಡಿ ಕಣ್ಣು ಬಿದ್ದಿದೆ. ನಮ ಆಸ್ತಿ ಹಾನಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆಂದು ಆರೋಪಿಸಿದರು.
ಇತ್ತೀಚೆಗೆ ನಡೆದ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರ ಕೊಲೆ ನಡೆಯಿತು. ನಮ ಮನೆ ಮೇಲೆ ಗುಂಡು ಹಾರಿಸಿದರು. ಇದಕ್ಕೆ ಮುಖ್ಯ ಕಾರಣರಾದ ಸತೀಶ್ ರೆಡ್ಡಿ ಮತ್ತು ನಾ.ರಾ. ಭರತ್ ರೆಡ್ಡಿ ಅವರನ್ನು ಪೊಲೀಸರು ಈವರೆಗೂ ಬಂಧಿಸಿಲ್ಲ ಎಂದು ಕಿಡಿಕಾರಿದರು.
ಮಾಜಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಮತ್ತಿತರರಿದ್ದರು.
