ನವದೆಹಲಿ,ಜೂ.26- ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆಧಾರರಹಿತ ಪೋಸ್ಟರ್ ಅಭಿಯಾನ ಮುಂದುವರೆಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೆ ಮತ್ತು ಕಾಂಗ್ರೆಸ್ ಪಕ್ಷದ ಕಚೇರಿ ಮುಂದೆಯೇ ನಾವೂ ಪೋಸ್ಟರ್ಗಳನ್ನು ಅಂಟಿಸಬೇಕಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡೆಗಳ ಮೇಲೆ ಪೋಸ್ಟರ್ಗಳನ್ನು ಅಂಟಿಸುವುದು ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿ ಮತ್ತು ನೈತಿಕ ಅಧಃಪತನವನ್ನು ತೋರಿಸುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರು ಈ ಬಗ್ಗೆ ಆಕ್ರೋಶಗೊಂಡಿದ್ದಾರೆ. ನವದೆಹಲಿಗೆ ಬಂದು ರಾಜ್ಯ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಮತ್ತು ಇನ್ನಿತರೆ ಅಕ್ರಮಗಳ ಬಗ್ಗೆ ಪೋಸ್ಟರ್ಗಳನ್ನು ಅಂಟಿಸುತ್ತೇವೆ ಎಂದು ಬಂದಿದ್ದರು. ಅವರೆಲ್ಲರನ್ನು ಕುಮಾರಸ್ವಾಮಿ ಅವರು ಸಮಾಧಾನ ಮಾಡಿ ವಾಪಸ್ ಕಳುಹಿಸಿದರು ಎಂದು ಹೇಳಿದ್ದಾರೆ.
ಕಾಂಗ್ರೆಸ್ನವರ ಸಂಸ್ಕೃತಿ ನಮ್ಮ ಪಕ್ಷಕ್ಕೆ ಬರುವುದು ಬೇಡ. ಅವರು ಇಂತಹ ಕಿಡಿಗೇಡಿ ಪೋಸ್ಟರ್ಗಳನ್ನು ಅಂಟಿಸುತ್ತಿರುವುದು ಇದೇ ಮೊದಲಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದೇವೆ ಎನ್ನುವ ಪಕ್ಷವೊಂದರ ಕಾರ್ಯಕರ್ತರು ಮತ್ತು ಮುಖಂಡರ ಕೆಟ್ಟ ವರ್ತನೆ ಬಗ್ಗೆ ಜನರ ಮುಂದೆ ಹೇಳೋಣ ಎಂದು ಕಾರ್ಯಕರ್ತರನ್ನು ಕೇಂದ್ರ ಸಚಿವರು ಸಮಾಧಾನಪಡಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಆದರೆ ನಮ ನಾಯಕರ ವಿರುದ್ಧ ಇದೇ ರೀತಿಯ ಕೀಳು ಮಟ್ಟದ ಪೋಸ್ಟರ್ಗಳನ್ನು ಅಂಟಿಸುವುದನ್ನು ಮುಂದುವರಿಸಿದರೆ ನಾವು ರಾಹುಲ್ ಗಾಂಧಿ ಮನೆಯ ಗೋಡೆಗಳ ಮೇಲಿನಿಂದಲೇ ಪೋಸ್ಟರ್ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಅವರು ಕಟುವಾಗಿ ಹೇಳಿದ್ದಾರೆ.
