ಬೆಂಗಳೂರು, ಏ.21- ಜನಗಣತಿ ಕಾರ್ಯದಲ್ಲಿ ವಿದ್ಯಾವಂತ ಯುವಕರನ್ನು ಬಳಕೆ ಮಾಡಿಕೊಳ್ಳಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ನಿರ್ಧರಿಸಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಭಾರತದ ಜನಗಣತಿ-2027 ಕಾರ್ಯಕ್ಕೆ ಗಣತಿದಾರರ ನೇಮಕ ಮಾಡಿಕೊಳ್ಳಲಾಗುತ್ತಿದೆ. ದ್ವಿತೀಯ ಪಿಯುಸಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ವಾಕ್-ಇನ್ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 9 ಗಂಟೆಗೆ ನಗರದ ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ ಹಾಲ್)ದಲ್ಲಿ ನೇರ ಸಂದರ್ಶನ ನಡೆಯಲಿದ್ದು, ಅಂದಾಜು 1,000 ಗಣತಿದಾರರನ್ನು ಆಯ್ಕೆ ಡಲಾಗುವುದು.ಜನಗಣತಿ-2027ರ ಮೊದಲ ಹಂತವಾದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಮೇ 15ರವರೆಗೆ ನಡೆಯಲಿದೆ. ಈ ಕಾರ್ಯಕ್ಕೆ ಆಯ್ಕೆಯಾಗುವವರು ರಜಾ ದಿನಗಳಲ್ಲೂ ನಿರಂತರವಾಗಿ ಕೆಲಸ ನಿರ್ವಹಿಸಲು ಸಿದ್ಧರಾಗಿರಬೇಕು.ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದು, ಆ್ಯಂಡ್ರಾಯ್್ಡ -12 ಮತ್ತು 4ಜಿಬಿ ರ್ಯಾಮ್ನ ಮೊಬೈಲ್ ಹೊಂದಿರಬೇಕು.
ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಹಾಗೂ ಗಾಂಧಿನಗರ ಕ್ಷೇತ್ರದ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತದೆ.ಮೊದಲ ಹಂತದ ಕಾರ್ಯಕ್ಕೆ ರೂ.9,000 ಗೌರವಧನ ನೀಡಲಾಗುವುದರ ಜೊತೆಗೆ, ಫೆಬ್ರವರಿ 2027ರಲ್ಲಿ ನಡೆಯಲಿರುವ ದ್ವಿತೀಯ ಹಂತದ ಗಣತಿಗೆ ರೂ.16,000 ನೀಡಲಾಗುವುದು. ಪ್ರತಿ ಗಣತಿದಾರರು ಸರಾಸರಿ 150-200 ಮನೆಗಳ ಗಣತಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಆಯ್ಕೆಯಾದವರಿಗೆ ಜನಗಣತಿ ಮೊಬೈಲ್ ಅಪ್ಲಿಕೇಶನ್ ಬಳಕೆ ಹಾಗೂ ಕಾರ್ಯನಿರ್ವಹಣೆ ಕುರಿತು ಮಾಸ್ಟರ್ ಟ್ರೈನರ್ಗಳಿಂದ ತರಬೇತಿ ನೀಡಲಾಗುತ್ತದೆ.ಈ ಅವಕಾಶವನ್ನು ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರು ಸದುಪಯೋಗಪಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಆಯುಕ್ತರು ಮನವಿ ಮಾಡಿಕೊಂಡಿದ್ದಾರೆ.
