ನವದೆಹಲಿ, ಮೇ 20- ವಾಯವ್ಯ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ನಡುವೆ ನಡೆದ ಹಿಂಸಾತಕ ಘರ್ಷಣೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಚಾಕು ಇರಿತಕ್ಕೆ ಬಲಿಯಾಗಿದ್ದಾರೆ.
ರೋಹಿಣಿಯ ಸೆಕ್ಟರ್20 ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸುಲ್ತಾನ್ಪುರಿ ಪ್ರದೇಶದ ಮೂವರು ಅಪ್ರಾಪ್ತ ಬಾಲಕರು ಈ ವರ್ಷದ ಆರಂಭದಲ್ಲಿ ತಮ ಸಹಚರನ ಹತ್ಯೆಯಲ್ಲಿ ಭಾಗಿಯಾಗಿದ್ದವರನ್ನು ಆಶ್ರಯ ನೀಡುತ್ತಿದ್ದಾರೆ ಎಂಬ ಶಂಕೆಯೊಂದಿಗೆ ಮತ್ತೊಬ್ಬ ಬಾಲಕನನ್ನು ಹುಡುಕಿಕೊಂಡು ಈ ಪ್ರದೇಶಕ್ಕೆ ಬಂದಿದ್ದರು.
ಆರೋಪಿಗಳ ಬಳಿ ಮಾರಕ ಆಯುಧಗಳಿದ್ದವು ಎನ್ನಲಾಗಿದ್ದು, ಅವರು ಹುಡುಕುತ್ತಿದ್ದ ಬಾಲಕ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯ ಕುಟುಂಬವೊಂದರ ಸದಸ್ಯರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ವಿವಾದದ ವೇಳೆ ಯುವಕರು ಮಹಿಳೆ ಹಾಗೂ ಆಕೆಯ ಮಗನ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಮೂವರು ಬಾಲಕರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ, ಗಾಯಗೊಂಡ ಮಹಿಳೆಯ ಪುತ್ರ ಹಾಗೂ ಸ್ಥಳೀಯರು ಅವರನ್ನು ಬೆನ್ನಟ್ಟಿದ್ದಾರೆ.ಈ ವೇಳೆ ಓಡಿಹೋಗುತ್ತಿದ್ದ ಬಾಲಕರಲ್ಲಿ ಒಬ್ಬನ ಕೈಯಿಂದ ಚಾಕು ಕೆಳಗೆ ಬಿದ್ದಿದ್ದು, ಎದುರಾಳಿ ಗುಂಪಿನ 14 ವರ್ಷದ ಬಾಲಕ ಅದನ್ನು ಎತ್ತಿಕೊಂಡು ಇಬ್ಬರ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬನ ಕುತ್ತಿಗೆಗೆ ಮತ್ತು ಮತ್ತೊಬ್ಬನ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಇಬ್ಬರೂ ಗಂಭೀರ ಗಾಯಗಳಿಂದ ರಸ್ತೆಯಲ್ಲೇ ಕುಸಿದು ಬಿದ್ದರು.ಮಾಹಿತಿ ಪಡೆದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘರ್ಷಣೆಯಲ್ಲಿ ಗಾಯಗೊಂಡಿದ್ದ ಮೂರನೇ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ, ಹತ್ಯೆಗೆ ಬಳಸಲಾಗಿದೆ ಎನ್ನಲಾದ ಚಾಕು ಸೇರಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
