ದೊಡ್ಡಬಳ್ಳಾಪುರ, ಜೂ.18– ಪ್ರವಾಸಕ್ಕೆ ಬಂದಿದ್ದ ಯುವ ಜೋಡಿಯನ್ನು ಅಡ್ಡಗಟ್ಟಿ ಹಣ, ಚಿನ್ನಾಭರಣಗಳನ್ನು ದೋಚಿದ್ದ ಮೂವರನ್ನು ಘಟನೆ ನಡೆದ 24 ಗಂಟೆಗಳಲ್ಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ದೊಡ್ಡಬಳ್ಳಾಪುರದ ತ್ಯಾಗರಾಜ ನಗರ ನಿವಾಸಿ ದುರ್ಗಾಪ್ರಸಾದ್ (22), ರೋಜಿಪುರದ ಪ್ರೇಮ್ ಕುಮಾರ್ (24), ಅಣಗಲಪುರದ ಅರುಣ್ (26) ಎಂದು ಗುರುತಿಸಲಾಗಿದೆ.
ನಂದಿಬೆಟ್ಟ ವೀಕ್ಷಿಸಲು ಬೆಂಗಳೂರಿನಿಂದ ಬೈಕ್ನಲ್ಲಿ ಬಂದಿದ್ದ ಜೋಡಿಯನ್ನು ಕಣಿವೆಪುರದ ಬಳಿ ಅಡ್ಡಗಟ್ಟಿದ ಕಳ್ಳರು, ಅವರಿಂದ ಒಂದು ಚಿನ್ನದ ಸರ ದೋಚಿದಲ್ಲದೆ, ಫೋನ್ ಪೇ ಮೂಲಕ 25 ಸಾವಿರ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆನ್ನತ್ತಿದ ಪೊಲೀಸರು ಕೇವಲ 24 ಗಂಟೆಗಳಲ್ಲೇ ಕಳ್ಳರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅರ್ಜುನ್ ಲಮಾಣಿ, ಸಚಿನ್, ಸುನಿಲ್ ಬಾಸಗಿ, ಹರೀಶ್, ಪ್ರವೀಣ್ ಭಾಗವಹಿಸಿದ್ದರು.