ಬೆಂಗಳೂರು, ಡಿ.8- ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಬೇಕು ಎಂದು ಹೇಳುವವರನ್ನು ಮೆಂಟಲ್ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಹೈದರಾಬಾದ್ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ನ ಕಾಂಗ್ರೆಸ್ ಮುಖಂಡರಾದ ನವಜೋತ್ ಸಿಂಗ್ ಸಿಧು ಅವರ ಪತ್ನಿ ನೀಡಿರುವ ಹೇಳಿಕೆಗೆ ಸಿಡಿಮಿಡಿ ವ್ಯಕ್ತಪಡಿಸಿದರು.ಹೇಳಿಕೆ ನೀಡಿದವರನ್ನು ಯಾವುದಾದರೂ ಒಳ್ಳೆಯ ಮಾನಸಿಕ ಆರೋಗ್ಯ ಚಿಕಿತ್ಸೆ ನೀಡುವ ಆಸ್ಪತ್ರೆಗೆ ದಾಖಲಿಸೋಣ ಎಂದು ಹೇಳಿದರು.
ಸದ್ಯಕ್ಕೆ ನಾನು ಗ್ಲೋಬಲ್ ಸಮಿಟ್ನಲ್ಲಿ ಭಾಗವಹಿಸಲು ಹೈದರಾಬಾದ್ಗರ ಹೋಗುತ್ತಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಲು ಇಂದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಎಲ್ಲದಕ್ಕೂ ರಾಜ್ಯ ಸರ್ಕಾರದ ಮೇಲೆ ದೂರುವ ಬಿಜೆಪಿಯವರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.
ಮೆಕ್ಕೆಜೋಳ, ಕಬ್ಬು ಬೆಲೆ ಕುಸಿತವಾದಾಗ ರಾಜ್ಯ ಸರ್ಕಾರ ದುಬಾರಿ ತೀರ್ಮಾನಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಈವರೆಗೂ ಬಾಯಿ ಬಿಟ್ಟಿಲ್ಲ. ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಎಲ್ಲದಕ್ಕೂ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎನ್ನುತ್ತಿದ್ದಾರೆ. ಹಾಗಿದ್ದರೆ ಕೇಂದ್ರ ಸರ್ಕಾರದ ಜವಾಬ್ದಾರಿ ಏನು ಎಂದು ಕಿಡಿಕಾರಿದರು.
ಬಿಜೆಪಿಯ ಸಂಸದರು ಏಕೆ ಮೌನವಾಗಿದ್ದಾರೆ? ಕಬ್ಬು ಖರೀದಿಸುವ ಎಫ್ ಆರ್ ಪಿ ನಿಗದಿ ಮಾಡಬೇಕಿರುವುದು, ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಈವರೆಗೂ ಏಕೆ ನಿರ್ಧಾರ ತೆಗೆದುಕೊಂಡಿಲ್ಲ? ಕೇಂದ್ರ ತೀರ್ಮಾನ ತೆಗೆದುಕೊಂಡರೆ ಅದರಂತೆ ಪರಿಹಾರ ಪಾವತಿಸಲು ರಾಜ್ಯ ಸರ್ಕಾರ ಸಿದ್ಧವಿದೆ.
ಬಸವರಾಜ್ ಬೊಮಾಯಿ ಸೇರಿದಂತೆ ಬಿಜೆಪಿಯ ಸಂಸದರು ಸಂಸತ್ ನಲ್ಲಿ ಧ್ವನಿ ಎತ್ತಿಲ್ಲ, ಕೇಂದ್ರ ಕೃಷಿ ಸಚಿವರು ಅಥವಾ ಪ್ರಧಾನಿ ಅವರನ್ನು ಭೇಟಿ ಮಾಡಿಲ್ಲ ಏಕೆ? ಎಂದು ಪ್ರಶ್ನಿಸಿದರು. ನೀರಾವರಿ ಯೋಜನೆಗಳಲ್ಲಿ ನಾವು ಇತಿಹಾಸ ನಿರ್ಮಿಸಿದ್ದೇವೆ. ಈ ಹಿಂದೆ ಯಾವ ಸರ್ಕಾರಳೂ ನಮಂತೆ ಅಭಿವೃದ್ಧಿಯ ಕೆಲಸಗಳನ್ನು ಮಾಡಿಲ್ಲ. ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿ, ಜಲ ಸಂಪನೂಲ ಇಲಾಖೆಯ ಅಭಿವೃದ್ಧಿ ಬಗ್ಗೆ ತೆಗೆದುಕೊಂಡ ತೀರ್ಮಾನಗಳನ್ನು ವಿವರಿಸುತ್ತೇನೆ ಎಂದರು.
