ಬೆಂಗಳೂರು,ಜೂ.14- ಮನೆಯಲ್ಲಿ ಕೇರ್ಟೇಕರ್ ಕೆಲಸಕ್ಕೆ ಸೇರಿಕೊಂಡು ಹಣ, ಆಭರಣ ಕಳ್ಳತನ ಮಾಡಿದ್ದ ಮಹಿಳೆಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿ ನಗದು ಸೇರಿದಂತೆ 70.16 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರದ ಇಲಿಯಾಜ್ ನಗರ ನಿವಾಸಿ ಉಮಾ (43) ಬಂಧಿತ ಮಹಿಳೆ. ಚಾಮರಾಜಪೇಟೆಯ ನಿವಾಸಿ ರಾಧಾ ಅವರ ಕುಟುಂಬದವರು ನಗರತ್ ಪೇಟೆಯಲ್ಲಿ ಸೆಕ್ಯೂರಿಟಿ ಏಜೆನ್ಸಿ ನಡೆಸುತ್ತಿದ್ದಾರೆ.ರಾಧಾ ಅವರ ಅಕ್ಕ ಸುಜಾತಾ ಅವರು ಅನಾರೋಗ್ಯದ ಕಾರಣ ಬೆಡ್ರಿಡೆನ್ ಆಗಿದ್ದಾರೆ. ಹಾಗಾಗಿ ಸುಜಾತಾ ಅವರು ರಾಧಾರ ಮನೆಯಲ್ಲಿದ್ದಾರೆ. ಅವರನ್ನು ನೋಡಿಕೊಳ್ಳಲು ಮೂರು ತಿಂಗಳ ಹಿಂದೆ ಏಜೆನ್ಸಿ ಮೂಲಕ ಉಮಾ ಎಂಬುವವರನ್ನು ಕೆಲಸಕ್ಕೆ ನೇಮಿಸಿಕೊಂಡು ತಿಂಗಳಿಗೆ 23 ಸಾವಿರ ಸಂಬಳ ಕೊಡುತ್ತಿದ್ದರು.
ಸುಜಾತಾ ಅವರು ಎಲೆಕ್ಟ್ರಾನಿಕ್ಸಿಟಿಯ ನೀಲಾದ್ರಿ ಸೊಸೈಟಿಯಲ್ಲಿನ ತಮ ಸೈಟನ್ನು 67 ಲಕ್ಷ ರೂ.ಗೆ ಮಾರಾಟ ಮಾಡಿ ಬೇರೆ ಕಡೆ ಮನೆ ಖರೀದಿಸಲು ಈ ಹಣವನ್ನು ತಂದು ರಾಧಾ ಅವರ ಮನೆಯ ಬೀರುವಿನಲ್ಲಿಟ್ಟಿದ್ದರು. ಅಲ್ಲದೇ ಬೀರುವಿನಲ್ಲಿ ಮತ್ತೊಬ್ಬ ಸಹೋದರಿ ಸ್ವರ್ಣಲತಾ ರವರಿಗೆ ಸೇರಿದ 1ಕೆಜಿ 415 ಗ್ರಾಂ ಚಿನ್ನಾಭರಣಗಳು ಮತ್ತು 2ಕೆಜಿ 445 ಗ್ರಾಂ ತೂಕದ ಬೆಳ್ಳಿಯ ತಟ್ಟೆ, ಚಂಬು ಮತ್ತು ಕಪ್ಗಳನ್ನು ಇಟ್ಟಿದ್ದರು.
ಇವರ ಮನೆಯಲ್ಲಿ ಇಟ್ಟಿರುವ ಹಣ,ಆಭರಣಗಳ ಬಗ್ಗೆ ಉಮಾ ಗಮನಿಸಿ ಆಗಿಂದಾಗ್ಗೆ ಅವುಗಳನ್ನು ಕಳ್ಳತನ ಮಾಡಿದ್ದಾಳೆ. ಆದರೆ ಇದು ಮನೆಯವರ ಗಮನಕ್ಕೆ ಬಂದಿಲ್ಲ.ಈ ನಡುವೆ ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯಲ್ಲಿ ಪ್ಲಾಟ್ ಖರೀದಿಗಾಗಿ ಮಾತುಕತೆ ನಡೆಸಿದ್ದು,ಅಡ್ವಾಸ್ಹಣ ಕೊಡಲು ಜೂ.9 ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಬೀರು ತೆಗೆದಿದ್ದಾರೆ. ಆದರೆ ಅದರಲ್ಲಿಟ್ಟಿದ್ದ ಹಣ ಹಾಗೂ ಚಿನ್ನಾಭರಣಗಳು ಇರಲಿಲ್ಲ. ಒಂದು ಕ್ಷಣ ಗಾಬರಿಯಾಗಿ ಕೇರ್ಟೇಕರ್ ಕೆಲಸ ಮಾಡಿಕೊಂಡಿದ್ದ ಉಮಾಳನ್ನು ವಿಚಾರಿಸಿದ್ದಾಗ ತನಗೇನೂ ಗೊತ್ತಿಲ್ಲವೆಂದು ಹೇಳಿದ್ದಾಳೆ.
ಮನೆಯವರಿಗೆ ಉಮಾಳ ಮೇಲೆ ಅನುಮಾನ ಬಂದಿದೆ. ಹಾಗಾಗಿ ಆಕೆ ಶಂಕೆ ವ್ಯಕ್ತಪಡಿಸಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ರಾಧಾ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೇ ಹಣ, ಆಭರಣಗಳನ್ನು ಕಳವು ಮಾಡಿಕೊಂಡು ಚಾಮರಾಜನಗರದ ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದ್ದಾಳೆ.
ಈಕೆಯ ಮಾಹಿತಿ ಮೇರೆಗೆ ಪೊಲೀಸರು ಆಕೆಯ ಮನೆಯಿಂದ 57.50 ಲಕ್ಷ ರೂ. ನಗದು ಹಾಗೂ 12.66 ಲಕ್ಷ ರೂ. ಮೌಲ್ಯದ 211 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್್ಸಪೆಕ್ಟರ್ ಮಂಜಣ್ಣ ಹಾಗೂ ಅವರ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.