Monday, July 8, 2024
Homeಬೆಂಗಳೂರುಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

51.30 ಲಕ್ಷ ಮೌಲ್ಯದ 9 ವಾಹನಗಳು ವಶಕ್ಕೆ
ಬೆಂಗಳೂರು, ಜು.5- ದೆಹಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಪಾರ್ಕಿಂಗ್‌ ಸ್ಥಳಗಳಲ್ಲಿ ಹಾಗೂ ರಸ್ತೆ ಬದಿ ನಿಲ್ಲಿಸಿದಂತಹ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 51.30 ಲಕ್ಷ ರೂ. ಮೌಲ್ಯದ 9 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಬುದ್ದೀನ್‌ ಖಾನ್‌(37) ಮತ್ತು ಗುಲ್ಬರ್ಗಾದ ಮೊಹಮದ್‌ ಖೌಸರ್‌(45) ಬಂಧಿತ ಆರೋಪಿ ಗಳು. ಇವರಿಬ್ಬರು ದೆಹಲಿ ಹಾಗೂ ರಾಜ್ಯದ ಹರಿಹರ, ಹಾವೇರಿ, ಗುಲ್ಬರ್ಗಾದಲ್ಲಿ ವಾಹನಗಳನ್ನು ಕಳ್ಳತನ ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಎಸ್‌‍ಕೆಬಿಕೆ ಕಾಲೇಜ್‌ ಹತ್ತಿರ ಪೊಲೀಸರು ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದ್ದು ಗಮನಿಸಿ ಆತನನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ಹೊರ ರಾಜ್ಯಗಳಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.
ಈತನನ್ನು ಹೆಚ್ಚಿನ ವಿಚಾರಣೆಗೊಳ ಪಡಿಸಿದಾಗ ಕಳ್ಳತನ ಪ್ರಕರಣಗಳಲ್ಲಿ ಸ್ನೇಹಿತ ಭಾಗಿಯಾಗಿರುವುದಾಗಿ ತಿಳಿಸಿದ ಮೇರೆಗೆ ನಾಗವಾರ ಬಸ್‌‍ ನಿಲ್ದಾಣದ ಹತ್ತಿರ ಮತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಈ ಇಬ್ಬರು ಸೇರಿಕೊಂಡು ಹೊರರಾಜ್ಯಗಳಲ್ಲಿ ಕಳ್ಳತನ ಮಾಡಿದ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ಎರಡು ಟೆಂಪೊ, ಒಂದು ರಾಯಲ್‌ ಎನ್‌ಫೀಲ್‌್ಡ ಬೈಕ್‌, ಒಂದು ಸ್ಕೂಟರ್‌ನ್ನು ವೀರಣ್ಯಪಾಳ್ಯ ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಮೇರೆಗೆ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.ಬೆಳಗಾವಿಯ ಉಜ್ವಲ್‌ ನಗರದ ಅಪಾರ್ಟ್‌ಮೆಂಟ್‌ವೊಂದರ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ 4 ಕಾರು, 1 ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.ಗೋವಿಂದಪುರ ಠಾಣೆ ಇನ್‌ಸ್ಪೆಕ್ಟರ್‌ ಜಯರಾಜ್‌ ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ಸಂಚಾರ ನಿಯಮ ಉಲ್ಲಂಘನೆ : ಆಟೋ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ
ಬೆಂಗಳೂರು, ಜು.5- ಸಂಚಾರ ನಿಗಮ ಉಲ್ಲಂಘನೆ ಮಾಡುತ್ತಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಆಟೋ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 525ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಿಸಿ 1.96 ಲಕ್ಷ ರೂ. ದಂಡ ವಿಧಿಸಲಾಗಿದೆ.ಪ್ರಮುಖವಾಗಿ ಕೆಲವು ಆಟೋ ರಿಕ್ಷಾಗಳ ಚಾಲಕರು ಅರ್ಹತಾ ಚಾಲನಾ ಪರವಾನಗಿ ಪತ್ರವನ್ನು ಹೊಂದಿಲ್ಲದೆ ವಾಹನವನ್ನು ಚಾಲನೆ ಮಾಡುವವರ ಮತ್ತು ಸಾರ್ವಜನಿಕರಿಂದ ನಿಗದಿತ ದರಕ್ಕಿಂತ ಹೆಚ್ಚು ದರವನ್ನು ಪಡೆಯುವುದು. ಹಾಗೂ ಕರೆದ ಸ್ಥಳಕ್ಕೆ ಬಾಡಿಗೆ ಹೋಗಲು ನಿರಾಕರಿಸುತ್ತಿರುವ ಆಟೋ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕರಿಂದ ದೂರುಗಳು ಬಂದಿದ್ದವು.

ಈ ಹಿನ್ನೆಲೆಯಲ್ಲಿ ಸಂಚಾರ ಪಶ್ಚಿಮ ವಿಭಾಗದ ಎಲ್ಲಾ ಸಂಚಾರಿ ಠಾಣಾ ವ್ಯಾಪ್ತಿಗಳಲ್ಲಿ ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆ ಕೈಗೊಂಡು ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುವವರ ವಿರುದ್ಧ 163 ಪ್ರಕರಣಗಳು ದಾಖಲಿಸಿ 82 ಸಾವಿರ ದಂಡ ವಿಧಿಸಲಾಗಿದೆ.
ನಿಗದಿತ ದರಕ್ಕಿಂತ ಹೆಚ್ಚು ದರ ಪಡೆಯುವವರ ವಿರುದ್ಧ 46 ಪ್ರಕರಣ- 23 ಸಾವಿರ ದಂಡ, ಬಾಡಿಗೆ ಹೋಗಲು ನಿರಾಕರಣೆ 40 ಪ್ರಕರಣ 20500 ದಂಡ, ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ 14 ಪ್ರಕರಣ 4600 ದಂಡ, ತಪ್ಪು ನಿಲುಗಡೆ 64 ಪ್ರಕರಣ 17600 ದಂಡ, ಇತರೆ ಸಂಚಾರಿ

