Tuesday, September 17, 2024
Homeರಾಜ್ಯವಿಧಾನಪರಿಷತ್‌ ಚುನಾವಣೆ : ಮತದಾರರಿಗೆ ಆಮಿಷ.. ?!

ವಿಧಾನಪರಿಷತ್‌ ಚುನಾವಣೆ : ಮತದಾರರಿಗೆ ಆಮಿಷ.. ?!

ಬೆಂಗಳೂರು,ಮೇ17- ಲೋಕಸಭಾ ಚುನಾವಣೆ-2024ರ ಫಲಿತಾಂಶಕ್ಕೆ ಒಂದು ದಿನದ ಮೊದಲು ಅಂದರೆ ಜೂನ್‌ 3ರಂದೇ ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ. ತಲಾ ಮೂರು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ ಗೆಲುವಿಗೆ ಪರಿಷತ್ತು ಚುನಾವಣೆಯಲ್ಲಿ ಒಂದು ವರ್ಗದ ಅಭ್ಯರ್ಥಿಗಳು ಅನೈತಿಕ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ಮುಗಿದ ಲೋಕಸಭೆ ಚುನಾವಣೆ ವೇಳೆ ಮತದಾರರನ್ನು ಓಲೈಸಲು ಹಲವು ಕಡೆಗಳಲ್ಲಿ ಉಡುಗೊರೆ ಮತ್ತು ನಗದಿನ ಆಮಿಷಗಳನ್ನು ಮತದಾರರಿಗೆ ಒಡ್ಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ವಿಧಾನಪರಿಷತ್‌ ಚುನಾವಣೆಯಲ್ಲಿ ಕೂಡ ಕೆಲವು ಅಭ್ಯರ್ಥಿಗಳ ವಿರುದ್ಧ ಇದೇ ರೀತಿಯ ತಂತ್ರವನ್ನು ಅಳವಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಕೌನ್ಸಿಲ್‌ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುವ ಕಡಿಮೆ ಸಂಖ್ಯೆಯಲ್ಲಿರುವ ಮತದಾರರನ್ನು ತಲುಪಲು ಉಡುಗೊರೆ, ನಗದು ಆಮಿಷಗಳು ಸುಲಭ ಮಾರ್ಗಗಳಾಗಿವೆ.ಮತದಾರರನ್ನು ಪಟ್ಟಿಗೆ ಸೇರಿಸಲು ಉಪಕ್ರಮ ಕೈಗೊಂಡಿರುವ ಕೆಲವರು, ಗಾಲಾ ಪಾರ್ಟಿಗಳನ್ನು ಆಯೋಜಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮೊನ್ನೆ ಬಿಜೆಪಿ ಕಾರ್ಯಕರ್ತರಿಗೆ ಆನೇಕಲ್‌ನಲ್ಲಿ ಗೋದಾಮಿನಲ್ಲಿ ಬೆಂಗಳೂರು ಪದವೀಧರರ ಪರಿಷತ್ತಿನ ಅಭ್ಯರ್ಥಿಗೆ ಸೇರಿದ ಉಡುಗೊರೆ ಬಾಕ್‌್ಸಗಳನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಗೋದಾಮಿನ ಮೇಲೆ ದಾಳಿ ನಡೆಸಿದಾಗ ಅಭ್ಯರ್ಥಿಗಳು ಮತದಾರರಿಗೆ ನಗದು ಹಂಚಲು ಗೋದಾಮು ನಡೆಸಲಾಗುತ್ತಿದೆ ಎಂದು ನಾಯಕರೊಬ್ಬರು ಆರೋಪಿಸಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ರಾಜಕೀಯ ಮುಖಂಡರೂ ಆಗಿರುವ ಶಿಕ್ಷಕರೊಬ್ಬರು, ಕಳೆದ ಬಾರಿ ಅಭ್ಯರ್ಥಿಯೊಬ್ಬರು ಪ್ರತಿ ಮತಕ್ಕೆ 5,000 ರೂ. ಹಂಚಿದ್ದರು. ಈ ಬಾರಿ 10 ಸಾವಿರ ರೂ ನೀಡುತ್ತಿದ್ದಾರೆ. ದಕ್ಷಿಣ ಶಿಕ್ಷಕರಂತಹ ಕೆಲವು ಕೌನ್ಸಿಲ್‌ ಸ್ಥಾನಗಳಲ್ಲಿ, ಪ್ರತಿ ಮತಕ್ಕೆ 25,000 ರೂ. ನೀಡುತ್ತಿದ್ದಾರೆ.

