Sunday, September 29, 2024
Homeರಾಷ್ಟ್ರೀಯ | Nationalಸುಪ್ರೀಂ ಅಂಗಳ ಪ್ರವೇಶಿಸಿದ ತಿರುಪತಿ ಲಡ್ಡು ಲಡಾಯಿ

ಸುಪ್ರೀಂ ಅಂಗಳ ಪ್ರವೇಶಿಸಿದ ತಿರುಪತಿ ಲಡ್ಡು ಲಡಾಯಿ

Tirupati laddu row : Subramanian Swamy files PIL in Supreme Court

ನವದೆಹಲಿ,ಸೆ.23- ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ತಿರುಪತಿ ಲಡ್ಡು ವಿವಾದ ಇದೀಗ ಸುಪ್ರೀಂಕೋರ್ಟ್‌ ಅಂಗಳ ಪ್ರವೇಶಿಸಿದೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಹಿನ್ನಲೆಯಲ್ಲಿ ತಿರುಪತಿ ಲಡ್ಡು ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಲಾಗಿದೆ.

ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹಣ್ಯಸ್ವಾಮಿ ಅವರು ಲಡ್ಡು ವಿವಾದವನ್ನು ತನಿಖೆ ನಡೆಸಲು ಪಿಐಎಲ್‌ನಲ್ಲಿ ಮನವಿ ಮಾಡಿದ್ದು, ಅರ್ಜಿ ವಿಚಾರಣೆ ಯಾವಾಗ ನಡೆಯುತ್ತದೆ ಎಂಬುದು ದೃಢಪಟ್ಟಿಲ್ಲ.

ತನಿಖೆಗೆ ಎಸ್‌‍ಐಟಿ ರಚನೆ:
ಐಜಿ ಶ್ರೇಣಿಯ ಅಧಿಕಾರಿ ನೇತೃತ್ವದಲ್ಲಿ ಎಸ್‌‍ಐಟಿ (ವಿಶೇಷ ತನಿಖಾ ತಂಡ) ರಚಿಸಿರುವುದಾಗಿ ಮತ್ತು ಎಸ್‌‍ಐಟಿ ವರದಿಯ ಆಧಾರದ ಮೇಲೆ ಕಳಪೆ ಗುಣಮಟ್ಟದ ಕಲಬೆರಕೆ ತುಪ್ಪ ಬಳಸಿ ತಿರುಪತಿ ಲಡ್ಡು ಅಪವಿತ್ರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಚಂದ್ರಬಾಬು ನಾಯ್ಡು ಎಚ್ಚರಿಕೆ ರವಾನಿಸಿದ್ದಾರೆ.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಆಯಾ ಪ್ರಾರ್ಥನಾ ಮಂದಿರಗಳಲ್ಲಿ ಎಲ್ಲ ಧರ್ಮದವರಿಗೂ ಗೌರವ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಧಾರ್ಮಿಕ ಸೌಹಾರ್ದತೆ ಕಾಪಾಡಲು ಅಗತ್ಯಬಿದ್ದರೆ ವಿಶೇಷ ಕಾನೂನು ಕೂಡ ತರಲಾಗುವುದು ಎಂದು ತಿಳಿಸಿದ್ದಾರೆ.

ಆಗಮ ಶಾಸ್ತ್ರ ವಿದ್ವಾಂಸರು ಮತ್ತು ಇತರ ತಜ್ಞರನ್ನೊಳಗೊಂಡ ವಿಶೇಷ ಸಮಿತಿಯು ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಶಿಫಾರಸುಗಳನ್ನು ಪಡೆಯಲಿದೆ. ಎಲ್ಲ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಗೌರವ ಕೊಡಲು ಕ್ರಮ ಕೈಗೊಳ್ಳಲಾಗುವುದು, ಭಕ್ತರ ಭಾವನೆಗಳನ್ನು ಕಾಪಾಡುವ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಎಂದು ಹೇಳಿದ್ದಾರೆ.

ದೇವರಿಗೆ ಅಗೌರವ ತೋರುವ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಎಲ್ಲಾ ವ್ಯವಸ್ಥೆಗಳನ್ನು ಸುಧಾರಿಸಲು ಮತ್ತು ದೇವಾಲಯಗಳ ನಿರ್ವಹಣೆಯನ್ನು ಪಾವಿತ್ರ್ಯದಿಂದ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News