Thursday, June 12, 2025
Homeಇದೀಗ ಬಂದ ಸುದ್ದಿವಾಲ್ಮೀಕಿ ನಿಗಮ ಹಗರಣ: ಕಾಂಗ್ರೆಸ್‌‍ನ ಬಳ್ಳಾರಿ ಸಂಸದ, 3 ಶಾಸಕರಿಗೆ ಇಡಿ ಶಾಕ್‌

ವಾಲ್ಮೀಕಿ ನಿಗಮ ಹಗರಣ: ಕಾಂಗ್ರೆಸ್‌‍ನ ಬಳ್ಳಾರಿ ಸಂಸದ, 3 ಶಾಸಕರಿಗೆ ಇಡಿ ಶಾಕ್‌

ಬೆಂಗಳೂರು, ಜೂ.11- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಮತ್ತೊಂದು ಸುತ್ತಿನ ದಾಳಿ ನಡೆಸಿದ್ದು, ಈ ಬಾರಿ ಸಂಸದರನ್ನು ಒಳಗೊಂಡಂತೆ ಕಾಂಗ್ರೆಸ್‌‍ನ ಬಳ್ಳಾರಿ ಜಿಲ್ಲೆಯ ನಾಲ್ಕು ಶಾಸಕರ ಮೇಲೆ ಮುಗಿಬಿದ್ದಿದೆ. ಇಂದು ಬೆಳಿಗ್ಗೆ 8 ತಂಡಗಳಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಸಂಸದ ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್‌, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ.ಎನ್‌.ಟಿ.ಶ್ರೀನಿವಾಸ್‌‍, ಬಳ್ಳಾರಿ ನಗರ ಕ್ಷೇತ್ರದ ಶಾಸಕ ಭರತ್‌ರೆಡ್ಡಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ನಾಗೇಂದ್ರ ಹಾಗೂ ಅವರ ಆಪ್ತ ಸಹಾಯಕ ಗೋವರ್ಧನ್‌ ಮನೆಗಳ ಮೇಲೆ ಮತ್ತು ಬೆಂಗಳೂರಿನ ಕಚೇರಿಗಳಲ್ಲಿ ದಾಳಿ ನಡೆಸಲಾಗಿದೆ.

ಕಾಂಗ್ರೆಸ್‌‍ನ ಶಾಸಕರು ಹಾಗೂ ಸಂಸದರ ಮನೆ ಹಾಗೂ ಕಚೇರಿಗಳ ಜೊತೆಗೆ ಸಂಬಂಧಿಕರು ಹಾಗೂ ಆಪ್ತರ ಮನೆಗಳ ಮೇಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಕಾಯ್ದೆಯಡಿ ಶೋಧಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಬಳ್ಳಾರಿಯ ವಿಧಾನಸಭೆಯ ಚುನಾವಣೆಯಲ್ಲಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಾಲೀಕಿ ಅಭಿವೃದ್ಧಿ ನಿಗಮದಲ್ಲಿನ 94 ಕೋಟಿ ರೂ.ಗಳನ್ನು ಯೂನಿಯನ್‌ ಬ್ಯಾಂಕ್‌ನ ಅಧಿಕಾರಿಗಳ ಸಹಕಾರದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಅದನ್ನು ನೆರೆಯ ತೆಲಂಗಾಣ ವಿಧಾನಸಭೆ ಚುನಾವಣೆ, ಬಳ್ಳಾರಿಯ ಲೋಕಸಭೆ ಚುನಾವಣೆಯಲ್ಲಿ ಖರ್ಚು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ತಮ ಮೇಲೆ ಬಲವಂತವಾಗಿ ಒತ್ತಡ ಹೇರಲಾಗಿತ್ತು ಎಂದು ನಿಗಮದ ಅಕೌಂಟ್‌್ಸ ವಿಭಾಗದ ಚಂದ್ರಶೇಖರ್‌ ಆತಹತ್ಯೆ ಮಾಡಿಕೊಂಡಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಬ್ಯಾಂಕ್‌ನ ಅಧಿಕಾರಿಗಳು ತಮ ಮೇಲೆ ಒತ್ತಡ ಹಾಕಿದ್ದಾಗಿ ಆತಹತ್ಯೆಗೂ ಮುನ್ನ ಬರೆದಿಟ್ಟ ಪತ್ರದಲ್ಲಿ ಚಂದ್ರಶೇಖರ್‌ ಉಲ್ಲೇಖಿಸಿದ್ದರು.

ಇದರಿಂದಾಗಿ ಪ್ರಕರಣ ಬಯಲಿಗೆ ಬಂದಿದ್ದು ನಿಗಮದ ವ್ಯವಸ್ಥಾಪಕರು ಹಾಗೂ ಇತರರನ್ನು ರಾಜ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಜಾರಿ ನಿರ್ದೇಶನಾಲಯ ಸಚಿವರಾಗಿದ್ದ ಬಿ.ನಾಗೇಂದ್ರ ಅವರನ್ನು ಬಂಧಿಸಿತ್ತು. ಈ ಪ್ರಕರಣದಿಂದ ನಾಗೇಂದ್ರ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ನ್ಯಾಯಾಂಗ ಬಂಧನದಲ್ಲಿದ್ದ ನಾಗೇಂದ್ರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕೆಲ ದಾಖಲೆಗಳು ದೊರೆತಿದ್ದು, ಅದರಲ್ಲಿ ಯಾರ್ಯಾರಿಗೆ, ಎಷ್ಟು ಹಣ ರವಾನೆಯಾಗಿದೆ ಎಂದು ಉಲ್ಲೇಖಿಸಿದ್ದಾಗಿ ತಿಳಿದುಬಂದಿದೆ.

ಕಂಪ್ಲಿ ಗಣೇಶ್‌ ಅವರಿಗೆ 3 ಕೋಟಿ ರೂ., ತುಕಾರಾಂ ಅವರಿಗೆ 10 ಕೋಟಿ ರೂ., ಡಾ. ಎನ್‌.ಟಿ. ಶ್ರೀನಿವಾಸ್‌‍ ಅವರಿಗೆ ಒಂದಿಷ್ಟು ಹಣ ರವಾನೆ ಮಾಡಿದ್ದಾಗಿ ಬರೆದಿಟ್ಟಿದ್ದ ಚೀಟಿ ದೊರೆತಿತ್ತು ಎಂದು ಹೇಳಲಾಗಿದೆ.
ಸದರಿ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ವಿಚಾರಣೆ ಮುಂದುವರೆಸಿದ್ದು, 2ನೇ ಸುತ್ತಿನ ದಾಳಿ ನಡೆಸಲಾಗಿದೆ. ಈ ವೇಳೆ ಕೆಲವು ದಾಖಲಾತಿಗಳನ್ನು ಜಪ್ತಿ ಮಾಡಲಾಗಿದ್ದು, ಬ್ಯಾಂಕ್‌ ಖಾತೆ ಹಣಕಾಸು ವಹಿವಾಟು, ಆಪ್ತರ ಖಾತೆಗಳಲ್ಲಿನ ಹಣದ ವಹಿವಾಟು ಸೇರಿದಂತೆ ಹಲವಾರು ಅಂಶಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Latest News