ನವದೆಹಲಿ, ಜುಲೈ 1-ನಕಲಿ ಔಷಧ ತಯಾರಿಕಾ ಜಾಲದ ತನಿಖೆಗೆ ಸಂಬಂಧಿಸಿದ 3 ಕೋಟಿ ರೂ ಲಂಚ ಬೇಡಿಕೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ದೀಪಕ್ ಗಹ್ಲಾವತ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
ಅಪರಾಧ ನಡೆದ ಸಂದರ್ಭದಲ್ಲಿ ದೀಪಕ್ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದಲ್ಲಿ ಪ್ರಾದೇಶಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪುದುಚೇರಿಯ ಉದ್ಯಮಿಯೊಬ್ಬರಿಗೆ ಸಿಬಿಐ ತನಿಖೆಯಲ್ಲಿ ಅನುಕೂಲಕರ ಫಲಿತಾಂಶ ದೊರಕಿಸುವುದಾಗಿ ಭರವಸೆ ನೀಡಿ, ಅದಕ್ಕಾಗಿ 3 ಕೋಟಿ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
ಸಿಬಿಐ ಅಧಿಕಾರಿಗಳ ಮೇಲೆ ತಮ ಪ್ರಭಾವ ಬಳಸಿ ತನಿಖೆಯ ದಿಕ್ಕು ಬದಲಾಯಿಸುವುದಾಗಿ ಉದ್ಯಮಿಗೆ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.ಈ ಪ್ರಕರಣದ ತನಿಖೆಯು ಜೂನ್ನಲ್ಲಿ ಸಿಬಿಐ ನಡೆಸಿದ ಬಲೆ ಬೀಸುವ ಕಾರ್ಯಾಚರಣೆಯಿಂದ ಆರಂಭವಾಗಿತ್ತು.
ಈ ಕಾರ್ಯಾಚರಣೆಯಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್ ಹಾಗೂ ಮಧ್ಯವರ್ತಿಯೆಂದು ಆರೋಪಿಸಲಾದ ರಾಜ್ಕುಮಾರ್ ಅವರನ್ನು ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ ಪ್ರದೀಪ್ ಸಿಂಗ್, ರಾಜ್ಕುಮಾರ್ ಹಾಗೂ ಉದ್ಯಮಿ ಎನ್. ರಾಜಾ ವಿರುದ್ಧವೂ ಸಿಬಿಐ ಎಫ್ಐಆರ್ ದಾಖಲಿಸಿದೆ.