ಒಬ್ಬ ಅಭ್ಯರ್ಥಿಯು ಅರ್ಧದಷ್ಟು ಮತದಾರರನ್ನು ಅಕ್ರಮ ಮಾರ್ಗಗಳ ಮೂಲಕ ತಲುಪಿದರೆ ಮತ್ತು ಅವರ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವುದು ಖಚಿತವಾಗಿದ್ದರೆ, ಅವರ ಗೆಲುವು ಬಹುತೇಕ ಖಚಿತವಾಗಿರುತ್ತದೆ. ಸುಮಾರು 20 ವರ್ಷಗಳ ಹಿಂದೆ ಅಭ್ಯರ್ಥಿಗಳು ಅಂಚೆ ಕಾರ್ಡ್‌ಗಳನ್ನು ಕಳುಹಿಸುವ ಮೂಲಕ ಮತ ಕೇಳುತ್ತಿದ್ದರು ಎಂದು ಹೇಳುತ್ತಾರೆ.

ಲೋಕಸಭೆ ಚುನಾವಣೆಗಿಂತ ಭಿನ್ನವಾಗಿ, ಪರಿಷತ್‌ ಚುನಾವಣೆಯಲ್ಲಿ ವೆಚ್ಚದ ಮೇಲೆ ಯಾವುದೇ ಮಿತಿಯಿಲ್ಲ ಮತ್ತು ಅಭ್ಯರ್ಥಿಗಳು ಭಾರತೀಯ ಚುನಾವಣಾ ಆಯೋಗದ ಮುಂದೆ ಅದನ್ನು ಸಲ್ಲಿಸುವ ಸಾಧ್ಯತೆಯಿಲ್ಲ. ಎಲ್ಲಾ ವೆಚ್ಚದಲ್ಲಿಯೂ ಗೆಲುವು ಸಾಧಿಸಲು ದೊಡ್ಡ ಮೊತ್ತವನ್ನು ಖರ್ಚು ಮಾಡುವ ಉದ್ದೇಶ ಹೊಂದಿರುವ ಕೆಲವು ಅಭ್ಯರ್ಥಿಗಳಿಗೆ ಇದು ವರದಾನವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಉಚಿತವಾಗಿ ಹಣ ಹಂಚಿಕೆ ಮಾಡುವುದು ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಭ್ರಷ್ಟ ಪದ್ಧತಿಗಳಡಿ ಬರುತ್ತದೆ. ಗೋದಾಮುಗಳಲ್ಲಿ ಉಚಿತ ಉಡುಗೊರೆಗಳನ್ನು ಹಂಚಲು ವಸ್ತುಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದರೆ ದಾಳಿ ನಡೆಸುತ್ತೇವೆ. ಚುನಾವಣಾ ಪ್ರಚಾರಕ್ಕಾಗಿ ಕಾನೂನು ವೆಚ್ಚಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಯಾವುದೇ ಮಿತಿಯಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌‍ ವಿರುದ್ಧ ಬಿಜೆಪಿ ದೂರು: ಬೆಂಗಳೂರು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ರಾಮೋಜಿಗೌಡ ಅವರು ಮತದಾರರಿಗೆ ಆಮಿಷವೊಡ್ಡಲು ಉಡುಗೊರೆ ಹಂಚಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ನಾಯಕರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

RELATED ARTICLES

Latest News