ಬೆಂಗಳೂರು,ಜು.30-ಕೈಕಾಲು ಚೆನ್ನಾಗಿದ್ದರೂ ವಿಕಲಚೇತನನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಯುವಕ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಆರ್ ಗೇಟ್ ಬಳಿಯ ಐಟಿಐ ಲೇಔಟ್ನಲ್ಲಿ ಮುಖೇಶ್ (20) ಎಂಬ ಯುವಕ ಕೈ ಕಾಲು ಚೆನ್ನಾಗಿದ್ದರೂ ಸುಲಭವಾಗಿ ಹಣ ಪಡೆಯುವ ದುರಾಸೆಯಿಂದ ಕುಂಟುತ್ತಾ ನಟಿಸುತ್ತಿದ್ದನು.
ಐಷರಾಮಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಕುಂಟುತ್ತಾ ಭಿಕ್ಷಾಟನೆ ಮಾಡುತ್ತಿದ್ದ ಬಗ್ಗೆ ಅನುಮಾನಗೊಂಡು ಸ್ಥಳೀಯರು ಆತನ ಚಲನ ವಲನ ಗಮನಿಸಿದಾಗ ಆತನ ಅಸಲಿಯತ್ತು ಗೊತ್ತಾಗಿದೆ.
ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ನಂತರ ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಿದ್ದಾರೆ.
