ಬೆಂಗಳೂರು, ಜು. 1- ಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಗೆ ಮತ್ತೊಂದು ವಿಘ್ನ ಎದುರಾಗಿದ್ದು, ಆಡಳಿತ ಪಕ್ಷದ ಶಾಸಕರೇ ಪಕ್ಷ ತೊರೆಯುವ ಬೆದರಿಕೆ ಹಾಕಿದ್ದಾರೆ. ತುಮಕೂರು ಜಿಲ್ಲೆಯಿಂದ ಹೇಮಾವತಿಯ ನದಿಯ ನೀರನ್ನು ಕೊಳವೆ ಮಾರ್ಗದ ಮೂಲಕ ಕುಣಿಗಲ್ ಮತ್ತು ಮಾಗಡಿ ಭಾಗದ ಕೆರೆಗಳಿಗೆ ಹರಿಸಲು 1 ಸಾವಿರ ಕೋಟಿ ರೂ. ವೆಚ್ಚದ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಬಂದರೆ, ಗುಬ್ಬಿ ಮತ್ತು ತುಮಕೂರು ತಾಲ್ಲೂಕಿಗೆ ಕುಡಿಯುವ ಹಾಗೂ ಕೃಷಿ ಚಟುವಟಿಕೆಗೆ ನೀರಿನ ಕೊರತೆಯಾಗಲಿದೆ ಎಂಬ ಕಾರಣಕ್ಕಾಗಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಪ್ರತಿಭಟನೆಯಿಂದಾಗಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಯೋಜನೆ ಡಿ.ಕೆ.ಶಿವಕುಮಾರ್ ಅವರ ಮಹತ್ವಕಾಂಕ್ಷಿ ಗುರಿಯಾಗಿದೆ. ಡಿ.ಕೆ.ಶಿವಕುಮಾರ್ ಅವರ ಆಪ್ತ ಶಾಸಕರಾಗಿರುವ ಕುಣಿಗಲ್ನ ಎಚ್.ಡಿ.ರಂಗನಾಥ್, ಮಾಗಡಿಯ ಎಚ್.ಸಿ.ಬಾಲಕೃಷ್ಣ ಅವರ ಕ್ಷೇತ್ರಗಳಿಗೆ ನೀರು ಹರಿಸಲು ಕಳೆದ 8 ವರ್ಷದಿಂದಲೂ ಸತತ ಪ್ರಯತ್ನಗಳು ನಡೆಯುತ್ತಿವೆ. ಈ ಯೋಜನೆಗೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಾಗಿರುವ ಗುಬ್ಬಿಯ ಎಸ್.ಆರ್.ಶ್ರೀನಿವಾಸ್, ಮಧುಗಿರಿಯ ಕೆ.ಎನ್.ರಾಜಣ್ಣ ಪ್ರಬಲ ವಿರೋಧ ಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಯೋಜನೆ ವಿಚಾರವಾಗಿ ಅಸ್ಪಷ್ಟ ನಿಲುವು ಹೊಂದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದಲ್ಲಿ ನಾನೂ ಸಚಿವನಾಗಿದ್ದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಡಿ.ಕೆ.ಶಿವಕುಮಾರ್ ಜಲಸಂಪನೂಲ ಸಚಿವರಿದ್ದರು. ಹೇಮಾವತಿ ಎಕ್್ಸಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಅನುಮೋದನೆ ನೀಡಲು ಮುಂದಾದಾಗ ನಾನು ಪ್ರಬಲ ವಿರೋಧ ಮಾಡಿದ್ದೆ. ಕುಮಾರಸ್ವಾಮಿಯವರು ನನ್ನ ಮನವಿಗೆ ಸ್ಪಂದಿಸಲಿಲ್ಲ, ಅಂದಿನಿಂದಲೇ ಅವರೊಂದಿಗೆ ಇರಿಸು-ಮುರಿಸು ಆರಂಭವಾಯಿತು, ಪಕ್ಷ ಬಿಡಲು ಅದೇ ಕಾರಣವೂ ಆಯಿತು ಎಂದು ಹೇಳಿದ್ದಾರೆ.
ಭೂಗತ ಮಾರ್ಗದ ಪೈಪ್ಲೇನ್ ಬದಲಾಗಿ ಕಾಲುವೆಗಳನ್ನು ಅಗಲೀಕರಣ ಮಾಡಿ ನೀರು ಹರಿಸುವಂತೆ ನಾನು ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಆಗ ನನ್ನ ಮಾತಿಗೆ ಬೆಲೆ ಸಿಗಲಿಲ್ಲ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ನಮದೇ ಸರ್ಕಾರ ಇದೆ. ಈ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಸರಿಯಲ್ಲ ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ. ಆದರೆ ಜನರಿಗೆ ಅನ್ಯಾಯವಾಗುವುದಾದರೆ ತಾವು ಪ್ರತಿಭಟನೆ ನಡೆಸಲು ಹಿಂದೆ-ಮುಂದೆ ನೋಡುವುದಿಲ್ಲ. ಜನರ ಜೊತೆ ಇರುವುದು ನನ್ನ ಕರ್ತವ್ಯ. ಅಗತ್ಯ ಬಂದರೆ ಪಕ್ಷ ತೊರೆಯಲೂ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಎಕ್್ಸಪ್ರೆಸ್ ಲಿಂಕ್ ಕೆನಾಲ್ ನಿಷ್ಪಪ್ರಯೋಜಕ ಯೋಜನೆ. ಅದರಿಂದ ಯಾರಿಗೂ ಅನೂಕೂಲವಿಲ್ಲ, ಬೆಟ್ಟಕ್ಕೆ ಕಲ್ಲು ಹೊರುವ ವ್ಯರ್ಥ ಪ್ರಯತ್ನ ಎಂದು ಹಲವು ಬಾರಿ ಹೇಳಿದ್ದೇನೆ. ಅದನ್ನು ಮೀರಿ ಯೋಜನೆ ಜಾರಿಗೊಳಿಸಲು ಮುಂದಾದರೆ ನಾನು ಜನ ಹಿತರಕ್ಷಣೆ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಹೇಳಿದ್ದಾರೆ.
