ಬೆಂಗಳೂರು, ಏ.21- ಬೇಸಿಗೆ ಸಂದರ್ಭದಲ್ಲಿ ನೀರಿನ ಟ್ಯಾಂಕರ್ನವರೂ ಜನರನ್ನು ಸುಲಿಗೆ ಮಾಡುವುದು ಮಾಮೂಲು. ಹೀಗಾಗಿ ಆರಂಭದಲ್ಲೇ ಎಚ್ಚೆತ್ತುಕೊಂಡಿರುವ ಜಲಮಂಡಳಿ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ತೀರ್ಮಾನಿಸಿದೆ.
ನೀರಿನ ಕೊರತೆ ಸಮಯದಲ್ಲಿ ಅಧಿಕ ದರ ವಸೂಲಿ ಮಾಡುವ ಖಾಸಗಿ ಟ್ಯಾಂಕರ್ಗಳಿಗೆ ಬ್ರೇಕ್ ಹಾಕಲು ಸಂಚಾರಿ ಕಾವೇರಿಗೆ ಮತ್ತಷ್ಟು ಒತ್ತು ನೀಡಲಾಗಿದೆ. ಕಳೆದ ವರ್ಷ ಜಾರಿಗೆ ತಂದಿದ್ದ ಈ ಯೋಜನೆಯನ್ನು ಈಗ ಮತ್ತೆ ಜಾರಿ ಮಾಡಿ ಟ್ಯಾಂಕರ್ ಮಾಫಿಯಾ ಗೆ ಬ್ರೇಕ್ ಹಾಕಲಾಗುತ್ತಿದೆ. ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ಲೈನ್ ಮೂಲಕ ಮನೆ ಬಾಗಿಲಿಗೆ ಸಿಗುತ್ತಿರುವಂತೆಯೇ, ಇದೀಗ ಕುಡಿಯುವ ನೀರೂ ಆ್ಯಪ್ ಮೂಲಕವೇ ಮನೆಗೆ ತಲುಪುವ ವ್ಯವಸ್ಥೆ ಮತ್ತೆ ಜಾರಿಗೆ ಬಂದಿದೆ.
ಈ ಯೋಜನೆಯಡಿ ನಾಗರಿಕರು ತಮ್ಮ ಮೊಬೈಲ್ ಆ್ಯಪ್ ಮೂಲಕವೇ ಬೇಕಾದಷ್ಟು ಕಾವೇರಿ ನೀರನ್ನು ಬುಕ್ ಮಾಡಿ ಮನೆ ಬಾಗಿಲಿಗೆ ಪಡೆಯಬಹುದಾಗಿದೆ. ಯೋಜನೆಯ ಮುಖ್ಯಾಂಶಗಳು:ಆ್ಯಪ್ ಆಧಾರಿತ ನೀರು ಪೂರೈಕೆ ಸೇವೆಗೆ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ನೇರ ಸರಬರಾಜು ಮಾಡಲಾಗುವುದು. ಈ ಯೋಜನೆಗಾಗಿ 500ಕ್ಕೂ ಹೆಚ್ಚು ಟ್ಯಾಂಕರ್ಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.
4,000 ರಿಂದ 12,000 ಲೀಟರ್ವರೆಗೆ ನೀರು ಪೂರೈಕೆ ಮಾಡಲಾಗುವುದು ಆನ್ಲೈನ್ ಅಥವಾ ನಗದು ಪಾವತಿ ಸೌಲಭ್ಯ ಕಲ್ಪಿಸಲಾಗಿದೆ.
ದರ ವಿವರ: 4,000 ಲೀಟರ್ ನೀರಿಗೆ 660 ರೂ.
5,000 ಲೀಟರ್ ಗೆ 700
6,000 ಲೀಟರ್ ಗೆ 740
12,000 ಲೀಟರ್ಗೆ 1,290
ಈ ದರಗಳು ಪ್ರಾರಂಭಿಕ 2 ಕಿಲೋಮೀಟರ್ ವ್ಯಾಪ್ತಿಗೆ ಅನ್ವಯಿಸುತ್ತವೆ.
4,000 ದಿಂದ 6,000 ಲೀಟರ್ ಟ್ಯಾಂಕರ್ಗಳಿಗೆ: 2 ಕಿಮೀ ನಂತರ ಪ್ರತಿ ಕಿಮೀಗೆ 50ರೂ. 12,000 ಲೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಟ್ಯಾಂಕರ್ಗಳಿಗೆ 2 ಕಿಮೀ ನಂತರ ಪ್ರತಿ ಕಿಮೀಗೆ 70 ರೂ. ನೀಡಬೇಕಾಗುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
