Sunday, May 12, 2024
Homeರಾಷ್ಟ್ರೀಯಜಗನ್ನಾಥ ದೇವಾಲಯಕ್ಕೆ ಅಕ್ರಮ ಪ್ರವೇಶ ಪಡೆದ ಬಾಂಗ್ಲಾದೇಶಿಯರ ಬಂಧನ

ಜಗನ್ನಾಥ ದೇವಾಲಯಕ್ಕೆ ಅಕ್ರಮ ಪ್ರವೇಶ ಪಡೆದ ಬಾಂಗ್ಲಾದೇಶಿಯರ ಬಂಧನ

ಭುವನೇಶ್ವರ, ಮಾ.4 (ಪಿಟಿಐ) ಪುರಿಯ ಜಗನ್ನಾಥ ದೇವಾಲಯಕ್ಕೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪದ ಮೇಲೆ ಒಡಿಶಾ ಪೊಲೀಸರು ಒಂಬತ್ತು ಬಾಂಗ್ಲಾದೇಶೀಯರನ್ನು ಬಂಧಿಸಿದ್ದಾರೆ. 12ನೇ ಶತಮಾನದ ಇತಿಹಾಸ ಪ್ರಸಿದ್ದ ಪುರಿ ದೇಗುಲಕ್ಕೆ ಹಿಂದೂಗಳಲ್ಲದವರು ದೇವಾಲಯದ ನಿಯಮಗಳನ್ನು ಉಲ್ಲಂಘಿಸಿ ದೇಗುಲವನ್ನು ಪ್ರವೇಶಿಸಿರುವುದನ್ನು ಕಂಡು ಕೆಲವು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸಿಂಗ್ದ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ದೂರು ಪಡೆದ ನಂತರ, ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ವಿಚಾರಣೆಗಾಗಿ ಪ್ರವಾಸಿಗರನ್ನು ವಶಕ್ಕೆ ತೆಗೆದುಕೊಂಡಿತು ಎಂದು ಪುರಿ ಹೆಚ್ಚುವರಿ ಎಸ್ಪಿ ಸುಶೀಲ್ ಮಿಶ್ರಾ ತಿಳಿಸಿದ್ದಾರೆ. ಬಾಂಗ್ಲಾದೇಶದಿಂದ ಕೆಲವು ಹಿಂದೂಯೇತರ ಜನರು ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂದು ನಮಗೆ ದೂರು ಬಂದಿದೆ. ನಾವು ಒಂಬತ್ತು ಬಾಂಗ್ಲಾದೇಶಿಗಳನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ದೇವಾಲಯದ ನಿಯಮಗಳ ಪ್ರಕಾರ, ದೇಗುಲವನ್ನು ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಅವಕಾಶವಿದೆ.
ಅವರು ಹಿಂದೂ ಅಲ್ಲ ಎಂದು ಕಂಡುಬಂದರೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಿಶ್ರಾ ಹೇಳಿದರು. ನಾವು ಅವರ ಪಾಸ್‍ಪೋರ್ಟ್‍ಗಳನ್ನು ಪರಿಶೀಲಿಸುತ್ತಿದ್ದೇವೆ. ಅವರಲ್ಲಿ ಒಬ್ಬ ಹಿಂದೂ ಇರುವುದು ಪತ್ತೆಯಾಗಿದೆ. ನಾವು ಇತರರ ಪಾಸ್‍ಪೋರ್ಟ್‍ಗಳನ್ನು ಪರಿಶೀಲಿಸುತ್ತಿದ್ದೇವೆ. ಒಂಬತ್ತು ಬಂಧಿತರಲ್ಲಿ ನಾಲ್ವರು ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ, ಎಂದು ಅವರು ಹೇಳಿದರು.

RELATED ARTICLES

Latest News