Saturday, July 27, 2024
Homeರಾಜ್ಯನಾಳೆ 3 ಶಿಕ್ಷಕರ ಹಾಗೂ 3 ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ

ನಾಳೆ 3 ಶಿಕ್ಷಕರ ಹಾಗೂ 3 ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ

ಬೆಂಗಳೂರು,ಜೂ.5- ವಿಧಾನಪರಿಷತ್‌ನ 3 ಶಿಕ್ಷಕರ ಹಾಗೂ 3 ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.

ಅಲ್ಲದೆ, ರಾಜ್ಯ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್‌ನ 11 ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳು ಮಾತ್ರ ಉಳಿದಿರುವುದರಿಂದ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

ಮರಿತಿಬ್ಬೇಗೌಡ ಹಾಗೂ ಆಯನೂರು ಮಂಜುನಾಥ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಹಾಗೂ ಜೂ.21 ರಂದು ನಿವೃತ್ತಿಯಾಗುವ ವಿಧಾನಪರಿಷತ್‌ ಸದಸ್ಯರಾದ ಡಾ.ಚಂದ್ರಶೇಖರ್‌ ಬಿ.ಪಾಟೀಲ, ಎ.ದೇವೇಗೌಡ, ಡಾ.ವಿ.ಎ.ನಾರಾಯಣಸ್ವಾಮಿ, ಎಸ್‌‍.ಎಲ್‌.ಬೋಜೇಗೌಡ ಅವರಿಂದ ತೆರವಾಗುವ 6 ಸ್ಥಾನಗಳಿಗೆ ಜೂ.3 ರಂದು ಮತದಾನ ನಡೆದಿದೆ.

ನಾಳೆ ಬೆಳಿಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ. ಈ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ 4 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್‌‍ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

ಆರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌‍ ಸ್ಪರ್ಧೆ ಮಾಡಿತ್ತು. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಶೇ.65.86, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಶೇ.88.07, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.82.56, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಶೇ.95.27 ರಷ್ಟು, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಶೇ.78.19 ಹಾಗೂ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಶೇ.69.51 ರಷ್ಟು ಮತದಾನವಾಗಿತ್ತು. ನಿವೃತ್ತಿಯಾಗುತ್ತಿರುವ ಹಾಗೂ ರಾಜೀನಾಮೆ ನೀಡಿರುವ ಬಹುತೇಕ ಸದಸ್ಯರು ಸ್ಪರ್ಧೆಗಿಳಿದಿದ್ದರು.

ಅವಿರೋಧ ಆಯ್ಕೆ :
ಜೂನ್‌ 17 ರಂದು ನಿವೃತ್ತಿಯಾಗಲಿರುವ 11 ವಿಧಾನಪರಿಷತ್‌ ಸದಸ್ಯರಿಂದ ತೆರವಾಗುವ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಲಿದೆ.ವಿಧಾನಸಭೆ ಸದಸ್ಯರ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣಾ ಕಣದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳಾದ ಐವಾನ್‌ ಡಿಸೋಜಾ, ಕೆ.ಗೋವಿಂದರಾಜ್‌, ಜಗದೇವ ಗುತ್ತೇದಾರ್‌, ಬಲ್ಕೀಸ್‌‍ ಬಾನು, ಎನ್‌.ಎಸ್‌‍.ಬೋಸರಾಜು, ಡಾ.ಯತೀಂದ್ರ.ಎಸ್‌‍. ಹಾಗೂ ಎ.ವಸಂತಕುಮಾರ್‌ ಅವರು ಕಣದಲ್ಲಿದ್ದಾರೆ.

ಜೆಡಿಎಸ್‌‍ನ ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ, ಬಿಜೆಪಿ ಅಭ್ಯರ್ಥಿಗಳಾದ ಸಿ.ಟಿ.ರವಿ, ಮೂಳೆ ಮಾರುತಿರಾವ್‌ ಹಾಗೂ ರವಿಕುಮಾರ್‌.ಎನ್‌ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ನಿನ್ನೆ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಈ ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯವಾಗಿವೆ.

ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳು ಮಾತ್ರ ಉಳಿದಿದ್ದು, ನಾಮಪತ್ರ ವಾಪಸ್‌‍ ಪಡೆಯಲು ನಾಳೆ ಕೊನೆಯ ದಿನವಾಗಿದ್ದು, ಸಂಜೆ ವೇಳೆಗೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ವಿಧಾನಪರಿಷತ್‌ ಸದಸ್ಯರಾದ ಅರವಿಂದ ಕುಮಾರ ಅರಳಿ, ಎನ್‌.ಎಸ್‌‍.ಬೋಸರಾಜು, ಕೆ.ಗೋವಿಂದರಾಜು, ಮುನಿರಾಜುಗೌಡ, ಬಿ.ಎಂ.ಫಾರುಕ್‌, ರಘುನಾಥ್‌ ರಾವ್‌ ಮಲ್ಕಾಪುರೆ, ಎನ್‌.ರವಿಕುಮಾರ್‌, ಎಸ್‌‍.ರುದ್ರೇಗೌಡ ಹಾಗೂ ಕೆ.ಹರೀಶ್‌ಕುಮಾರ್‌ ಅವರು ಜೂ.17 ರಂದು ನಿವೃತ್ತಿಯಾಗಲಿದ್ದಾರೆ. ಡಾ.ತೇಜಸ್ವಿನಿ ಗೌಡ ಹಾಗೂ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಈಗಾಗಲೇ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ರಾಜೀನಾಮೆ ಹಾಗೂ ನಿವೃತ್ತಿಯಿಂದ ತೆರವಾಗುವ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

RELATED ARTICLES

Latest News