ಬೆಳಗಾವಿ,ಡಿ.15- ದಾವಣಗೆರೆ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದೇಶದಲ್ಲೇ ಏಕೈಕ ಹಿರಿಯ ಶಾಸಕ, ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಅನುಭವಿ ಹಾಗೂ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು ಅನ್ನೋದು ಹೆಮ್ಮೆಯ ಸಂಗತಿ.ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಶಾಮನೂರು ಶಿವಶಂಕರಪ್ಪನವರು ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಹಿರಿಯ ಮುತ್ಸದ್ದಿ.
ಶಾಮನೂರು ಶಿವಶಂಕರಪ್ಪ ರಾಜಕೀಯಕ್ಕೆ ಧುಮುಕಿದ್ದೇ ತಮ್ಮ 60ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಕಾಂಗ್ರೆಸ್ನಲ್ಲಿ ದಶಕಗಳ ಕಾಲ ರಾಜಕಾರಣ ಮಾಡಿರುವ ಶಾಮನೂರು, ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯದಲ್ಲೇ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದು ಅವರ ವರ್ಚಸ್ಸಿಗೆ ಸಾಕ್ಷಿ.
ಆರಂಭದಲ್ಲಿ ಕಾರ್ಮಿಕ ಮುಖಂಡ ಪಂಪಾಪತಿ ಅವರು ಇಲ್ಲಿ ಮೂರು ಸಲ ಕಮ್ಯೂನಿಸ್ಟ್ ಪಕ್ಷದಿಂದ ಶಾಸಕರಾಗಿದ್ದರು. ನಂತರ ದಾವಣಗೆರೆ ದಣಿ ಎಂದೇ ಹೆಸರಾಗಿರುವ ಶಾಮನೂರು ಅವರ ರಾಜಕೀಯ ಕ್ಷೇತ್ರವಾಗಿ ಮುಂದುವರಿಯಿತು. 95ನೇ ವಸಂತಕ್ಕೆ ಕಾಲಿಟ್ಟ ಶಾಮನೂರು ಶಿವಶಂಕರಪ್ಪನವರು, ರಾಜಕೀಯಕ್ಕೆ ಪ್ರವೇಶಿಸಿ ಬರೋಬ್ಬರಿ 35 ವರ್ಷ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದು ಅವರು ವಾನಪ್ರಸ್ಥ ಅವಧಿಯಲ್ಲಿ. ಇದು ಇತಿಹಾಸವಾದರೂ ಇಂದಿಗೂ ಅವರ ರಾಜಕೀಯ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ದಾವಣಗೆರೆ ಜಿಲ್ಲೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು.
ಆರು ಬಾರಿ ಶಾಸಕರಾಗಿ ಆಯ್ಕೆ:
ಈ ಹಿಂದೆ ದಾವಣಗೆರೆ ಕ್ಷೇತ್ರದಲ್ಲಿ ವೀರಶೈವ ಪಂಚಮಸಾಲಿ ಸಮಾಜದ ಹಾಗೂ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸಂಬಂಧಿಯೂ ಆಗಿದ್ದ ಯಜಮಾನ್ ಮೋತಿ ವೀರಣ್ಣ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ ಈ ಕ್ಷೇತ್ರ ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಾಗಿದ್ದು ಚರಿತ್ರೆ. 1994, 2004, 2008, 2013 ಹಾಗೂ 2018, 2023 ಹೀಗೆ. ಆರು ಸಲ ಕಾಂಗ್ರೆಸ್? ಪಕ್ಷದಿಂದ ಶಾಸಕರಾಗಿ ಹೊರಹೊಮಿದ್ದಾರೆ. ಅಲ್ಲದೇ 1997ರಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ :
ಈ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು, ಅಚ್ಚರಿಯಂತೆ 1997ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ 1999ರಲ್ಲಿ ಮತ್ತೆ ಲೋಕಸಭಾ ಚುನಾನಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು ಮತದಿಂದ ಸೋಲು ಕಂಡ ಸಂದರ್ಭ ಇದಾಗಿತ್ತು.
ಶಾಮನೂರು ರಾಜಕೀಯ ಜೀವನ :
ಶಾಮನೂರು ಶಿವಶಂಕರಪ್ಪ 1994ಕ್ಕೆ ರಾಜಕೀಯ ಪದಾರ್ಪಣೆ ಮಾಡಿದರು. ತಮ 64ನೇ ವಯಸ್ಸಿನಲ್ಲಿ ಮೊದಲ ಬಾರಿಗೆ 1994ರಲ್ಲಿ ದಾವಣಗೆರೆ ನಗರಸಭೆ ಅಧ್ಯಕ್ಷರಾದರು. ಬಳಿಕ ಅದೇ ವರ್ಷ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು.
ನಂತರ 2004ರಲ್ಲಿ ಮತ್ತೇ ಅದೇ ಕ್ಷೇತ್ರದಿಂದ ಆಯ್ಕೆಯಾದ ಬಳಿಕ 2008ರಲ್ಲಿ ಕ್ಷೇತ್ರ ವಿಂಗಡಣೆಯಾದಾಗ 2008, 2013 ಹಾಗೂ 2018, 2023 ದಾವಣಗೆರೆ ದಕ್ಷಿಣ ಮತಕ್ಷೇತ್ರದಿಂದ ಶಾಸಕರಾಗಿ ಒಟ್ಟು ಆರು ಬಾರಿ ಆಯ್ಕೆಯಾಗಿದ್ದಾರೆ. ಇನ್ನು 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ತೋಟಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದರು.
2008ರಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿ ವಿಂಗಡಿಸಲಾಯಿತು. 2008ರಿಂದ ಸತತ ಮೂರು ಬಾರಿ ಇಲ್ಲಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿಯೂ ಸಹ ಗೆಲುವು ಸಾಧಿಸಿದ್ದಾರೆ. ಬಿಜೆಪಿ ತಮ ಅಭ್ಯರ್ಥಿಯನ್ನು ಗೆಲ್ಲಿಸಲು ಇಲ್ಲಿ ಸಾಕಷ್ಟು ಪ್ರಯತ್ನ ಮಾಡಿದರೂ ಅದು ಈವರೆಗೂ ಸಾಧ್ಯವಾಗಿಲ್ಲ.
ಇದರಿಂದ 2023 ಚುನಾವಣೆಯಲ್ಲಿ ಬಿಜೆಪಿ ಕೂಡ ಪಂಚಮಸಾಲಿ ಸಮಾಜದವರಾದ ಬಿಜಿ ಅಜಯ್ ಕುಮಾರ್ ಅವರನ್ನು ಕಣಕ್ಕಿಳಿಸಿ ಲಿಂಗಾಯತ ಅಸ್ತ್ರ ಪ್ರಯೋಗ ಮಾಡಿತ್ತು. ಆದರೆ, ಬಿಜೆಪಿ ಹಲವು ಪ್ರಯೋಗಗಳ ಹೊರತು ಈ ಕ್ಷೇತ್ರದಲ್ಲಿ ಮತ್ತೆ ಸೋಲು ಅನುಭವಿಸಬೇಕಾಯಿತು.
