ಧಾರವಾಡ,ಮೇ31- ಶಾಲೆ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಮೂವರು ಮಕ್ಕಳು ಈಜು ಬಾರದೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೈಲಹೊಂಗಲದ ಸುಭಾನಿ ಬಾಬೋಜಿಕೊಪ್ಪ (12), ಸಹೋದರರಾದ ಮೆಹಬೂಬ್ ವಟ್ನಾಳ (14) ಹಾಗೂ ಅನ್ವರ್ ವಟ್ನಾಳ (15) ಸಾವನ್ನಪ್ಪಿರುವ ಬಾಲಕರು.
ಊರ ಮುಂದೆ ಇರುವ ಕರಿಯಮನ ಕೆರೆಗೆ ಈ ನಾಲ್ವರು ತೆರಳಿದ್ದರು. ನಾಲ್ವರ ಪೈಕಿ ಮೂವರು ಬಾಲಕರು ಈಜಲೆಂದು ಕೆರೆಗೆ ಇಳಿದಿದ್ದು, ಈಜು ಬಾರದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನು ನೋಡಿದ ಇನ್ನೊಬ್ಬ ಬಾಲಕ ತಕ್ಷಣ ಮನೆಗೆ ಹೋಗಿ ವಿಷಯ ತಿಳಿಸಿದಾಗಲೇ ವಿಷಯ ಗೊತ್ತಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೆರೆಯತ್ತ ಧಾವಿಸಿ ಬಳಿಕ ಗರಗ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೂವರು ಮಕ್ಕಳ ಶವಗಳನ್ನು ಹೊರ ತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ತಹಸೀಲ್ದಾರ್ ಸಹ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಮುಂದೆ ಸುಂದರ ಜೀವನ ಕಂಡುಕೊಳ್ಳಬೇಕಿದ್ದ ಮಕ್ಕಳು ಬೆಳೆಯುವ ಹಂತದಲ್ಲೇ ಈ ರೀತಿ ದುರಂತ ಅಂತ್ಯ ಕಂಡಿದ್ದಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.
