Friday, September 20, 2024
Homeರಾಜಕೀಯ | Politicsಸಿಎಂ ರಾಜೀನಾಮೆ ದಿನ ಬಂದೇ ಬರುತ್ತೆ : ವಿಜಯೇಂದ್ರ ಭವಿಷ್ಯ

ಸಿಎಂ ರಾಜೀನಾಮೆ ದಿನ ಬಂದೇ ಬರುತ್ತೆ : ವಿಜಯೇಂದ್ರ ಭವಿಷ್ಯ

The day of CM's resignation will come: Vijayendra's future

ಬೆಂಗಳೂರು,ಸೆ.4- ಮುಡಾ ಪ್ರಕರಣದಲ್ಲಿ ಹಿಂದಿನ ಆಯುಕ್ತ ದಿನೇಶ್ಕುಮಾರ್ ಅಮಾನತಾಗಿರುವುದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಆಯುಕ್ತರನ್ನು ಯಾವ ಕಾರಣಕ್ಕಾಗಿ ಅಮಾನತು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಒಬ್ಬ ಆಯುಕ್ತರೇ ಅಮಾನತುಗೊಂಡಿರುವುದರಿಂದ ಅಲ್ಲಿಗೆ ಹಗರಣ ನಡೆದಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲವೆಂದು ಸಿದ್ದರಾಮಯ್ಯನವರು ಹೇಳುತ್ತಿದ್ದರು.

ದಿನೇಶ್ಕುಮಾರ ಯಾವ ಕಾರಣಕ್ಕಾಗಿ ಅಮಾನತುಪಡಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಬರುವ ದಿನಗಳಲ್ಲಿ ಸಿಎಂ ರಾಜೀನಾಮೆ ನೀಡುವುದು ಶತ ಸಿದ್ಧ, ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದರು.

ಮೇಲನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ನಾಯಕರು ದೂರು ನೀಡಿರುವ ವಿಚಾರ ಕುರಿತು ಸಿಡಿಮಿಡಿಗೊಂಡ ವಿಜಯೇಂದ್ರ, ನಾನು ಸಚಿವ ಪ್ರಿಯಾಂಕ ಖರ್ಗೆಯವರಿಗೆ ಒಂದು ಪ್ರಶ್ನೆ ಕೇಳುತ್ತೇನೆ.

ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ದೂರು ಕೊಡಲು ಹೋದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಉಳಿದ ಸಚಿವರು ಏಕೆ ಇರಲಿಲ್ಲ?, ರಾಜಭವನದಲ್ಲಿ ಯಾರಾದರೂ ಹಿರಿಯ ನಾಯಕರು ಇದ್ದಾರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ನವರು ಬಿಜೆಪಿ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಬಿಜೆಪಿ ಮನೆಯೊಂದು, ಮೂರು ಬಾಗಿಲು ಎನ್ನುವವರು ಮುಡಾ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಬಂದ ಮೇಲೆ ಎಷ್ಟು ಬಾಗಿಲುಗಳು ಇರುತ್ತವೆ ಎಂದು ಕಾದು ನೋಡಿ ಎಂದು ತಿರುಗೇಟು ನೀಡಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಮ ಪಕ್ಷದ ಮುಖಂಡರು ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಯೋಗೀಶ್ವರ್ ಅಭ್ಯರ್ಥಿಯಾಗಬೇಕೆಂಬುದು ಬಹುತೇಕರ ಒತ್ತಾಸೆಯಾಗಿದೆ. ಅಂತಿಮವಾಗಿ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಕಾದು ನೋಡೋಣ ಎಂದರು.

ನಾವು ಈ ಹಿಂದೆಯೇ ಕೆಪಿಎಸ್ಸಿ ಪರೀಕ್ಷೆಯನ್ನು ಮುಂದೂಡಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಂಡರೂ ಸರ್ಕಾರ ನಮ ಮಾತು ಕೇಳಲಿಲ್ಲ. ಯಾರೋ ಒಬ್ಬ ಅಯೋಗ್ಯ ಮಾಡಿದ ತಪ್ಪಿಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ. ಇದಕ್ಕೆ ಕಾರಣರಾದವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.

ಕೋವಿಡ್ ಮಧ್ಯಂತರದ ವರದಿ ಕುರಿತು ನಾವು ವಾಲೀಕಿ, ಮುಡಾ ಹಗರಣ ಹೊರತರುತ್ತಿದ್ದಂತೆ ಕಾಂಗ್ರೆಸ್ನವರು ಬೆಚ್ಚಿ ಬಿದ್ದಿದ್ದಾರೆ. ಅಂತಿಮವಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಏನು ತೀರ್ಮಾನ ಮಾಡುತ್ತಾರೋ ಮಾಡಲಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅಂದಿನ ಆರೋಗ್ಯ ಸಚಿವ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಮ ಸರ್ಕಾರದ ಅವಧಿಯಲ್ಲಿ ಯಾವುದೇ ತಪ್ಪುಗಳು ಅಥವಾ ಹಗರಣಗಳು ನಡೆದಿಲ್ಲ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಊಹಾಪೋಹದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

ಯುಪಿಎಸ್ಸಿ ಮತ್ತು ಪಿಎಸ್ಐ ಪರೀಕ್ಷೆ ಒಂದೇ ದಿನ ನಡೆಯುತ್ತಿರುವುದರ ಬಗ್ಗೆ ನಾವು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇವೆ. ಸರ್ಕಾರ ಒಂದು ಕಡೆ ಪರೀಕ್ಷೆ ಮುಂದೂಡುತ್ತದೆ, ಮತ್ತೊಂದು ಕಡೆ ನಡೆದಿರುವ ಪರೀಕ್ಷೆಯಲ್ಲಿ ಅದ್ವಾನಗಳನ್ನು ಸೃಷ್ಟಿಸುತ್ತದೆ. ಒಂದು ವರ್ಷದ ಹಿಂದೆಯೇ ಪಿಎಸ್ಐ ಪರೀಕ್ಷೆ ನಿಗಧಿಯಾಗಿದೆ. ಅದೇ ದಿನಾಂಕದಂದು ಯುಪಿಎಸ್ಸಿ ಪರೀಕ್ಷೆ ನಡೆಯುತ್ತಿದೆ. ಸರ್ಕಾರ ಏಕೆ ಇಂತಹ ಮೂರ್ಖ ನಿರ್ಧಾರ ಮಾಡುತ್ತಿದೆ ಎಂದು ಪ್ರಶ್ನಿಸಿದರು.

RELATED ARTICLES

Latest News