ಬೆಂಗಳೂರು, ಜೂ. 11- ಮಾದಕವಸ್ತು ಹಾವಳಿಯನ್ನು ಬೇರು ಸಮೇತ ಕಿತ್ತುಹಾಕಲು 8-10 ದಿನಗಳಲ್ಲಿ ನೀಲ ನಕ್ಷೆ ರೂಪಿಸಿ, ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕ ವ್ಯಸನ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಮಾಧ್ಯಮಗಳ ಮುಂದೆ ಹೇಳಿದರೆ ಸಾಧ್ಯವಾಗುವುದಿಲ್ಲ, ಇದು ಸೂಕ್ಷ್ಮ ವಿಚಾರ. ನೀಲ ನಕ್ಷೆಯೊಂದಿಗೆ ಕೆಲಸ ಮಾಡಬೇಕಿದೆ ಎಂದರು.
ಮಾದಕ ವಸ್ತುಗಳು ಎಲ್ಲಿಂದ, ಹೇಗೆ ಬರುತ್ತಿವೆ? ಅವುಗಳ ಹಿಂದಿರುವ ಹಣಕಾಸಿನ ವ್ಯವಹಾರಗಳು, ಡ್ರಗ್ ಪೆಡ್ಲರ್ಗಳು, ಅಂತಾರಾಷ್ಟ್ರೀಯ ವಿದ್ಯಮಾನಗಳು, ರಾಷ್ಟ್ರ-ಅಂತಾರಾಷ್ಟ್ರದ ಜೊತೆಗೆ ರಾಜ್ಯದಲ್ಲಿ ಎಲ್ಲೆಲ್ಲಿ ಮಾದಕವಸ್ತು ಹಾವಳಿ ಇದೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದರು.
ಬೆಂಗಳೂರಿಗೆ ಸೀಮಿತವಾಗಿ ಡ್ರಗ್ಸ್ ವ್ಯವಹಾರ ನಡೆಯುವುದಿಲ್ಲ. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲೂ ನೆಟ್ವರ್ಕ್ಗಳಿವೆ. ಅಂತಾರಾಷ್ಟ್ರೀಯ ಮೂಲದಿಂದ ಸರಬರಾಜು ಆಗುತ್ತಿದೆ. ಇದನ್ನೆಲ್ಲಾ ತಿಳಿದುಕೊಂಡು ಬೇರು ಸಹಿತ ಕಿತ್ತುಹಾಕಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದರು.
ಗೃಹ ಇಲಾಖೆಯೊಂದರಿಂದಲೇ ಇದು ಸಾಧ್ಯವಾಗುವುದಿಲ್ಲ, ಸಾರ್ವಜನಿಕರು, ಸಂಘ ಸಂಸ್ಥೆಗಳು ಮಾಹಿತಿ ನೀಡಬೇಕು. ಎನ್ಜಿಓಗಳು ಕೈ ಜೋಡಿಸಬೇಕು ಇದು ನಿರಂತರವಾದ ಪ್ರಕ್ರಿಯೆ ಎಂದರು.
ಡ್ರಗ್ಸ್ ಮುಂದ್ರಾಪೋರ್ಟ್ನಿಂದ ಹೆಚ್ಚಾಗಿ ಕಳ್ಳ ಮಾರ್ಗದ ಮೂಲಕ ಆಗಮಿಸುತ್ತಿರುವುದು ಗೊತ್ತಿದೆ. ಆ ಬಂದರು ಯಾರಿಗೆ ಸೇರಿದ್ದು? ಕೇಂದ್ರ ಗೃಹಸಚಿವರಿಗೆ ಇದೆಲ್ಲಾ ಗೊತ್ತಿಲ್ಲವೇ? ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ವಿರುದ್ಧ ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡರೆ ಯಶಸ್ಸು ಸಾಧಿಸಲು ಸಾಧ್ಯ. ಈ ವಿಷಯವಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರು ಕಸ ವಿಲೇವಾರಿ ಟೆಂಡರ್ನಲ್ಲಿ 10 ಸಾವಿರ ಕೋಟಿ ರೂ. ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದಾರೆ. ಜನರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಮುಖ್ಯಮಂತ್ರಿಯವರು ಯಾವುದೇ ರೀತಿಯ ತನಿಖೆಗಾದರೂ ಸಿದ್ಧ ಎಂದು ಹೇಳಿದ್ದಾರೆ.
ಅಶೋಕ್ ಅವರು ಸೂಕ್ತ ದಾಖಲೆ ಇದ್ದರೆ, ಮಾಧ್ಯಮಗಳ ಮೂಲಕ ಸ್ಪಷ್ಟವಾಗಿ ಹೇಳಬಹುದಿತ್ತು. ಕಸದ ಮಾಫಿಯಾವನ್ನು ಉಳಿಸಿ, ಬೆಳೆಸಿದ್ದು, ಬಿಜೆಪಿಯವರು. ಇನ್ನೂ ಟೆಂಡರ್ ಆಗಿಲ್ಲ, ಆಗಲೇ ಆರೋಪ ಮಾಡುತ್ತಿದ್ದಾರೆ. ಅಶೋಕ್ ಅವರು ಬೆಂಗಳೂರು ಉಸ್ತುವಾರಿಯಾಗಿದ್ದಾಗ ಏನು ಮಾಡಿದ್ದರು?. ಅವರು ಮಾಡಿದ ಗಂಟುಗಳನ್ನು ಬಿಚ್ಚುತ್ತಾ ಹೋದರೆ ಎಲ್ಲವೂ ಹೊರಗೆ ಬರುತ್ತದೆ ಎಂದು ಎಚ್ಚರಿಸಿದರು.
ಬಿಡದಿ ಪ್ರಕರಣದಲ್ಲಿ ರೈತರ ವಿರುದ್ಧ ತಪ್ಪಾಗಿ ಎಫ್ಐಆರ್ ದಾಖಲಿಸಿದ್ದರೆ, ಅದನ್ನು ಹಿಂಪಡೆಯಲು ನಮ ಸರ್ಕಾರ ಸಿದ್ಧವಿದೆ. ಬಿಡದಿ ಬಳಿ ರೈತರ ಇಚ್ಛೆಗೆ ವಿರುದ್ಧವಾಗಿ ಭೂ ಸ್ವಾಧೀನ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.ನಮ ಸರ್ಕಾರ ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶಗಳನ್ನು ನೀಡುತ್ತದೆ. ಒಂದು ವೇಳೆ ತಾರತಮ್ಯವಾಗಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದರು.
