ನವದೆಹಲಿ, ಜೂ.5- ಲೋಕಸಭೆಯಲ್ಲಿ ಈ ಹಿಂದೆ ತಿರಸ್ಕೃತಗೊಂಡಿದ್ದ ಡಿಲಿಮಿಟೇಷನ್ ಬಿಲ್ ಅನ್ನು ಮತ್ತೆ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.ಈ ಬಾರಿ ಮಸೂದೆ ಪಾಸ್ ಮಾಡಿಸಿ ಕೊಳ್ಳಲು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಮತ್ತಿತರ ಪಕ್ಷಗಳ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ.
ಟಿಎಂಸಿ ಸಂಸದರು ಸರ್ಕಾರದ ಪ್ರಸ್ತಾಪಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಚರ್ಚೆಗೆ ತಯಾರಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಇದೇ ವೇಳೆ, ಬಿಲ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದ ಡಿಎಂಕೆ ಕೂಡ ಈ ಬಾರಿ ವಿರೋಧಿ ನಿಲುವು ತೋರಿಸದೆ, ಸರ್ಕಾರದ ಪರಿಷ್ಕೃತ ಮುದ್ರಣಕ್ಕೆ ಕಾಯುತ್ತಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಏಪ್ರಿಲ್ 16 ರಿಂದ 18ರವರೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾನೂನು ನಾರಿ ಶಕ್ತಿ ವಂದನ ಅಧಿನಿಯಮ ಅನ್ನು 2029ರೊಳಗೆ ಜಾರಿಗೆ ತರುವ ಗುರಿಯೊಂದಿಗೆ ಬಿಲ್ ಮಂಡಿಸಲಾಗಿತ್ತು. ಇದರಲ್ಲಿ ಡಿಲಿಮಿಟೇಷನ್ ಅಂದರೆ ಜನಸಂಖ್ಯೆ ಬದಲಾವಣೆಗೆ ಅನುಗುಣವಾಗಿ ಮತಕ್ಷೇತ್ರಗಳ ಮರುರಚನೆಯನ್ನು ಹೊಸ ಜನಗಣತಿ ಇಲ್ಲದೆಯೇ ಕೈಗೊಳ್ಳುವ ಪ್ರಸ್ತಾಪವೂ ಇತ್ತು. ಆದರೆ ಬಿಲ್ ಅಗತ್ಯ ಬಹುಮತ ಪಡೆಯಲು ವಿಫಲವಾಗಿತ್ತು.
