ಬೆಂಗಳೂರು,ಜೂ.4- ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ದೇವರಾಜ ಅರಸು ನಗರ ನಿವಾಸಿ ಅಕ್ರಂ ಪಾಷ (45) ಕೊಲೆಯಾದ ವ್ಯಕ್ತಿ. ಇವರು ಜೆಸಿ ರಸ್ತೆಯಲ್ಲಿ ಕಾರುಗಳ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದರು.
ರಾತ್ರಿ ಕಾರ್ಯಕ್ರಮದ ನಿಮಿತ್ತ ಚಾಮರಾಜ ಪೇಟೆಗೆ ಹೋಗಿದ್ದ ಅಕ್ರಂ ಪಾಷ ಅವರು, ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ರಾತ್ರಿ 11.30 ರಲ್ಲಿ ಜೆಜೆನಗರ ಟಿಪ್ಪು ಚೌಕ ಸಮುದಾಯ ಭವನದ ಬಳಿ ಬರುತ್ತಿದ್ದರು. ಆ ಸಂದರ್ಭದಲ್ಲಿ ಆರೋಪಿ ಖಾಲಿದ್ ಮತ್ತು ಆತನ ಸ್ನೇಹಿತರು ಬೈಕ್ ಅಡ್ಡಗಟ್ಟಿ ಅಕ್ರಂ ಪಾಷ ಜೊತೆ ಜಗಳವಾಡಿದ್ದಾರೆ. ಒಂದು ಹಂತದಲ್ಲಿ ಖಾಲಿದ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಇರಿತದಿಂದ ಗಂಭೀರ ಗಾಯಗೊಂಡು ಅಕ್ರಂ ಪಾಷ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಕ್ರಂ ಪಾಷ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆಂಬ ವಿಚಾರಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಜೆಜೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
