ತಿರುಮಲ,ಫೆ.13- ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ದೇಶ ವಿದೇಶಗಳಿಂದ ಬರುವ ಭಕ್ತರ ನಿರ್ವಹಣೆ ಅತಿ ದೊಡ್ಡ ಸವಾಲಾಗಿರುವುದರಿಂದ ಕಾಲಕಾಲಕ್ಕೆ ಹಲವು ನಿಯಮಗಳನ್ನು ಮಾರ್ಪಡು ಮಾಡುವ ಟಿಟಿಡಿ ಇದೀಗ ಕಟ್ಟುನಿಟ್ಟಿನ ಸೂಚನೆಯೊಂದನ್ನು ಹೊರಡಿಸಿದೆ.
ಟೋಕನ್ ಅಥವಾ ಟಿಕೆಟ್ ಪಡೆದು ಆಗಮಿಸುವ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲಕರ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ನಿಗದಿತ ಸಮಯವನ್ನು ನೀಡಲಾಗುತ್ತಿದೆ. ಆದರೆ, ಭಕ್ತರು ಈ ನಿಗದಿತ ಸಮಯಕ್ಕೆ ಮೊದಲೇ ಬಂದು ದರ್ಶನದ ಭಕ್ತರ ಸಾಲಿನಲ್ಲಿ ಸೇರುತ್ತಿದ್ದಾರೆ. ಇದರಿಂದ ಭಕ್ತರ ನಿರ್ವಹಣೆ ಸವಾಲಾಗಿದೆ. ಹಾಗೂ ಜನದಟ್ಟಣೆ ಉಂಟಾಗುತ್ತಿದೆ. ಈ ಹಿನ್ನಲೆ ಈ ಸೂಚನೆ ಹೊರಡಿಸಲಾಗಿದೆ.
ಟೋಕನ್ ಅಥವಾ ಟಿಕೆಟ್ ಪಡೆದವರಿಗೆ ನಿಗದಿಪಡಿಸಿದ ಸಮಯಕ್ಕೆ ದೇವರ ದರ್ಶನದ ಪ್ರವೇಶದ ದ್ವಾರಕ್ಕೆ ಆಗಮಿಸಿಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಸಂಬಂಧ ಈಗಾಗಲೇ ಮಾಧ್ಯಮಗಳಲ್ಲೂ ಭಕ್ತರಿಗೆ ಮನವಿ ಮಾಡಲಾಗಿದೆ.
ನಿಗದಿತ ಸಮಯಕ್ಕೆ ಮೊದಲೇ ಬಂದರು, ದರ್ಶನದ ಸಾಲಿಗೆ ನುಗ್ಗುವುದು ಸರಿಯಲ್ಲ. ಇದರಿಂದ ಇತರರಿಗೆ ತೊಂದರೆಯಾಗುವ ಜೊತೆಗೆ ಈ ಸಂಬಂಧ ಕೆಲ ಭಕ್ತರು ವ್ಯವಸ್ಥೆ ನಿರ್ವಹಣೆ ಮತ್ತು ಜನದಟ್ಟಣೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪದೇ ಪದೇ ಈ ಕುರಿತು ನಾವು ಭಕ್ತರಿಗೆ ಮನವಿ ಮಾಡುತ್ತಿದ್ದೇವೆ. ಸಮಯ ಪಾಲನೆ ಮಾಡುವುದರಿಂದ ವ್ಯವಸ್ಥೆಗಳು ಸರಾಗವಾಗಿ ಸಾಗಲಿದೆ. ಭಕ್ತರು ಇದಕ್ಕೆ ಸಹಕಾರ ನೀಡಬೇಕು ಎಂದು ಟಿಟಿಡಿ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.