ನಿಗಮ ಉಲ್ಲಂಘಿಸಿದ 198 ಪ್ರಕರಣಗಳಲ್ಲಿ 48100 ದಂಡ ಸಂಗ್ರಹಿಸಲಾಗಿದೆ.ಎಲ್ಲಾ ಆಟೋ ರಿಕ್ಷಾ ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುಉವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.ಮುಂದಿನ ದಿನಗಳಲ್ಲೂ ಸಹ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಪಶ್ಚಿಮ ಸಂಚಾರ ವಿಭಾಗದ ಉಪಪೊಲೀಸ್‌‍ ಆಯುಕ್ತರಾದ ಅನಿತಾ ಬಿ. ಹದ್ದಣ್ಣವರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಜಿಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ:ವ್ಯಕ್ತಿ ಸೆರೆ
ಬೆಂಗಳೂರು, ಜು.5- ಪಿಜಿಗಳಿಗೆ ನುಗ್ಗಿ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ಮೌಲ್ಯದ 9 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ. ಮಾರತ್ತಹಳ್ಳಿ ವ್ಯಾಪ್ತಿಯ ಪಿಜಿಯಲ್ಲಿಟ್ಟಿದ್ದ ಲ್ಯಾಪ್‌ಟಾಪ್‌ ಕಳ್ಳತನವಾಗಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಹಲವು ಮಾಹಿತಿಗಳನ್ನು ಕಲೆಹಾಕಿ ಮಾರತ್ತಹಳ್ಳಿ ಬ್ರಿಡ್‌್ಜ ಬಳಿ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿ ವಾಸವಾಗಿದ್ದ ನವರಂಗ್‌ ಸಮೀಪದ ಪಿಜಿಯೊಂ ದರಲ್ಲಿ ವಿವಿಧ ಕಂಪೆನಿಯ 9 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.
ಈ ಲ್ಯಾಪ್‌ಟಾಪ್‌ಗಳು ಮಾರತ್ತಹಳ್ಳಿ ಮತ್ತು ಗಿರಿನಗರ ಪೊಲೀಸ್‌‍ ಠಾಣಾ ವ್ಯಾಪ್ತಿಗಳಲ್ಲಿನ ಪಿಜಿಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಇಬ್ಬರು ಡ್ರಗ್‌ ಪೆಡ್ಲರ್‌ಗಳ ಸೆರೆ
ಬೆಂಗಳೂರು, ಜು.5- ಹೊರರಾಜ್ಯಗಳಿಂದ ಮಾದಕ ವಸ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 1.10 ಲಕ್ಷ ರೂ. ಮೌಲ್ಯದ 2 ಕೆಜಿ 127 ಗ್ರಾಂ ಗಾಂಜಾ, ಮೊಬೈಲ್‌ ಫೋನ್‌ ಮತ್ತು ಎಲೆಕ್ಟ್ರಾನಿಕ್‌ ತೂಕದ ಮಿಷನ್‌ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಬನಶಂಕರಿ ಪೈರ್‌ ಸ್ಟೇಷನ್‌ ಪಕ್ಕದಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇನ್‌್ಸಪೆಕ್ಟರ್‌ ಕೊಟ್ರೇಶಿ ಮತ್ತು ಸಿಬ್ಬಂದಿ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

ಆರು ಮಂದಿ ದರೋಡೆಕೋರರ ಸೆರೆ : 4ಲಕ್ಷ ಮೌಲ್ಯದ ಮಾಲು ಜಪ್ತಿ
ಬೆಂಗಳೂರು, ಜು.5- ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಹಣ- ಆಭರಣ ದೋಚಲು ಹೊಂಚು ಹಾಕುತ್ತಿದ್ದ ಆರು ಮಂದಿ ದರೋಡೆಕೋರರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ ನಾಲ್ಕು ಲಕ್ಷ ರೂ. ಬೆಲೆಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ನಾಗವಾರ, ವೈಯ್ಯಾಲಿಕಾವಲ್‌ ಲೇಔಟ್‌ ಸಮೀಪದ ರಸ್ತೆಯಲ್ಲಿ ಒಂಟಿಯಾಗಿ ಹೋಗುವ ಹಣವಂತರನ್ನು ಅಡ್ಡಗಟ್ಟಿ ಹಣ, ಒಡವೆಗಳನ್ನು ದರೋಡೆ ಮಾಡುವ ಉದ್ದೇಶದಿಂದ ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ತಕ್ಷಣ ಪೊಲೀಸರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರು ಮಂದಿ ದರೋಡೆಕೋರರನ್ನು ಬಂಧಿಸಿ ವಿಚಾರಣೆಗೊಳಪಡಿಸಿ 4 ಲಕ್ಷ ಬೆಲೆಬಾಳುವ ಎರಡು ಮೊಬೈಲ್‌, ಒಂದು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಹಾಗೂ ಕೆಜಿ ಹಳ್ಳಿ, ಬಾಣಸವಾಡಿ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿದಂತಹ ಮೂರು ದ್ವಿಚಕ್ರ ವಾಹನಗಳು ಹಾಗೂ ದರೋಡೆ ಮಾಡಲು ಇಟ್ಟುಕೊಂಡಿದ್ದ ಮೂರು ಲಾಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್‌್ಸಪೆಕ್ಟರ್‌ ಜಯರಾಜ್‌ ಮತ್ತು ಸಿಬ್ಬಂದಿ ತಂಡ ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News